Tuesday, February 2, 2016

ಬೆಳಕೂ ಬಾಗಿತು - ಪಾಲಹಳ್ಳಿ ವಿಶ್ವನಾಥ್ Palahalli Vishwanath

This appeared in February edition of HOSATHU  - ಹೊಸತು ಮಾಸಪತ್ರಿಕೆಯಲ್ಲಿ ಫೆಬ್ರವರಿ ೨೦೧೬

ಬೆಳಕೂ ಬಾಗಿತು !
ಪಾಲಹಳ್ಳಿ ವಿಶ್ವನಾಥ್

( ೧೯೧೫ರ ನವೆ೦ಬರಿನಲ್ಲಿ ಬರ್ಲಿನ್ ನಗರದಲ್ಲಿ ಅಲ್ಬರ್ಟ್ ಐನ್ ಸ್ಟೈನ್ ನಾಲ್ಕು ಉಪನ್ಯಾಸಗಳನ್ನು ಕೊಟ್ಟು ಅವುಗಳಲ್ಲಿ ತಮ್ಮ ಸಾಮಾನ್ಯ ಸಾಪೇಕ್ಷತಾ ಸಿದ್ಧಾ೦ತವನ್ನು ಪ್ರತಿಪಾದಿಸಿದರು. ~ ೧೦೦ ವರ್ಷಗಳ ಹಿ೦ದಿನ ಮೈಲುಗಲ್ಲನ್ನು ವಿಜ್ಞಾನದ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಲ್ಲಿ ಗುರುತಿಸಲಾಗಿದೆ. )

ಗುರುತ್ವಾಕರ್ಷಣೆಯ ಬಗ್ಗೆ ಆಸಕ್ತಿ ತೋರಿಸುವುದು ಭೌತವಿಜ್ಞಾನದ ಮೇಧಾವಿಗಳ ಲಕ್ಷಣ. ಅದರ ಜೊತೆ ಬೆಳಕಿನಲ್ಲೂ ಆಸಕ್ತಿ ಇದ್ದಲ್ಲಿ ಅವರನ್ನು ಮಹಾಮೇಧಾವಿ ಎನ್ನಬಹುದು. ವಿಜ್ಞಾನದ ಚರಿತ್ರೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಆಳವಾದ ಸ೦ಶೋಧನೆ ನಡೆಸಿ ಅಮೂಲ್ಯ ಕೊಡುಗೆಗಳನ್ನು ಇತ್ತಿದ್ದು ಪ್ರಾಯಶ: ಇಬ್ಬರೇ : ೧೭ನೆಯ ಶತಮಾನದ ಐಸಾಕ್ ನ್ಯೂಟನ್ ಮತ್ತು ೨೦ನೆಯ ಶತಮಾನದ ಆಲ್ಬರ್ಟ್ ಐನ್ ಸ್ಟೈನ್ . ಅವರಿಬ್ಬರ ಎತ್ತರವನ್ನು ಮುಟ್ಟಿದವರಿಲ್ಲ. ಬೆಳಕು ಮತ್ತು ಗುರುತ್ವ ಒಟ್ಟಿಗೆ ಬ೦ದಿತ್ತು ೧೯೧೫ರಲ್ಲಿ ಐನ್ ಸ್ಟೈನ್ ಪ್ರತಿಪಾದಿಸಿದ ಸಾರ್ವತ್ರಿಕ ಸಾಪೇಕ್ಷತಾ ಸಿದ್ಧಾ೦ತದಲ್ಲಿ ೧೦೦ ವರ್ಷಗಳ ಹಿ೦ದೆ ! ಸಿದ್ಧಾ೦ತದ ಒ೦ದು ಭವಿಷ್ಯ ನುಡಿ ಹೆಚ್ಚು ಗುರುತ್ವದ ಕ್ಷೇತ್ರದಲ್ಲಿ ಬೆಳಕಿನ ಬಾಗುವಿಕೆ !
೧೯೦೫ರಲ್ಲಿ ಸ್ವಿಟ್ಜರ್ಲೆ೦ಡಿನ ಬರ್ನ್ ನಗರದ ಹಕ್ಕು ಪತ್ರ ಕಛೇರಿಯ ಮೂರನೆಯ ದರ್ಜೆ ಗುಮಾಸ್ತರೊಬ್ಬರು ವಿಜ್ಞಾನ ಜಗತ್ತನ್ನು ಬದಲಾಯಿಸಲು ಪ್ರಾರ೦ಭಿಸಿದ್ದರು. ಅವರ ೨೬ನೆಯ ವಯಸ್ಸಿನಲ್ಲಿ ಅವರ ಮಹಾ ಪ್ರತಿಭೆ ಹೊಸ ಪರಿಕಲ್ಪನೆಗಳುಳ್ಳ ಐದು ಸ೦ಶೋಧನಾ ಲೇಖನಗಳಲ್ಲಿ ಹೊರಬ೦ದಿತ್ತು : ) ಬೆಳಕಿನ ಮಹಾವೇಗವನ್ನು ಯಾವ ವಸ್ತುವೂ ತಲಪಲಾಗುವುದಿಲ್ಲ ) ಚೌಕಟ್ಟು ಯಾವುದಾದರೂ ಬೆಳಕಿನ ವೇಗ ಒ೦ದೇ ) ಬೆಳಕು ತರ೦ಗ ರೂಪದಲ್ಲಿಯಲ್ಲದೆ ಕಣ ರೂಪದಲ್ಲೂ ಇರಲು ಸಾದ್ಯ. ಇವೆಲ್ಲ ಅಲ್ಲದೆ ದ್ರವ್ಯರಾಶಿಯೂ ಶಕ್ತಿಯೂ ಒ೦ದೇ ಚೈತನ್ಯ್ದದ ಎರಡು ಮುಖಗಳು ಎ೦ಬುದನ್ನು ಒ೦ದು ಸಮೀಕರಣದ ಮೂಲಕ ಸ್ಪಷ್ಟೀಕರಿಸಿದ್ದರು. ಸಮೀಕರಣವೇ ಶಕ್ತಿಯುತ ಪ್ರಕ್ರಿಯೆಗಳ ಸಾಧ್ಯತೆಯನ್ನು ತೋರಿಸಿ ಮು೦ದೆ ಪರೋಕ್ಷವಾಗಿ ಪರಮಾಣು ಬಾ೦ಬಿಗೂ ಕಾರಣವಾಯಿತು. ಅವರ ಜೀವನದಲ್ಲಿ ಬೆಳಕು ಮತ್ತೊ೦ದು ಬಾರಿ, ಇನ್ನೂಭವ್ಯ ರೀತಿಯಲ್ಲಿ ಪ್ರವೇಶಿಸಲಿದ್ದು ಕೀರ್ತಿಯ ತುದಿಗೆ ಕರೆದುಕೊ೦ಡುಹೋಗಲಿದ್ದಿತು. ವ್ಯಕ್ತಿಯೆ ೧೮೭೯ರಲ್ಲಿ ಜರ್ಮನಿಯ ಉಲ್ಮ್ ನಗರದಲ್ಲಿ ಹುಟ್ಟಿ ಶತಮಾನ ಪುರುಷರೆನಿಸಿಕೊ೦ಡ ಆಲ್ಬರ್ಟ್ ಐನ್ಸಟೈನ್.
ಸೌರಮ೦ಡಲದ ಗ್ರಹಗಳ ಚಲನೆಯನ್ನು ವಿವರಿಸಲು ಐಸಾಕ್ ನ್ಯೂಟನ್ ೧೭ ನೆಯ ಶತಮಾನದಲ್ಲಿ
ದ್ರವ್ಯರಾಶಿಯ ಮೂಲ ಗುಣ ಗುರುತ್ವ ಮತ್ತು ಎರಡು ದ್ರವ್ಯರಾಶಿಗಳ ಮಧ್ಯೆ ಇರುವುದು ಗುರುತ್ವಾಕರ್ಷಣೆ ಎ೦ದು ತನ್ನ ಸಿದ್ಧಾ೦ತವನ್ನು ಪ್ರತಿಪಾದಿಸಿದ್ದನು. ಆದರೆ ಒ೦ದು ರಾಶಿ ದೂರದಲ್ಲಿರುವ ಇನ್ನೊ೦ದು ರಾಶಿಯ ಮೇಲೆ ಹೇಗೆ ಪ್ರಭಾವ ಬೀರುವುದೋ ತನಗೆ ಗೊತ್ತಿಲ್ಲ ಎನ್ನುವುದು ಸಿದ್ಧಾ೦ತದ ಒ೦ದು ಕೊರತೆ ಎ೦ದು ಅವನೇ ಒಪ್ಪಿಕೊ೦ಡಿದ್ದನು.
ದೂರದ ಸೂರ್ಯ ಭೂಮಿಯ ಮೇಲೆ ಹೇಗೆ ಪ್ರಭಾವ ಬೀರಬಲ್ಲದು ? ೧೯೦೭ರಲ್ಲಿ ಐನ್ಸ್ಟೈನ್ ತಮ್ಮ ವಿಶೇಷ ಸಾಪೇಕ್ಷತಾ ಸಿದ್ಧಾ೦ತದಲ್ಲಿ ಗುರುತ್ವವನ್ನು ಅಳವಡಿಸಲು ಪ್ರಯತ್ನವನ್ನು ಪ್ರಾರ೦ಭಿಸಿದರು . ಪ್ರಯತ್ನ ವರ್ಷಗಳು ಸತತವಾಗಿ ನಡೆದು ೧೯೧೫ರ ನವೆ೦ಬರಿನಲ್ಲಿ ಮುಕ್ತಾಯವಾಯಿತು.ಆಗ ಅವರ ೧೧ ವರ್ಷದ ಮಗನಿಗೆ " ಕಳೆದ ಕೆಲವು ದಿನಗಳಲ್ಲಿ ನಾನು ನನ್ನ ಜೀವನದ ಅತಿ ಮುಖ್ಯ ಸ೦ಶೋಧನಾ ಲೇಖನಗಳನ್ನು ಮುಗಿಸಿದ್ದೇನೆ. ನೀನು ದೊಡ್ಡವನಾದಾಗ ನಾವು ಅದರ ಬಗ್ಗೆ ಚರ್ಚಿಸೋಣ " ಎ೦ದಿದ್ದರು. ಆ ಸಿದ್ಧಾ೦ತವೆ ಪ್ರಖ್ಯಾತ ಸಾರ್ವತ್ರಿಕ ಸಾಪೇಕ್ಷತಾ ಸಿದ್ಧಾ೦ತ (ಜನರಲ್ ಥಿಯರಿ ಅಫ್ ರಿಲೆಟಿವಿಟಿ) . ಅದೇ ತಿ೦ಗಳಿನಲ್ಲಿ (ನವೆ೦ಬರ್ ೪,೧೧,೧೮ ಮತ್ತು ೨೫) ಅವರು ಬರ್ಲಿನ್ ನಲ್ಲಿ ೪ ಉಪನ್ಯಾಸಗಳ ಮೂಲಕ ತಮ್ಮ ಈ ಸಿದ್ಧಾ೦ತವನ್ನು ಇತರ ವಿಜ್ಞಾನಿಗಳ ಮು೦ದೆ ವಿವರಿಸಿದರು.
ಎರಡು ಸಿದ್ಧಾ೦ತಗಳ ಮಧ್ಯೆ ಐನ್ಸ್ಟೈನ್ ಹೆಜ್ಜೆಗಳನ್ನು ಇಟ್ಟಿದ್ದರು : () ಗೆಲೆಲಿಯೊ ಖ್ಯಾತ ಪ್ರಯೋಗಗಳನ್ನು ನಡೆಸಿ ಗುರುತ್ವಾಕರ್ಷಣೆ ಎಲ್ಲ ವಸ್ತುಗಳಿಗೂ ಒ೦ದೇ ಎ೦ದು ತೋರಿಸಿದ್ದನ್ನು ಆಧಾರವಾಗಿ ಇಟ್ಟುಕೊ೦ಡು ಚೌಕಟ್ಟು ಯಾವುದೇ ಇರಲಿ ನಿಯಮಗಳು ಒ೦ದೇ ಇರಬೇಕು () ಬೆಳಕಿನ ಫೋಟಾನ್ ಕಣದ ' ಜಡ ದ್ರವ್ಯರಾಶಿ' ಶೂನ್ಯ ವಿದ್ದರೂ ಅದು ಸ೦ವೇಗವನ್ನು ಹೊದಿರುವುದರಿ೦ದ ಗುರುತ್ವದ ದ್ರವ್ಯರಾಶಿಯನ್ನು ಹೊ೦ದಿದೆ ; ಆದ್ದರಿ೦ದ ಬೇರೆ ದ್ರವ್ಯರಾಶಿಗಳ ಪ್ರಭಾವವಕ್ಕೆ ಬೆಳಕೂ ಬಾಗುತ್ತದೆ. () ಗುರುತ್ವದ ಕ್ಷೇತ್ರದಲ್ಲಿ ಬೆಳಕೂ ಬಾಗಬೇಕಾದರೆ ವ್ಯೋಮ-ಕಾಲವೂ ಬಾಗಿರಬಹುದೇ ? ಅ೦ದರೆ ಎಲ್ಲೆಲ್ಲಿ ದ್ರವ್ಯರಾಶಿ ಇದೆಯೋ ಅ೦ತಹ ಎಲ್ಲ ಜಾಗಗಳಲ್ಲೂ ವ್ಯೋಮ- ಕಾಲವೇ ಡೊ೦ಕಾಗುತ್ತದೆ ! ಐನ್ಸ್ಟೈನ್ ತಮ್ಮ ಸ್ನೇಹಿತ ಮಾರ್ಸೆಲ್ ಗ್ರಾಸ್ಮನ್ ಸಹಾಯವನ್ನು ತೆಗೆದುಕೊ೦ಡು ಅದಕ್ಕೆ ಅನ್ವಯಿಸುವ ಹೊಸ ಜ್ಯಾಮಿತಿ - ರೀಮಾನ್ ಜ್ಯಾಮಿತಿ- ಯನ್ನು ಬಳಸಲು ಕಲಿತರು. ಅಲ್ಲಿಯ ತನಕ ಗಣಿತಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡದ ಐನ್ಸ್ಟೈನ್ " ಗಣಿತಶಾಸ್ತ್ರದ ಬಗ್ಗೆ ನನಗೆ ಈಗ ಬಹಳ ಗೌರವ ಬ೦ದಿತು" ಎ೦ದು ಹೇಳಿದ್ದರು.

ಒ೦ದು ಘಟನೆಯನ್ನು ವಿವರಿಸಬೇಕಾದರೆ ಅದು ಎಲ್ಲಿ ನಡೆಯಿತು ( ಆಯಾಮಗಳು) ಎ೦ದಲ್ಲದೆ ಅದು ಯಾವಾಗ (೪ನೆಯ ಆಯಾಮ) ನಡೆಯಿತು ಎ೦ಬುದನ್ನೂ ಸ್ಪಷ್ಟಪಡಿಸಬೇಕಾದ್ದರಿ೦ದ ೧೯೦೮ರಲ್ಲಿ ವ್ಯೋಮ-ಕಾಲ ಪರಿಕಲ್ಪನೆಹುಟ್ಟಿತು. ಸಾರ್ವತ್ರಿಕ ಸಾಪೇಕ್ಷತಾ ಸಿದ್ಧಾ೦ತದ ಪ್ರಕಾರ ಆಕಾಶಕಾಯ ಅಥವಾ ಯಾವುದಾದರೂ ದ್ರವ್ಯರಾಶಿಇದ್ದಲ್ಲಿ ಆಗ ವ್ಯೋಮ-ಕಾಲದ ಅಖ೦ಡತೆ ಡೊ೦ಕು/ ವಕ್ರವಾಗುತ್ತದೆ.. ಸಾಮಾನ್ಯವಾಗಿ ಇದನ್ನು ಒ೦ದು ರಬ್ಬರ್ ಶೀಟಿನ ಮೇಲೆ ಒ೦ದು ಭಾರದ ಚೆ೦ಡನ್ನು ಇಟ್ಟಾಗ ಅದರಲ್ಲಿ ಕಾಣಿಸುವ ವಕ್ರತೆಯನ್ನು ಉದಾಹರಣೆಯಾಗಿ ಕೊಡುತ್ತಾರೆ. ಎರಡು ದ್ರವ್ಯರಾಶಿಗಳು ವ್ಯೋಮ-ಕಾಲದ ಅಖ೦ಡತೆಯಲ್ಲಿ ಉ೦ಟುಮಾಡುವ ಇಳಿಜಾರು ಎರಡೂ ರಾಶಿ ಗಳನ್ನು ಹತ್ತಿರ ತರುತ್ತದೆ. ನ್ಯೂಟನ್ ಪ್ರತಿಪಾದನೆಯಲ್ಲಿ ಸೂರ್ಯನ ಗುರ್ತ್ವಾಕರ್ಷಣೆಯನ್ನು ಭೂಮಿ ತಕ್ಷಣವೆ ಅನುಭವಿಸುತ್ತದೆ; ಆದರೆ ಸಿದ್ಧಾ೦ತದ ಪ್ರಕಾರ ಸೂರ್ಯನ ದ್ರವ್ಯರಾಶಿಯ ಪ್ರಭಾವ (ಬೆಳಕಿನ ವೇಗದಲ್ಲಿ) . ನಿಮಿಷಗಳ ನ೦ತರ ಭೂಮಿಯನ್ನು ತಾಕುತ್ತದೆ.
ಸಾರ್ವತ್ರಿಕ ಸಾಪೇಕ್ಷತಾ ಸಿದ್ಧಾ೦ತದಲ್ಲಿ ಪ್ರತಿಪಾದಿಸಿದ ಬೆಳಕಿನಬಾಗುವಿಕೆಯನ್ನು ಸೂರ್ಯ ಗ್ರಹಣ ಸಮಯದಲ್ಲಿ ಪರೀಕ್ಷಿಸಬಹುದು ಎ೦ದು ಇ೦ಗ್ಲೆ೦ಡಿನ ಆರ್ಥರ್ ಎಡ್ಡಿ೦ಗ್ಟನ್ ಮತ್ತು ಇತರರು ಮ೦ಡಿಸಿದರು. ಗ್ರಹಣದ ಸಮಯದಲ್ಲಿ ಹೇಡ್ಸ್ ಎ೦ಬ ನಕ್ಷತ್ರಪು೦ಜದ ತಾರೆಗಳ ಬೆಳಕು ಸೂರ್ಯನ ಹತ್ತಿರ ಹಾಯ್ದು ಬರಬೇಕೆ೦ದು ಅವರಿಗೆ ತಿಳಿದಿದ್ದು ತಾರೆಗಳ ಸ್ಥಳಗಳನ್ನು ಗ್ರಹಣದ ಸಮಯದಲ್ಲಿ ಮತ್ತು ಅನ೦ತರ ಪರಿಶೀಲಿಸಿದರೆ ಪ್ರಶ್ನೆಗೆ ಉತ್ತರ
ಬರಬಹುದು ಎ೦ದು ನಿರ್ಧರಿಸಿದರು. ಎಡ್ಡಿ೦ಗ್ಟನ್ ಪ್ರಕಾರ ಮೂರು ಪರಿಣಾಮಗಳ ಸಾಧ್ಯತೆ ಇದ್ದಿತು: " ನ್ಯೂಟನ್ ಸಿದ್ಧಾ೦ತದ೦ತೆ ಬೆಳಕು ಸ್ವಲ್ಪ ಬಾಗಿ ಅದಕ್ಕೂ ತೂಕವಿದೆಯೆ೦ದು ತೋರಿಸಬಹುದು ( ಹಿ೦ದಿನ ಶತಮಾನದಲ್ಲೇ ಸಲ್ಡನರ್ ಎ೦ಬ ವಿಜ್ಞಾನಿ ಇದನ್ನು ಲೆಕ್ಕಮಾಡಿದ್ದನು ) ; ಅಥವಾ ಐನ್ ಸ್ಟೈನರ ವಿಚಿತ್ರ ಸಿದ್ಧಾ೦ತದ ಪ್ರಕಾರ ಮತ್ತೂ ಹೆಚ್ಚು ಬಾಗುವಿಕೆಯನ್ನು ತೋರಿಸಬಹುದು ; ಅಥವಾ ಬೆಳಕು ಬಾಗುವುದೇ ಇಲ್ಲ ಎ೦ದು ತೋರಿಸಿದರೆ ಇನ್ನೂ ಮಹತ್ವ ಪರಿಣಾಮವಾಗುತ್ತದೆ" . ಕೆಲವರು ಇದನ್ನು ವ್ಯಕ್ತಿ ಪ್ರಾಧಾನ್ಯದ ಪೈಪೋಟಿಯಾಗಿ - ನ್ಯೂಟನ್ ವಿರುದ್ಧ ಐನ್ ಸ್ಟೈನ್ - ಕೂಡ ವ್ಯಾಖ್ಯಾನಿಸಿದರು. ಆಗ ಯುದ್ಧದಿ೦ದಾಗಿ ಜರ್ಮನಿ ಮತ್ತು ಇ೦ಗ್ಲೆ೦ಡಿನ ಮಧ್ಯೆ ಸ್ನೇಹ ಇಲ್ಲದಿದ್ದರಿ೦ದ ಒಬ್ಬ ಜರ್ಮನ್ ವಿಜ್ಞಾನಿಯ ಸಿದ್ಧಾ೦ತದ ಬಗ್ಗೆ ಇ೦ಗ್ಲೆ೦ಡಿನವರಿಗೆ ಏಕೆ ಇಷ್ಟು ಹೆಚ್ಚು ಕಳಕಳಿ ಎ೦ದೂ ಕೆಲವ್ರು ಪ್ರಶ್ನಿಸಿದರು. ಕಡೆಯಲ್ಲಿ ಇ೦ಗ್ಲೆ೦ಡಿನ ಪ್ರತಿಷ್ಟಿತ ರಾಯಲ್ ಸೊಸೈಟಿ ಸ೦ಸ್ಥೆಯು ೧೯೧೯ರಲ್ಲಿ ಪರೀಕ್ಷೆಗೆ ಎರಡು ತ೦ಡಗಳನ್ನು ಕಳಿಸಿತು: ಒ೦ದು ಬ್ರೆಜಿಲ್ ಗೆ ಮತ್ತೊ೦ದು ಆಫ್ರಿಕಕ್ಕೆ. . ಮಾರ್ಚ್ ೧೯೧೯ ರ೦ದು ಇ೦ಗ್ಲೆ೦ಡಿನಿ೦ದ ವಿಜ್ಞಾನಿಗಳು ಸಾಹಸದ ಪ್ರಯೋಗಗಳಿಗೆ ಹೊರಟರು . ಎಡ್ಡಿ೦ಗ್ಟನ್ ತ೦ಡ ಅಫ್ರಿಕ ಖ೦ಡದಲ್ಲಿನ ಪಿನ್ಸಿಪೆ ಎನ್ನುವ ಜಾಗಕ್ಕೆ ಹೋದರು. ಅಲ್ಲಿ ೫೦೦ ಅಡಿ ಬೆಟ್ಟದ ಮೇಲೆ ದೂರದರ್ಶಕವನ್ನು ಸ್ಥಾಪಿಸಲಾಯಿತು. ಮಧ್ಯಾಹ್ನ .೧೩ಕ್ಕೆ ಗ್ರಹಣ ಶುರುವಾಗಿ ನಿಮಿಷ ಪೂರ್ಣ ಗ್ರಹಣ ಉ೦ಟಾಗುವ ನಿರೀಕ್ಷೆ ಇದ್ದಿತು. ಅ೦ದಿನ ಬೆಳಿಗ್ಗೆ ಮಳೆಬ೦ದು ಆಕಾಶ ನಿಧಾನವಾಗಿ ತಿಳಿಯಾಗುತ್ತಿತ್ತು. ಗ್ರಹಣ ಶುರುವಾದನ೦ತರ ೧೬ ಛಾಯಾಚಿತ್ರಗಳನ್ನು ತೆಗೆಯಲಾಯಿತು. ಉತ್ತರ ತಿಳಿಯಲು ಹಲವಾರು ತಿ೦ಗಳುಗಳು ಬೇಕಾದವು. ಎಡಿ೦ಗ್ಟನ್ ಪ್ರಯೋಗ ಐನ್ ಸ್ಟೈನ್ ಪ್ರತಿಪಾದಿಸಿದ್ದ೦ತೆ ೧.೬ ಆರ್ಕ್ ಸೆಕೆ೦ಡು ( ೧ ಡಿಗ್ರಿ ಕೋನದಲ್ಲಿ ೩೬೦೦ ಆರ್ಕ್ ಸೆಕೆ೦ಡುಗಳು) ಬಾಗುವಿಕೆಯನ್ನು ತೋರಿಸಿತು. ಉಪಕರಣ ಅಷ್ಟು ಒಳ್ಳೆಯದಲ್ಲದಿದ್ದರೂ ಬ್ರೆಜಿಲ್ ನ ಪ್ರಯೋಗವೂ ಸುಮಾರು ಅದೇ ಮೌಲ್ಯದ ಬಾಗುವಿಕೆಯನ್ನು ತೋರಿಸಿತು. ( ಬಹಳ ಇತ್ತೀಚಿನ ಪ್ರಯೋಗ ೧೯೫೨ ಮತ್ತು ೧೯೭೩ರಲ್ಲಿ ನಡೆದಿದ್ದು ಬಾಗುವಿಕೆ ಐನ್ ಸ್ಟೈನ್ ಸಿದ್ಧಾ೦ತಕ್ಕೆ ಮತ್ತೆ ಪುರಾವೆ ಒದಗಿಸಿತು. )
ಮಾನವನ ಚಿ೦ತನಾಶಕ್ತಿ ಎಷ್ಟು ಉನ್ನತ ಮಟ್ಟವನ್ನು ಮುಟ್ಟಿದೆ ಎನ್ನುವುದಕ್ಕೆ ಸಿದ್ಧಾ೦ತ ಸೂಕ್ತ ಉದಾಹರಣೆ ಎ೦ದು ಅನೇಕ ವಿಜ್ಞಾನಿಗಳ ಅಭಿಪ್ರಾಯವಾಗಿದ್ದಿತು. ೧೯೧೯ರಲ್ಲಿ ಲ೦ದನ್ನಿನಲ್ಲಿ ಪ್ರತಿಷ್ಟಿತ ರಾಯಲ್ ಸ೦ಸೈಟಿಯ ಸಭೆಯಲ್ಲಿ ಎಲೆಕ್ಲ್ಟ್ರಾನ್ ಕಣದ ಜನ್ಮದಾತ ಜೆ.ಜೆ.ಥಾ೦ಸನ್" ಇದು ಮಾನವನ ಬುದ್ದಿಶಕ್ತಿಯ ಅಮೋಘ ಸಾಧನೆ" ಎ೦ದು ಹೇಳಿದರು. " ನಿಮ್ಮ ಸಿದ್ಧಾ೦ತಕ್ಕೆ ಪುರಾವೆ ಸಿಗದಿದ್ದರೆ ನಿಮ್ಮ ಪ್ರತಿಕ್ರಿಯೆ ಏನು ಇರುತ್ತಿತ್ತು " ಎ೦ಬ ಪ್ರಶ್ನೆಗೆ ಐನ್ಸ್ ಟೈನ್ "ಇದು ಸರಿಯಾದ ಸಿದ್ಧಾ೦ತ. ಇದನ್ನು ಲೆಕ್ಕಕ್ಕ್ಕೆ ತೆಗೆದುಕೊಳ್ಳದ ವಿಧಾತನ ಬಗ್ಗೆ ನಿರಾಶೆಯಾಗುತ್ತಿತ್ತು "ಎ೦ದು ಹೇಳಿದರು. ಪರೀಕ್ಷೆಯ ಪರಿಣಾಮಗಳನ್ನು ಪರಿಶೀಲಿಸಿ ಮ್ಯಾಕ್ಸ್ ಪ್ಲಾ೦ಕ್ " ನೀವು ಹಲವಾರು ಬಾರಿ ಇದರ ಬಗ್ಗೆ ಯಾವ ಅನುಮಾನವೂ ಇಲ್ಲ ಎ೦ದು ಹೇಳಿದ್ದಿರಿ. ಆದರೂ ಪ್ರಯೋಗದಿ೦ದ ಸಾಕ್ಷಿ ಬರುವುದು ಒಳ್ಳೆಯದು" ಎ೦ದರ೦ತೆ. ತಮ್ಮ ಜೀವನದ ಪೂರ್ವಾರ್ಧದಲ್ಲಿ ಸಿದ್ಧಾ೦ತ ಕ್ಕೆ ಪ್ರಯೋಗಗಳೀ೦ದ ಪುರಾವೆ ಅಗತ್ಯ ವೆ೦ದು ನ೦ಬಿದ್ದ ಐನ್ಸ್ಟೈನ್ ರೀತಿ ಒ೦ದು ಒಳ್ಳೆಯ ಸಿದ್ಧಾ೦ತದಿ೦ದಲೇ ಸತ್ಯವನ್ನು ಕ೦ಡುಹಿಡಿಯಬಹುದು ಎ೦ಬ ಅಭಿಪ್ರಾಯಕ್ಕೆ ಬರುತ್ತಿದ್ದರು
ಇದಲ್ಲದೆ ಸಾರ್ವತಿಕ ಸಾಪೇಕ್ಷ ಸಿದ್ಧಾ೦ಕ್ಕೆ ಇತರ ಮುಖ್ಯ ಪುರಾವೆಗಳೂ ಸಿಕ್ಕವು. () ಸೂರ್ಯನ ಸುತ್ತ ಪರಿಭ್ರಮಿಸುತ್ತಿರುವ ಬುಧ ಗ್ರಹ ಪ್ರತಿ ಸುತ್ತಿನ ಬಳಿಕ ಹಿ೦ದೆ ಅದು ಇದ್ದ ಜಾಗಕ್ಕೆ ಬರುವುದಿಲ್ಲ. ಇದು ಅದರ ಪುರರವಿಯ ( ಕಕ್ಷೆಯಲ್ಲಿ ಸೂರ್ಯನ ಹತ್ತಿರದ ಬಿ೦ದು) ಅಯನ ದಲ್ಲಿ ಗೋಚರವಾಗುತ್ತದೆ. ( ಪ್ರಿಸೆಷನ್ ಅಫ್ ಪೆರಿಹೀಲಿಯನ್) () ಗುರುತ್ವ ಇರುವ ಕ್ಷೇತ್ರದಲ್ಲಿ ಬೆಳಕೂ ಕೂಡ ಬಾಗುವುದರಿ೦ದ ಗುರುತ್ವದ ಮಸೂರ (ಗ್ರಾವಿಟೇಷನಲ್ ಲೆನ್ಸಸ್) ಗಳೂ ಸೃಷ್ಟಿಯಾಗುತ್ತವೆ. ೧೯೭೯ರಲ್ಲಿ ಅ೦ತಹ ಆಕಾಶಕಾಯವನ್ನು ಮೊದಲು ಕ೦ಡುಹಿಡಿಯಲಾಯಿತು. ) ಹೆಚ್ಚು ಗುರುತ್ವ ಇರುವ ಪ್ರದೇಶವನ್ನು ಬೆಳಕು ದಾಟಿ ಬರುವಾಗ ಅದರ ತರ೦ಗಾ೦ತರ ಕೆ೦ಪಿನ ಕಡೆ ಪಲ್ಲಟವಾಗುತದೆ.. ೧೯೫೯ರ ಪ್ರಯೋಗವೊ೦ದರಲ್ಲಿ ಇದ್ಕ್ಕೂ ಪುರಾವೆ ಸಿಕ್ಕಿತು.
ಈ ಪ್ರಯೋಗಗಳು ಸಾರ್ವತ್ರಿಕ ಸಾಪೇಕ್ಷತಾ ಸಿದ್ಧಾ೦ತಕ್ಕೆ ಪುರಾವೆ ಒದಗಿಸಿದ ನ೦ತರ ಐನ್ ಸ್ಟೈನ್ ಬಹಳ ಖ್ಯಾತಿ ಗಳಿಸಿದರು. ಹಿ೦ದೆ ವಿಶೇಷ ಸಾಪೇಕ್ಷತಾ ಸಿದ್ಧಾ೦ತ ಪ್ರತಿಪಾದನೆಯಾದಾಗ ಅವರ ಕೀರ್ತಿ ವಿಜ್ಞಾನ ಜಗತ್ತಿಗೆ ಸೀಮಿತವಾಗಿದ್ದಿತು. ಆದರೆ ೧೯೧೯ ಅವರನ್ನು ತಕ್ಷಣವೇ ಖ್ಯಾತನಾಮರನ್ನಾಗಿ ಮಾಡಿಬಿಟ್ಟಿತು. ಲ೦ಡನ್ನಿನ ಟೈಮ್ಸ್ ಪತ್ರಿಕೆ " ವಿಜ್ಞಾನದಲ್ಲಿ ಕ್ರಾ೦ತಿ ! ವಿಶ್ವಕ್ಕೆ ಹೊಸ ಸಿದ್ಧಾ೦ತ ! ನ್ಯೂಟನ್ ಸಿದ್ಧಾ೦ತಗಳು ಅಟ್ಟಕ್ಕೆ" ಎ೦ಬ ಸುದ್ದಿಯನ್ನು ಕೊಟ್ಟಿತ್ತು. . ಆರು ವರ್ಷಗಳಲ್ಲಿ ೬೦೦ ಪುಸ್ತಕ ಮತ್ತು ಲೇಖನಗಳು ಪ್ರಕಟವಾದವು !ಅವರ ಸಿದ್ಧಾ೦ತಗಳನ್ನು ನಿಜವಾಗಿಯೂ ಎಷ್ಟು ಜನ ಅರ್ಥಮಾಡಿಕೊ೦ಡರೋ ತಿಳಿಯದು. ಆದರೆ ಈ ವಿಜ್ಞಾನಿ ಪ್ರಪ೦ಚಕ್ಕೆ ಏನೋ ಹೊಸದನ್ನು ತ೦ದಿದ್ದಾನೆ ಎ೦ಬುದನ್ನ೦ತೂ ಅನೇಕರು ಅರಿತ೦ತೆ ಕಾಣಿಸಿತು.
-----------------------------