Thursday, August 11, 2016

ಶೂನ್ಯದ ಬೆನ್ನೆತ್ತಿ ( ಸ೦ಪೂರ್ಣ ನಿರ್ವಾತ?) - ಪಾಲಹಳ್ಳಿ ವಿಶ್ವನಾಥ್ Palahalli Vishwanath

appeared in Sep-Oct 2016 VIGYANA LOKA

ಸ೦ಪೂರ್ಣ ನಿರ್ವಾತ ?
ಪಾಲಹಳ್ಳಿ ವಿಶ್ವನಾಥ್
( ಭೌತಿಕ ಜಗತ್ತಿನಲ್ಲಿ sಸ೦ಪೂರ್ಣ ಶೂನ್ಯ/ನಿರ್ವಾತ ಸಾಧ್ಯವೆ? ಪಾಸ್ಕಲ್ ರಿ೦ದ ಐನ್ಸ್ ಟೈನರ ತನಕ ನಿರ್ವಾತದ ವಿವಿಧ ವ್ಯಾಖ್ಯಾನಗಳು !)

" ಸೆಪ್ಟೆಂಬರ್ ೧೯ರ ಬೆಳಿಗ್ಗೆ ೮ ಗಂಟೆಗೆ ಬೆಟ್ಟದ ತಪ್ಪಲಿಗೆ ಹೋದೆವು. ಈ ಪ್ರಯೋಗ ನಡೆಸಿಕೊಡಲು ಬುದ್ಧಿವಂತರಾಗಿದ್ದು ಆಸಕ್ತಿಯೂ ಇದ್ದ ಹಲವು ಜನರು ನನ್ನ್ನ ಜೊತೆ ಇದ್ದರು. ನನ್ನ ಬಳಿ ಇದ್ದ ಎರಡು ಉಪಕರಣಗಳಲ್ಲೂ ಪಾದರಸದ ಮಟ್ಟ ೭೧೧ ಮಿಲಿಮೀಟರ್ ಇದ್ದಿತು. ನಂತರ ಒಂ ದು ಸಾಧನವನ್ನು ಧರ್ಮಶ್ರದ್ಧೆಯುಳ್ಳ ಫಾದರ್ ಚಾಸ್ವ್ಟಿನ್ ರವರಿಗೆ ಕೊಟ್ಟು ಆಗಾಗ್ಗೆ ಪಾದರಸದ ಮಟ್ಟವನ್ನು ದಾಖಲಿಸುತ್ತಿರಿ ಎಂದು ಕೇಳಿಕೊಂಡೆ .... ಇನ್ನೊಂದು ಸಾಧನವನ್ನು ನನ್ನ ಬಳಿಯೇ ಇರಿಸಿಕೊಂಡು ಜೊತೆಯವರೊಂದಿಗೆ ಬೆಟ್ಟವನ್ನು ಹತ್ತಿದೆ. ಅಲ್ಲಿ ತಲುಪಿದಾಗ ಕೊಳವೆಯಲ್ಲಿ ಪಾದರಸದ ಮಟ್ಟ ೬೨೭ ಮಿಲಿಮೀಟರ್ ಎಂದು ಕಾಣಿಸಿತು. ಪರ್ವತದ ಮೇಲೆ ಹಲವಾರು ಕಡೆ ಪಾದರಸದ ಮಟ್ಟ ಇದೇ ಮೌಲವನ್ನು ಹೊಂದಿತ್ತು. ಆದ್ದರಿಂದ ಮೇಲೆ ಮತ್ತು ಕೆಳಗಿನ ಗಾಳಿಯ ಒತ್ತಡದಲ್ಲಿ ೮೪ ಮಿಮೀ ವ್ಯತ್ಯಾಸ ಕಾಣಿಸಿದೆ "
. ಪ್ಯಾರಿಸ್ ನಗರಕ್ಕೆ ೪೪೦ಕಿಮೀ ದೂರದಲ್ಲ್ಲಿದ್ದು ಕ್ಲೇರ್ಮಾಂಟ್ ಎನ್ನುವ ಊರಿನ ಬಳಿ ಯ ೧೩೦೦ ಮೀಟರ್ ಎತ್ತರದ ಬೆಟ್ಟದ ಮೇಲೆ ೧೬೪೮ರಲ್ಲಿ ನಡೆದ ಪ್ರಯೋಗವಿದು. ಶತಮಾನಗಳಿಂದ ನಿಗೂಢವಾಗಿದ್ದ ಶೂನ್ಯದ ರಹಸ್ಯವನ್ನು ತಿಳಿಯಲು ನಡೆಸಿದ ಈ ಪ್ರಯತ್ನ ವಿಜ್ಞಾನದ ಇತಿಹಾಸದಲ್ಲಿ ಪ್ರಯೋಗ ಗಳ ಅವಶ್ಜ್ಯಕತೆಯನ್ನು ಎತ್ತಿ ತೋರಿಸಿತು.
ಪ್ರಪಂಚದಲ್ಲಿ ಏನೂ , ಅಂದರೆ ಏನೂ, ಇಲ್ಲದಿರುವ ಸ್ಥಳ ಇದೆಯೇ? ಇಲ್ಲ ಅನಿಸುತ್ತೆ ಅಲ್ಲವೆ? ಇದನ್ನೆ ಗ್ರೀಕ್ ವಿಜ್ಞಾನಿಗಳು ೨ ಸಹಸ್ರಮಾನಗಳಿಗೂ ಮುಂಚೆ ಒತ್ತಿ ಒತ್ತಿ ಹೇಳಿದರು. ಅಂತಹದ್ದು ಏನಾದರೂ ಇದ್ದರೆ ಅದಕ್ಕೆ ಶೂನ್ಯ ಅಥವಾ ನಿರ್ವಾತವೆಂಬ ಹೆಸರಿಟ್ಟು ಪ್ರಕೃತಿಗೆ ನಿರ್ವಾತವೆಂದರೆ ಆಗುವುದಿಲ್ಲ (ನೆಚರ್ ಅಭೋರ್ಸ್ ವ್ಯಾಕ್ಯುಮ್) ಎಂದು ಅರಿಸ್ಟಾಟಲ್ ಮಾತ್ತು ಇತರರು ಪ್ರಚಾರಿಸಿದರು. ಎಲ್ಲೆಲ್ಲೂ ಇರುವುದು ದ್ರವ್ಯರಾಶಿ ಮತ್ತು ಸ್ವಲ್ಪವೂ ದ್ರವ್ಯರಾಶಿ ಇರದ ಸ್ಥಳವೇ ಇಲ್ಲ ಎಂದು ಅವರ ನ೦ಬಿಕೆಯಾಗಿದ್ದು ಗ್ರೀಕರ ಹಲವಾರು ತಪ್ಪು ಕಲ್ಪನೆಗಳೊ೦ದಿಗೆ ಇದೂ ಸೇರಿಕೊಂಡಿತು. ಯೂರೋಪಿನ ನವೋದಯ ಸಮಯದಲ್ಲಿ ಅನೇಕ ಕ್ಷೇತ್ರಗಳಂತೆ ವಿಜ್ಞಾನದಲ್ಲೂ ಹೊಸಗಾಳಿ ಬೀಸಲಾರಂಭಿಸಿ ನೀರಿನ ತರಹವೇ ಗಾಳಿಯಿ೦ದಲೂ ಒತ್ತಡ ಉ೦ಟಾಗುತ್ತದೆ ಎ೦ಬ ಅಭಿಪ್ರಾಯ ಹುಟ್ಟಿತು. ೧೬ನೆಯ ಶತಮಾನದ ಕಡೆಯ ದಶಕಗಳಲ್ಲಿ ಪೀಸಾ ಮತ್ತು ಪಡುವಾ ನಗರಗಳಲ್ಲಿ ಗೆಲೆಲಿಯೊ (೧೫೬೪-೧೬೪೨) ಪ್ರಯೋಗಗಳನ್ನು ನಡೆಸಿ ಗ್ರೀಕರಿಗೆ ಚಲನ ವಿಜ್ಞಾನದ ಬಗ್ಗೆ ಇದ್ದ ಹಲವಾರು ನ೦ಬಿಕೆಗಳು ತಪ್ಪು ಎಂದು ತೋರಿಸಿ " ನಿರ್ವಾತವನ್ನು ನಾವು ಇನ್ನೂ (ಉಪಕರಣಗಳಿ೦ದ ) ಗುರುತಿಸಿಲ್ಲವಾದರಿ೦ದ ಅದು ಇದೆ ಅಥವ ಇಲ್ಲ ಎಂದು ಹೇಗೆ ಹೇಳುವುದು ? " ಎಂದು ಪ್ರಶ್ನಿಸಿದ್ದನು. ಆದ್ದರಿಂದ ಪ್ರಯೋಗಗಳೇ ನಿರ್ವಾತದ ಬಗ್ಗೆ ಕಡೆಯ ಮಾತುಗಳನ್ನು ಹೇಳಲು ಸಾಧ್ಯ ಎಂದು ವಿಜ್ಞಾನಿಗಳೆಗೆ ಅರಿವಾಗಿ ಮುಂದಿನ ಹೆಜ್ಜೆಯನ್ನು ಇಟ್ಟವನು ಗೆಲೆಲ್ಲಿಯೊವಿನ ಕಡೆಗಾಲದ ಶಿಷ್ಯ ಎವ್ಯ೦ಜಲೆಸ್ಟ ಟಾರಿಸಿಲಿ (೧೬೦೮-೧೬೪೭) .ಇಟಲಿಯಲ್ಲಿ ಗಾಳಿಯ ಬಗ್ಗೆ ಪ್ರಯೋಗಗಳಿಗೆ ಕೊಳವೆಗಳಲ್ಲಿ ನೀರನ್ನು ಬಳಸುತ್ತಿಸಿದ್ದರು. ಆದರೆ ನೀರಿಗಿ೦ತ ೧೪ರಷ್ಟು ಸಾಂದ್ರತೆ ಹೆಚ್ಚಿರುವ ಪಾದರಸವನ್ನು ಬಳಸಿಕೊಂಡಲ್ಲಿ ಕೊಳವೆಗಳು ಚಿಕ್ಕದಾಗುತ್ತವೆ. ನಾಲ್ಕು ಅಡಿ ಉದ್ದದ ಗಾಜಿನ ಕೊಳವೆಯಲ್ಲಿ
ಪಾದರಸವನ್ನು ಸುರಿದು ಬೆರಳಿನಿಂದ ಅದರ ತೆರೆದ ಭಾಗವನ್ನು ಮುಚ್ಚಿ ಅದನ್ನು ಪಾದರಸ ಇರುವ ಪಾತ್ರೆಯಲ್ಲಿ ಇರಿಸಿದಾಗ ಪಾದರಸ ದ್ರವ ಕೆಳಗೆ ಇಳಿದು ಕೊಳವೆಯ ಮೇಲು ಭಾಗ ಸ್ವಲ್ಪ ಖಾಲಿಯಾಯಿತು; ಹಾಗೂ ಕೊಳವೆಯಲ್ಲಿ ಉಳಿದ ಪಾದರಸದ ಮಟ್ಟ ೭೬ ಸೆಂಟಿಮೀಟರುಗಳು ಎಂದು ಕಂಡುಬಂದಿತು. ಇದರಿ೦ದ ಟಾರಿಸಿಲಿ ಗಾಳಿಗೆ ಒತ್ತಡವಿದೆಯೆಂದು ತೋರಿಸಿ ಕೊಳವೆಯ ಮೇಲಿನ ಖಾಲಿ ಭಾಗದಲ್ಲಿ ಇರುವುದೇ ನಿರ್ವಾತ ಎಂದು ಮಂಡಿಸಿದನು. ಹಾಗೆಯೇ ಕೊಳವೆಯಲ್ಲಿ ಪಾದರಸದ ಎತ್ತರ ದಲ್ಲಿ ಕಾಣಬರುವ ದೈನಿಕ ವ್ಯತ್ಯಾಸಗಳು ವಾತಾವರಣದ ಗಾಳಿಯ ಒತ್ತಡದ ಬದಲಾವಣೆಯಿ೦ದ ಎಂದು ಗುರುತಿಸಿದನು.
ಟಾರಿಸಿಲಿಯ ಪ್ರಯೋಗಗಳನ್ನು ಮತ್ತೂ ಸುಧಾರಿಸಿದವನು ಪ್ರಪಂಚದ ಮಹಾ ಪ್ರಭೃತಿಗಳಲ್ಲಿ ಒಬ್ಬನಾದ ಬ್ಲೈಸ್ ಪಾಸ್ಕಲ್(೧೬೨೩-೧೬೬೨) . ಟಾರಿಸಿಲಿಯಂತೆಯೇ ಅಲ್ಪಾಯುಷಿಯಾದ ಪಾಸ್ಕಲ್ ಅನೇಕ ಕ್ಷೇತ್ರಗಳಲ್ಲಿ ಮಹತ್ವದ ಆವಿಷ್ಕಾರಗಳನ್ನು ಮಾಡಿದನು. ಅವನ ಆಸಕ್ತಿಗಳಲ್ಲಿ ಮುಖ್ಯವಾದವು - ಗಣಿತ, ಭೌತವಿಜ್ಞಾನ, ಗಣಕವಿಜ್ಞಾನ, ತತ್ವಶಾಸ್ತ್ರ, ಮತ್ತು ಧರ್ಮಶಾಸ್ತ್ರ. ಅವನ ತಂದೆ ಎಟಿನ್ ಸ್ವತ: ಗಣಿತ ದಲ್ಲಿ ಅಸಕ್ತಿ ಹೊಂದಿದ್ದು ಮಗನಿಗೆ ಉತ್ತೇಜನ ಕೊಟ್ಟನು. ತನ್ನ ತಂದೆಗೆ ಅನುಕೂಲವಾಗಲೆಂದು ೧೯ನೆಯ ವರ್ಷದಲ್ಲಿ ಪ್ರಪಂಚದ ಪ್ರಥಮ ಕ್ಯಾಲ್ಕ್ಯುಲೇಟರ್ ಅನ್ನು ತಯಾರಿಸಿದನು.; ೧೯೫೦ರ ಸಮಯದ ಕ್ಯಾಲ್ಕ್ಯುಲೇಟರುಗಳು ಪಾಸ್ಕಲನ ಯಂತ್ರದ ತರಹವೇ ಇದ್ದವು ! ತನ್ನ ೩೦-೩೧ನೆಯ ವಯಸ್ಸಿನಲ್ಲಿ ಸಂಖ್ಯಾಕಲನ - ಸ್ತ್ಯಾಟ್ಸಿಟಿಕ್ಸ್ - ಶಾಸ್ತ್ರಕ್ಕೆ ಜನ್ಮ ಕೊಟ್ಟನು. ಆದರೂ ಒಂದು ಜೀವನ ಚರಿತ್ರೆಯಪ್ರಕಾರ ಗಣಿತ ಶಾಸ್ತ್ರದಲ್ಲಿ ಅವನಿಗೆ ಮತ್ತೂ ಹೆಚ್ಚು ಜ್ಞಾನವಿದ್ದು ಅವನು ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ. ೧೬೫೦ರ ನಂತರ ಅವನು ಧರ್ಮಶಾಸ್ತ್ರ ಮತ್ತು ತತ್ವಶಾಸ್ತ್ರಗಳತ್ತ ತಿರುಗಿ ಎರಡು ಪುಸ್ತಕಗಳನ್ನು - ಪೆನ್ಸೆಸ್ನ್ ಮತ್ತು ಲೆಟರ್ಸ್ - ರಚಿಸಿದನು . ಚರ್ಚಿನ ಕೆಲವು ಧಾರ್ಮಿಕ ಪರಂಪರೆಗಳನ್ನು ಖಂಡಿಸಿದ್ದ ಲೆಟರ್ಸ್ ಪುಸ್ತಕವನ್ನು ಚಕ್ರವರ್ತಿಯ ಆಜ್ಞೆಯ ಪ್ರಕಾರ ಸುಡಲಾಯಿತು; ಆದರೂ ಈ ಎರಡೂ ಪುಸ್ತಕಗಳನ್ನು ಫೆಂಚ್ ಸಾಹಿತ್ಯದ ಮೇರು ಕೃತಿಗಳೆಂದು ಪರಿಗಣಿಸಲಾಗಿದೆ. ತಾರ್ಕಿಕ ಚಿಂತನೆಗೂ ಪಾಸ್ಕಲ್ ಹೆಸರುವಾಸಿಯಾಗಿದ್ದು ವಿಧಾತನು ಇದ್ದಾನೊ ಅಥವಾ ಇಲ್ಲವೋ ಎನ್ನುವ ಬಗ್ಗೆ ಪಾಸ್ಕಲ್ ವೇಜರ್ ಎಂಬ ಒಂದು ಪಣವನ್ನೂ ಇಟ್ಟಿದ್ದನು. ಮೊದಲಿಂದಲೂ ಒಂದಲ್ಲ ಒಂದು ರೀತಿಯ ಖಾಯಿಲೆಯಿಂದ ನರಳುತ್ತಿದ್ದು ಕಡೆಯಲ್ಲಿ ಉದರದ ಕ್ಯಾನ್ಸರಿನಿಂದ ಮೃತನಾದನು. ಅವನನ್ನು ಹಠವಾದಿ, ಜಗಳಗ೦ಟ ಎಂದು ಕರೆದವರೂ ಉಂಟು. ಇಂದು ಅವನ ಹೆಸರಿನಲ್ಲಿ ಚ೦ದ್ರನಲ್ಲಿ ಕುಳಿಯೊಂದಿದೆ , ಒಂದು ಕಂಪ್ಯೂಟರ್ ಭಾಷೆಯೂ ಇದೆ.. ಇವೆಲ್ಲಾ ಅಲ್ಲದೆ ನಿರ್ವಾತ ಮತ್ತು ಗಾಳಿಯ ಒತ್ತಡದ ಬಗ್ಗೆ ಅವನ ಪ್ರಯೋಗಗಳು ಭೌತವಿಜ್ಞಾನದಲ್ಲಿ ಮಹತ್ವದ ಸ್ಥಾನವನ್ನು ಪಡೆದಿದ್ದು ಅವನ ಹೆಸರಿನಲ್ಲಿ ಒತ್ತಡಕ್ಕೆ ಒಂದು ಏಕಮಾನವೂ ಇದೆ.
ಭೂಮಿಯಿಂದ ಮೇಲೆ ಹೋಗುತ್ತ ಗಾಳಿಯ ಒತ್ತಡ ಕಡಿಮೆಯಾಗಬಹುದು ಎಂಬ ಟಾರಿಸಿಲಿಯ ಅಭಿಪ್ರಾಯವನ್ನು ಪರೀಕ್ಷಿಸಲು ಪಾಸ್ಕಲ್ ಒಂದು ಬೆಟ್ಟವನ್ನು ಆರಿಸಿ ತನ್ನ ಭಾವನ ಕೈಲಿ ಮೇಲೆ ವಿವರಿಸಿದ ಪ್ರಯೋಗವನ್ನು ನಡೆಸಿಸಿದನು. ಈ ಪ್ರಯೋಗ ಭೂಮಿಯಿ೦ದ ಮೇಲೆಹೋಗುತ್ತಾ ಗಾಳಿಯ ಒತ್ತಡ ಕಡಿಮೆಯಾಗುತ್ತದೆ ಎಂದು ತೋರಿಸಿತು. . ಇದನ್ನು ತಿಳಿದ ನಂತರ ಪ್ಯಾರಿಸ್ ನಲ್ಲೂ ಪಾಸ್ಕಲ್ ಅಲ್ಲಿಯ ಚರ್ಚಿನ ಎತ್ತರದ ಗೋಪುರ ವನ್ನು ಹತ್ತಿ ಪ್ರಯೋಗವನ್ನು ನಡೆಸಿದನು( ೩೦೦೦ ಮೀಟರಿನ ಎತ್ತರಲ್ಲಿರುವ ಲಡಾಖಿನ ಲೇಹ ಮತ್ತು ~೮೮೦೦ ಮೀಟರಿನ ಗೌರೀಶಿಖರದಲ್ಲಿ ಗಾಳಿಯ ಒತ್ತಡ ಸಮುದ್ರ ತೀರದಕ್ಕಿ೦ತ ೬೦ % ಮತ್ತು ೩೩ % ಮಾತ್ರ ) ತನ್ನ ಪ್ರಯೋಗಗಳಿ೦ದ ಪಾಸ್ಕಲ್ ಈ ನಿರ್ಧಾರಕ್ಕೆ ಬ೦ದನು " ಗಾಳಿಗೆ ತೂಕವಿದೆ; ಆ ತೂಕ ಎಲ್ಲ ಕಡೆಯೂ ಒ೦ದೇ ಇರುವುದಿಲ್ಲ. ಪರ್ವತ ಪ್ರದೇಶಗಳಲ್ಲಿ ಆ ತೂಕ ಕಡಿಮೆ ಇರುತ್ತದೆ. ಗಾಳಿಯ ತೂಕದಿ೦ದ ಒತ್ತಡ
ಉ೦ಟಾಗುತ್ತದೆ" ಇದಲ್ಲದೆ ವೈಜ್ಞಾನಿಕ ವಿಧಾನಗಳ ಬಗ್ಗೆ ಪಾಸ್ಕಲ್ ಎಚ್ಚರಕೊಡುತ್ತಾನೆ : " ರಿಸ್ಟಾಟಲಿನ ಶಿಷ್ಯರೆಲ್ಲಾ ಕಲಿತುಕೊಳ್ಳಿರಿ .. ಭೌತ ವಿಜ್ಞಾನದಲ್ಲಿ ಪ್ರಯೋಗ ಮಾತ್ರ ನಿಜ ಸ್ಥಿತಿಯನ್ನು ತೋರಿಸಬಲ್ಲದು." ಕಾಲದ ಮತ್ತೊಬ್ಬ ಮಹಾ ವಿಜ್ಞಾನಿ ಡೆಕಾರ್ಟ್ ಪಾಸ್ಕಲನ ಅಭಿಪ್ರಾಯಗಳನ್ನು ಒಪ್ಪಿಕೊಳ್ಳದೆ ಪಾಸ್ಕಲನ ತಲೆಯಲ್ಲೆಲ್ಲ್ಲ ಬರೇ ನಿರ್ವಾತ ತುಂಬಿಕೊ೦ಡಿದೆ ಎಂದು ಅವಹೇಳನೆ ಮಾಡಿದನಂತೆ!
ಕೆಲವೇ ವರ್ಷಗಳ ನಂತರ ಜರ್ಮನಿಯ ಮ್ಯಾಗ್^ಡೆನ್ಬರ್ಗ್ ನಗರದ ರಾಜಕಾರಣಿ ಮತ್ತು ವಿಜ್ಞಾನಿ ಆಟೊ ವ್ಯಾನ್ ಗ್ಯುರಿಕೆ (೧೬೦೨-೧೬೮೬) ಪ್ರಪಂಚದ ಮೊಟ್ಟಮೊದಲ ಪಂಪನ್ನು ತಯಾರಿಸಿ ನಿರ್ವಾತದ ಬಗ್ಗೆ ಮತ್ತೊಂದು ಮಹತ್ವದ ಪ್ರಯೋಗ ನಡೆಸಿದನು. ಲೋಹದ ಎರಡು ಅರ್ಧ ಗೋಳಗಳನ್ನು ಸೇರಿಸಿ ತನ್ನ ಪ೦ಪಿನಿ೦ದ ಗಾಳಿಯನ್ನು ಆದಷ್ಟೂ ಹೊರತೆಗೆದು ನಿರ್ವಾತವನ್ನು ಉಂಟುಮಾಡಿ ಗೋಳದ ಎರಡು ಕಡೆಗೆ ಕೊಂಡಿಗಳನ್ನು ಬೆಸುಗೆ ಹಾಕಿ ಬಲಪ್ರಯೋಗದಿಂದ ಅರ್ಧ ಗೋಳಗಳನ್ನು ಬೇರ್ಪಡಿಸಲು ಪ್ರಯತ್ನ ಪಟ್ಟನು. ಈ ಪ್ರಯತ್ನಕ್ಕೆ ಎಂಟೆಂಟು ಕುದುರೆಗಳನ್ನು ಬಳಸಿದರೂ ಅರ್ಧ ಗೋಳಗಳನ್ನು ಬೇರ್ಪಡಿಸಲು ಆಗಲಿಲ್ಲ. ಗಾಳಿಯ ಒತ್ತಡ ಅರ್ಧ ಗೋಳಗಳನ್ನು ಒಟ್ಟಾಗಿ ಇಟ್ಟಿತ್ತು. ಹಲವಾರು ಸ್ಥಳಗಳಲ್ಲಿ , ಇನ್ನೂ ಹೆಚ್ಚು ಸಂಖ್ಯೆಯ ಕುದುರೆಗಳನ್ನು ಬಳಸಿಕೊಂಡು , ಈ ಪ್ರಯೋಗವನ್ನು ನಡೆಸಿದ್ದು ಇವು ಮ್ಯಾಗ್ಡೆನ್ಬರ್ಗ್ ಗೋಳಗಳು ಎಂ ದು ಖ್ಯಾತಿ ಪಡೆದವು. ಅಂದಿನ ಕಾಲದಲ್ಲಿ ಗೆಲೆಲಿಯೊ, ಪಾಸ್ಕಲ್, ಗ್ಯುರಿಕೆ, ಇತ್ಯಾದಿ ವಿಜ್ಞಾನಿ ಗಳು ತಮ್ಮ ಪ್ರಯೋಗಗಳ ಸಾರ್ವತ್ರಿಕ ಪ್ರದರ್ಶನಗಳನ್ನು ನಡೆಸುತ್ತಿದ್ದರು. ವೈಜ್ಞಾನಿಕ ಪ್ರಕಟಣೆಗಳು ಹೆಚ್ಚು ಇರದಿದ್ದ ಆ ಕಾಲಗಳಲ್ಲಿ ಈ ವೀಕ್ಷಕರು ಈ ಮಹಾ ಪ್ರಯೋಗಗಳಿಗೆ ಸಾಕ್ಷಿಗಳೂ ಆಗುತ್ತಿದ್ದರು. ಇದಲ್ಲದೆ ವಿಜ್ಞಾನಕ್ಕೆ ಸಾಕಷ್ಟು ಪ್ರಚಾರವೂ ಸಿಗುತ್ತಿತ್ತು.
ನಂತರದ ಶತಮಾನಗಳಲ್ಲಿ ಆದಷ್ಟೂ ಹೆಚ್ಚು ನಿರ್ವಾತವನ್ನು ಸಾಧಿಸುವುದು ಅನೇಕ ವಿಜ್ಞಾನಿಗಳ ಧ್ಯೇಯವಾಯಿತು. ಬಾಯಲ್, ಹುಕ್, ಹಾಯ್ಘೆನ್ಸ್ ಇತ್ಯಾದಿ ವಿಜ್ಞಾನಿಗಳು ಈ ಪ್ರಯತ್ನದಲ್ಲಿ ಪಾಲುಗೊಂಡಿದ್ದರು. ಟಾರ್ ಎನ್ನುವುದು ಒತ್ತಡದ ಒಂದು ಅಳತೆಯಾಗಿದ್ದು ಸಮುದ್ರತೀರದಲ್ಲಿ ವಾತಾವರಣದ ಒತ್ತಡವನ್ನು ಪಾದರಸದ ೭೬೦ಮಿಲಿಮೀಟರ್ / ಟಾರ್ ಗಳು ಎಂದು ಪರಿಗಣಿಸಬಹುದು. ನೂರು ಕಿಮೀ ಎತ್ತರದಲ್ಲಿ ವಾತಾವರಣದ ಒತ್ತಡ ~ಮೈಕ್ರೊಟಾರ್. ಉದಾ ವ್ಯಾಕ್ಯುಮ್ ಕ್ಲೀನರ್ ನಿಂದ ೨೫ ಟಾರ್ ನಿರ್ವಾತವನ್ನು ಗಳಿಸಬಹುದು. ಸಾಧಾರಣ ಪಂಪುಗಳಿ೦ದ ಒಂದು ನ್ಯಾನೊ ಟಾರ್ ( ಬಿಲಿಯದಲ್ಲಿ ಒ೦ದು ಭಾಗ) ಸಾಧ್ಯವಾಗುತ್ತದೆ. ಈಗಿನ ಅತಿ ಉತ್ತಮ ಉಪಕರಣಗಳಿಂದ ಒ೦ದು ಪೈಕೊ ಟಾರ್ ( ಸಾವಿರ ಟ್ರಿಲಿಯದಲ್ಲಿ ಒಂದು ಭಾಗ) ನಿರ್ವಾತ ಸಾಧ್ಯವಾಗಿದೆ .ಬಾಹ್ಯಾಕಾಶದಲ್ಲಿ ಇದಕ್ಕಿಂತ ಹತ್ತುಸಾವಿರದಷ್ಟು ಕಡಿಮೆ ನಿರ್ವಾತ ಇರುವ ಸಾಧ್ಯತೆ ಇದೆ. ನಿರ್ವಾತಕ್ಕೆ ಕ್ರಮೇಣ ಅನೇಕ ಉಪಯೋಗಗಳು ಕಂಡುಬಂದವು. ೧೮೭೯ರಲ್ಲಿ ಥಾಮಸ್ ಆಲ್ವ ಎಡಿಸನ್ ಕಂಡುಹಿಡಿದ ವಿದ್ಯುತ್ ಬಲ್ಬಿನ ತಯಾರಿಕೆಗೆ ಒಂದು ಮಿಲಿಟಾರ್ (ಟಾರ್ ನ ಸಾವಿರದ ಒ೦ದು ಭಾಗ) ನಿರ್ವಾತ ಬೇಕಾಯಿತು. ಆಧುನಿಕ ಜಗತ್ತಿನಲ್ಲಿ ನಿರ್ವಾತದ ಬಳಕೆ ಎಲ್ಲೆಲ್ಲೂ ಇದ್ದು ಅದರ ಅಳತೆಯಲ್ಲಾದರೂ ಅಧ್ಯಯನದ ಪಿತಾಮಹರಾದ ಟಾರಿಸಿಲಿ ಮತ್ತು ಪಾಸ್ಕಲ್ ರನ್ನು ನೆನಪು ಮಾಡಿಕೊಳ್ಳಬಹುದು!.

ಒಳ್ಳೆಯ ಮಟ್ಟದ ನಿರ್ವಾತ ಬೇಕಾದ್ದಲ್ಲಿ ಒಂದು ಸ್ಥಳದಿ೦ದ ಅಲ್ಲಿ ಇರುವ ಎಲ್ಲ ತರಹ ದ್ರವ್ಯರಾಶಿಗಳನ್ನೂ ತೆಗೆದುಹಾಕಲು ಪ್ರಯತ್ನಿಸಬೇಕು. ಹಾಗೂ ಕೆಲವು ಕಣಗಳು ಉಳಿದುಕೊಳ್ಳಬಹುದು; ಇದು ಪ್ರಯೋಗಕ್ಕೆ ಎಟುಕುವ ಶೂನ್ಯ. ಆದರೆ ಇಂದು ಭೌತವಿಜ್ಞಾನದಲ್ಲಿ ಶೂನ್ಯಕ್ಕೆ ಮತ್ತೊಂದು ವ್ಯಾಖ್ಯಾನವಿದ್ದು ಅದು ಶೂನ್ಯಕ್ಕೆ ಚೈತನ್ಯ/ಶಕ್ತಿಯ ನ್ನು ಆವಾಹನೆ ಮಾಡುತ್ತದೆ. ಎಡ್ವರ್ಡ್ ಹಬಲ್ ೧೯೩೦ರ ದಶಕದಲ್ಲಿ ಜಗತ್ತು ವಿಸ್ತಾರವಾಗುತ್ತಿದೆ ಎಂದು ಮ೦ಡಿಸಿದನಷ್ಟೆ. ಕಳೆದ ದಶಕದಲ್ಲಿ ಜಗತ್ತಿನ ವಿಸ್ತಾರ ನಿರೀಕ್ಷಿಸಿದ್ದಕ್ಕಿ೦ತ ಹೆಚ್ಚುತ್ತಿದೆ ಎಂದು ಕ೦ಡುಬಂದು ಆ ಅವಿಷ್ಕಾರ ಇತ್ತೀಚೆಗೆ ನೊಬೆಲ್ ಪ್ರಶಸ್ತಿಯನ್ನೂ‌ ಗಳಿಸಿತು. ಈ ವೇಗೋತ್ಕರ್ಷಕ್ಕೆ ಯಾವುದೋ‌ ಅಗೋಚರ ಚೈತನ್ಯ - ಡಾರ್ಕ್ ಎನರ್ಜಿ- ಕಾರಣವೆಂದು ಈಗ ಅರ್ಥವಾಗಿದೆ. ೧೯೧೭ರಲ್ಲಿ ಆಲ್ಬರ್ಟ್ ಐನ್ಸ್ ಟೈನ್ ತಮ್ಮ ವಿಶ್ವಸಿದ್ಧಾ೦ತವನ್ನು ಪ್ರತಿಪಾದಿಸಿದಾಗ ಅವರ ಸಮೀಕರಣದಲ್ಲಿ ಒಂದು ನಿಯತಾಂಕ - ಕಾಸ್ಮೊಲಾಜಿಕಲ್ ಕಾನ್ಸ್ಟೆಂಟ್- ವನ್ನು ಸೇರಿಸಿದ್ದರು. ವಿಶ್ವ ಅಚಲ ಎ೦ಬ ನ೦ಬಿಕೆ ಆಗ ಇದ್ದಿದ್ದ್ದರಿ೦ದ ಈ ನಿಯತಾ೦ಕ ಗುರುತ್ವವನ್ನು ಎದುರಿಸಿ ವಿಶ್ವವನ್ನು ಹಿಗ್ಗಿಸುವ ಶಕ್ತಿಯ ಸ೦ಕೇತವಾಗಿದ್ದಿತು. ಆದರೆ ವಿಶ್ವ ಅಚಲವಲ್ಲ ಮತ್ತು ವಿಸ್ತಾರವಾಗುತ್ತಿದೆ ಎಂದು ತಿಳಿದ ನಂತರ ಐನ್ಸ್ ಟೈನ್ನ್ ಆ ನಿಯತಾಂಕ ಉಪಯೋಗವಿಲ್ಲ ಮತ್ತು ಅದು ನನ್ನ ತಪ್ಪು ಎಂದಿದ್ದರು. ವಿಶ್ವದ ವೇಗೋತ್ಕರ್ಷದ ಆವಿಷ್ಕಾರದ ನ೦ತರ ಐನ್ ಸ್ಟೈನರ ನಿಯತಾಂಕವನ್ನು ಅಗೋಚರ ಚೈತನ್ಯದ ಸಂಕೇತವೆಂದು ಕೆಲವು ವಿಜ್ಞಾನಿಗಳು ನಂಬುತ್ತಾರೆ. ಶೂನ್ಯದ ಚೈತನ್ಯವೇ ಅಗೋಚರ ಚೈತನ್ಯಕ್ಕೆ ಕಾರಣ ವಿರಬಹುದಾದ್ದರಿಂದ ಐನ್ ಸ್ಟೈನರ ನಿಯತಾಂಕ ಶೂನ್ಯದ ಚೈತನ್ಯನ್ನು ಪ್ರತಿನಿಧಿಸುತ್ತಿರಬಹುದಲ್ಲವೇ ಎಂದು ವಿಜ್ಞಾನಿಗಳು ಈಗ ಕೇಳುತ್ತಿದ್ದಾರೆ !
--------------------------------------------------------------------------
 
ಚಿತ್ರಗಳು
. ಪಾಸ್ಕಲ್ (೧೬೨೩-೧೬೬೨
() ಟಾರಿಸಿಲಿ ( ೧೬೦೮- ೧೬೪೭) ಯ ವಾಯುಮಾಪಕ (ಬಾರೊಮೀಟರ್
() ಆಟೊ ವಾನ್ ಗುರಿಕೆಯ ಪ್ರಯೋಗಗಳ ನೆನಪಿಗೆ ಮ್ಯಾಗ್ ಡೆ ಬರ್ಗ್ ನಗರದಲ್ಲಿ ಒ೦ದು ಶಿಲ್ಪಾಕೃತಿ 
ಚಿತ್ರ ೪. ಒತ್ತಡ ಕಡಿಮೆಯಾಗುತ್ತ ಅನಿಲದ ಮಾಲೆಕ್ಯೂಲಗಳ ಮಧ್ಯೆಯ ದೂರ ಹೆಚ್ಚಾಗುತ್ತ ಹೋಗುತ್ತದೆ: ವೈ ಅಕ್ಷಾ೦ಶದ ಅಳತೆ ಅಡಿಗಳು ( ಕೆಳಗಿನಿ೦ದ ಮೇಲಕ್ಕೆ ಮೌಲ್ಯ ಹೆಚ್ಚಾಗುತ ಹೋಗುತ್ತದೆ) ಮತ್ತು ವೈ ಅಕ್ಷಾ೦ಶ ದ ಅಳತೆ ಟಾರ್ (ಎದದಿ೦ದ ಬಲಕ್ಕೆ ಹೆಚ್ಚಾಗುತ್ತ ಹೋಗುತ್ತದೆ). ಅತಿ ಹೆಚ್ಚು ನಿರ್ವಾತದ ಮೌಲ್ಯ ೧೦**(-) ಟಾರ್ ಗೂ ಕಡಿಮೆ ಇರುತ್ತದೆ : ಅಗ ಮಾಲೆಕ್ಯೂಲಗಳ ಅ೦ತರ ೪೦ ಕಿಮೀಗೂ ಹೆಚ್ಚಿರುತ್ತದೆ . ಬಾಹ್ಯಾಕಾಶದಲ್ಲಿ ಅತಿ ಕಡಿಮೆ ( < ೧೦**(-೧೨) ಟಾರ್ ) ನಿರ್ವಾತದ ಸ೦ಭವವಿದೆ

--