Sunday, February 24, 2019

ಸೃಷ್ಟಿವಿಜ್ಞಾನ : ನಡೆದು ಬಂದ ದಾರಿ ಪಾಲಹಳ್ಳಿ ವಿಶ್ವನಾಥ್ Palahalli Vishwanath


ವಿಭವ - ವಿಜ್ಞಾನ ಪತ್ರಿಕೆಯಲ್ಲಿ  ೨೦೧೮ ಮತು ೨೦೧೯
ಸೃಷ್ಟಿವಿಜ್ಞಾನ -  ನಡೆದು ಬಂದ ದಾರಿ
ಪಾಲಹಳ್ಳಿ ವಿಶ್ವನಾಥ್ 
       ( ವಿಜ್ಞಾನ  ಬೆಳೆಯುತ್ತ ಮಾನವನಿಗೆ  ತನ್ನ ಮತ್ತು ಭೂಮಿಯ ಮಿತಿಗಳೂ ಅರಿವಾದವು.  (ಅ) ಕೋಪರ್ನಿಕಸ್ ನ   ಸೂರ್ಯಕೇಂದ್ರೀಯವಾದ (ಆ) ೨೦ನೆಯ ಶತಮಾನದ  ಎರಡನೆಯ ದಶಕದಲ್ಲಿ  ಹ್ಯಾರ್ಲೊ  ಶ್ಯಾಪ್ಲೀಯ ಸಂಶೋಧನೆಗಳೊಂದಿಗೆ  ಸೂರ್ಯ  ಈ ಕ್ಷೀರಪಥ ಗ್ಯಾಲಕ್ಸಿಯ  ಅಂಚಿನ  ಸಾಮಾನ್ಯ  ನಕ್ಷತ್ರ   ಎಂಬ ಅರಿವು  (ಇ) ಅನಂತರ ಕೆಲವೇ ವರ್ಷಗಳಲ್ಲಿ  ಎಡ್ವಿನ್ ಹಬಲ್ ಮತ್ತು ಸಂಗಡಿಗರಿಂದ  ನಮ್ಮ ಗ್ಯಾಲಕ್ಸಿಯೂ ಒಂದು ಸಾಮಾನ್ಯ   ಗ್ಯಾಲಕ್ಸಿ ಎಂಬ ಅರಿವು . ಅಂತೂ ಮನುಷ್ಯ ವಿಶ್ವದ ಸಾಮಾನ್ಯ ಗ್ಯಾಲಕ್ಸಿಯ ಸಾಮಾನ್ಯ ತಾರೆಯೊಂದರ ಗ್ರಹವೊಂದರ  ನಿವಾಸಿ    ಎಂದಾಯಿತು..  ಆ ಸಮಯದಲ್ಲಿಯೇ  ವಿಶ್ವ  ವಿಸ್ತಾರದ ಪರಿಕಲ್ಪನೆಯೊಂದಿಗೆ ಮಹಾಸ್ಫೋಟ ಸಿದ್ಧಾಂತವೂ  ಜನ್ಮ ತಾಳಿತು. ೧೯೬೦ರ ದಶಕದಲ್ಲಿ ವಿಶ್ವ ವಿಕಿರಣದ ಆನ್ವೇಷಣೆಯೊಂದಿಗೆ  ಅದಕ್ಕೆ  ಪ್ರಬಲ ಸಾಕ್ಶಿಯೂ ದೊರಕಿತು. ನಿಖರ ಪ್ರಯೋಗಗಳಿಂದ ವಿಶ್ವ ೧೩.೭ ಬಿಲಿಯ ವರ್ಷ್ಗಳ ಹಿಂದೆ ಹುಟ್ಟಿತು ಎಂದು ತಿಳಿಯಿತು. ಮಹಾಸ್ಫೋಟ ಸಿದ್ಧಾಂತದಲ್ಲಿ  ಪ್ರಗತಿಗಳು ನಡೆಯುತ್ತಲೇ  ಇದ್ದರೂ   ಆ ' ಮೊದಲ ಕ್ಷಣ  ' ದ ಬಗ್ಗೆ ಇನ್ನೂ ವಾದ ವಿವಾದಗಳು ಇದ್ದೇ ಇವೆ) 

(೧) ಹಿಂದಿನವರ  ವಿಶ್ವ  :
­  
    ಪ್ರಕೃತಿಯ ವಿದ್ಯಮಾನಗಳನ್ನು ವಿಜ್ಞಾನದ ಸಹಾಯದಿಂದ   ಅರ್ಥಮಾಡಿಕೊಳ್ಳಬಹುದೆಂಬುದು    ಗ್ರೀಕ್ ಚಿಂತನೆಯ ಹೆಗ್ಗಳಿಕೆಯಾಗಿದ್ದು   ಅಲ್ಲಿಯ ವಿದ್ವಾಂಸರು  ವೈಜ್ಞಾನಿಕ ಮನೊಧರ್ಮದ ಅವಶ್ಯಕತೆಯನ್ನು ಪ್ರತಿಪಾದಿಸಿದರು . ಗ್ರೀಕರಲ್ಲಿ  ಖ್ಯಾತರಾದವರು  ಥಾಲೆಸ್ ( ಕ್ರಿಪೂ ೬೨೪-೫೪೬), ಗಣಿತ್ಜ್ ಪೈಥಾಗರಸ್  (ಕ್ರಿಪೂ ೫೭೦-೪೯೫), ತತ್ವಶಾಸ್ತ್ರಜ್ಞ.  ಪ್ಲೇಟೋ  (ಕ್ರಿಪೂ ೪೨೮-೩೪೮), ಪ್ಲೇಟೋವಿನ  ಶಿಷ್ಯ ಸಕಲ್ ವಿದ್ಯಾ ಪಾರಂಗತ  ಅರಿಸ್ಟಾಟಲ್ ( ಕ್ರಿಪೂ ೩೮೩- ೩೨೨). ಗ್ರಹಗಳ  ಚಲನೆ  ಅಡ್ಡಾದಿಡ್ಡಿ ಎಂದು ಕಂಡುಬಂದದ್ದರಿಂದ ಗ್ರೀಕರು  ಅವುಗಳನ್ನು ' ಪ್ಲಾನೆಟ್ಸ್ ' (ಅಲೆಮಾರಿಗಳು) ಎಂದು ಕರೆದರು. ಉಷೆಯಲ್ಲಿ ಆಕಾಶದಲ್ಲಿ ಅವತರಿಸುವ ಪ್ರಕಾಶಮಾನವಾದ ಮತ್ತು   ಸಂಜೆಯ ಅಷ್ಟೇ ಪ್ರಕಾಶಮಾನವಾದ ಗ್ರಹಗಳೆರಡೂ‌  ಒಂದೇ  ಎಂದು ಪರಿಗಣಿಸಿ ಅದಕ್ಕೆ ಶುಕ್ರನೆಂಬ  ಹೆಸರು ಕೊಟ್ಟವನು  ಪೈಥಾಗರಸ್;  ಭೂಮಿ ಒಂದು  ಗೋಳವೆಂದು ಪ್ರತಿಪಾದಿಸಿದವನೂ ಅವನೇ.  ಚಂದ್ರಗ್ರಹಣದ ಸಮಯದಲ್ಲಿ  ಭೂಮಿಯ ನೆರಳು ವೃತ್ತಾಕಾರವಿರುವುದನ್ನು ಭೂಮಿಯ ಗೋಳದ ಆಕಾರಕ್ಕೆ ಸಾಕ್ಷಿ ಎಂದು ಅರಿಸ್ಟಾಟಲ್  ಪ್ರತಿಪಾದಿಸಿದನು.    
   ವೃತ್ತ ಮತ್ತು ಗೋಳಗಳನ್ನು  ಸುಂದರ ಎಂದು ಪ್ಲೇಟೋ ಮತ್ತು ಇತರರು ಗಣಿಸಿದ್ದು  ಅದೇ  ಶಾಲೆಗೆ ಸೇರಿದ್ದು ಗಣಿತದಲ್ಲಿ ಪರಿಣಿತಿ ಗಣಿಸಿದ್ದ  ಯುಡೋಕ್ಸ್ಕಸ್   ಗ್ರಹಗಳ ಚಲನೆಗಳಿಗೆ ಮೊತ್ತ ಮೊದಲ  ಮಾದರಿಯನ್ನು  ಕೊಟ್ಟನು.   ಭೂಮಿಯನ್ನು ಕೇಂದ್ರವನ್ನಾಗಿ  ಇಟ್ಟುಕೊಂಡು  ವಿವಿಧ ದೂರಗಳಲ್ಲಿ  ಅನೇಕ  ಪಾರದರ್ಶಕ  ಗೋಳಗಳಿದ್ದು , ಇತರ ಎಲ್ಲ ಆಕಾಶಕಾಯಗಳು ಆ ಗೋಳಗಳ ಮೇಲೆ    ಕೇಂದ್ರವನ್ನು  ಸುತ್ತುತ್ತವೆ.   

ಯುಡೋಕ್ಸಸ್ ನ ಮಾದರಿಯಲ್ಲಿ ೨೭ ಗೋಳಗಳಿದ್ದವು . ಅರಿಸ್ಟಾಟಲ್ ಗೀಕರ  ಈ  ಚಿಂತನೆಗಳನ್ನೆಲ್ಲಾ  ಕ್ರಮಬದ್ಧವಾಗಿ  ಬರೆದಿಟ್ಟನು..  ಆನಂತರ ಈ ಮಾದರಿಯಿಂದ  ವೀಕ್ಷಣೆಗಳಲ್ಲಿ ವ್ಯತ್ಯಾಸಗಳು  ಕಾಣುತ್ತಿದರಿಂದ       ಅಲೆಗ್ಸಾಂಡ್ರಿಯ  ನಗರದಲ್ಲಿ ಕ್ರಿ.ಶ.೨ನೆಯ ಶತಮಾನದಲ್ಲಿದ್ದ   ಕ್ಲಾಡಿಯಸ್ ಟಾಲೆಮಿ  (ಕ್ರಿ.ಶ. ೯೦-೧೬೮)  ಎಂಬ ಖಗೋಳಜ್ಞ ಗ್ರೀಕರ  ಭೂಕೇಂದ್ರಮಾದರಿಯನ್ನು   ತಿದ್ದಿ   ಗೋಳಗಳ ಸಂ ಖ್ಯೆಯನ್ನು ಹೆಚ್ಚುಮಾಡಿ ಉಪವೃತ್ತಗಳನ್ನು ಸೇರಿಸಿದನು. ಇದರಿಂದ ಈ ಮಾದರಿ ಬಹಳ ಜಟಿಲವಾದರೂ   ಅರಿಸ್ಟಾಟಲ್/ಟಾಲೆಮಿ ಭೂಕೇಂದ್ರೀಯವಾದವೆಂದು ಪ್ರಸಿದ್ಧಿ ಯಾಗಿದ್ದು  ಕ್ರಿ.ಶ.೧೬ನೆಯ ಶತಮಾನದ ತನಕ ಉಪಯೋಗದಲ್ಲಿದ್ದಿತು .        ಅನೇಕರು ಭೂಕೇಂದ್ರಮಾದರಿಯನ್ನು ಒಪ್ಪಿಕೊಂಡಿದ್ದರೂ ಹಲವರು ಅದನ್ನು ನಿರಾಕರಿಸಿ ಸೂರ್ಯಕೇಂದ್ರೀಯವಾದವನ್ನು ಪ್ರತಿಪಾದಿಸಿದ್ದು ಅವರಲ್ಲಿ ಮುಖ್ಯವಾದವನು    ಕ್ರಿ.ಪೂ ೩ನೆಯ ಶತಮಾನದ ಸಮೋಸ್ ನಿವಾಸಿ ಅರಿಸ್ಟಾರ್ಕಸ್.
   
----------------------------------------------------------- 
   










ಚಿತ್ರ ೧  : ಗ್ರೀಕರು ಪ್ರತಿಪಾದಿಸಿದ್ದ ವಿಶ್ವದ ಮಾದರಿ. ಭೂಮಿ ಮಧ್ಯದಲ್ಲಿದ್ದು  ಬೇರೆ  ಎಲ್ಲ ಆಕಾಶಕಾಯುಗಳು ವಿವಿಧ ದೂರಗಳಲ್ಲಿ ಪಾರದರ್ಶಕ ಗೋಳಗಳ ಮೇಲೆ  ಚಲಿಸುತ್ತವೆ. ಇದನ್ನು ಮೊದಲು ಪ್ರತಿಪಾದಿಸಿದವನು ಯುಡೊಕ್ಸಸ್ ; ಅನಂತರ ಅರಿಸ್ಟಾಟಲ್, ಟಾಲೆಮಿ ಮುಂತಾದವರು  ಇದನ್ನು ಸುಧಾರಿಸಿದರು ಚಿತ್ರ ೨ ;ಅರಿಸ್ಟಾಟಲ್   (ಕ್ರಿ.ಪೂ ೩೮೪-೩೨೨)
--------------------------------------------------------
ಗ್ರೀಕರಲ್ಲಿ ಖಗೋಳ ಇರುವಹಾಗೇ ಸಂಪೂರ್ಣವಾಗಿದೆಯೆಂದೂ  ಮತ್ತು ನಕ್ಷತ್ರಗಳು ದೂರದಲ್ಲಿ ಎಲ್ಲೋ ಆಚೆ ಭೂಮಿಯನ್ನು ಸುತ್ತುತ್ತಿವೆ ಎಂಬ ನಂಬಿಕೆ ಇದ್ದಿತು.  ಆದ್ದರಿಂದ ಕಾಣಿಸುವ ನಕ್ಷತ್ರಗಳನ್ನು ಬಿಟ್ಟು  ಬೇರೆ  ಆಕಾಶಕಾಯಗಳು  ಇರುವ  ಸಂಭವವನ್ನೂ  ಅವರು ನಿರಾಕರಿಸಿದ್ದರು. ಆದ್ದರಿಂದ ಆಗಾಗ್ಗೆ   ಆಕಾಶದಲ್ಲಿ

ಅವತರಿಸುತ್ತಿದ್ದ  ಸೂಪರ್ನೋವಾ   ವಿದ್ಯಮಾನಗಳ  ಮಹತ್ವವನ್ನು ಟೈಕೊಬ್ರಾಹೆಯ ತನಕ ಪಶ್ಚಿಮದಲ್ಲಿ  ಯಾರೂ ಅರ್ಥಮಾಡಿಕೊಳ್ಳಲಿಲ್ಲ.  ಆಲ್ಲದೆ ಧೂಮಕೇತುಗಳು ಕೂಡ ಭೂಮಿಯ  ವಾತಾವರಣದಲ್ಲೇ  ನಡೆಯುವ ವಿದ್ಯಮಾನ ಎಂದು ಅವರು ತಿಳಿದಿದ್ದರು. ಇದಲ್ಲದೆ   ಅರಿಸ್ಟಾಟಲ್ ಮತ್ತು ಇತರ ಗ್ರೀಕರಿಗೆ  ಆಕಾಶಕಾಯಗಳ  ಚಲನೆಗಳಿಗೂ ಭೂಮಿಯ ಮೇಲಿನ ವಿದ್ಯಮಾನಗಳಿಗೂ   ಬೇರೆ ಬೇರೆ ನಿಯಮಗಳಿರಬೇಕು ಎಂಬ ಅಭಿಪ್ರಾಯವಿದ್ದಿತು . .
       ಈ ವಿಷಯದಲ್ಲಿ ಕ್ರಿ.ಶ  ೬ನೆ ಶತಮಾನದ ಭಾರತದ  ಆರ್ಯಭಟನ ಕೊಡುಗೆ ಅಪಾರ ಮತ್ತು  ವಿಜ್ಞಾನದ  ಚರಿತ್ರೆಯಲ್ಲಿ  ಇದು ಇನ್ನೂ ಬೇರೂರದಿರುವುದು ದುರಂತ . ಅವನು ಭೂಮಿ ಗುಂಡಗಿದೆ ಎಂದು ಒತ್ತಿ ಹೇಳಿ  ಭೂಮಿ ತನ್ನ ಅಕ್ಷದ ಸುತ್ತ ತಿರುಗುವುದನ್ನು ( ಭ್ರಮಣೆ) ಪ್ರತಿಪಾದಿಸಿದನು  . ಇದು ಕ್ರಾಂತಿಕಾರಿಕ ಪರಿಕಲ್ಪನೆ. ಭ್ರಮಣದ ಅವಧಿಯನ್ನೂ ಆರ್ಯಭಟ ೨೩:೫೬;೪.೧ ಗಂಟೆಗಳು  ಎಂದು ದಾಖಲಿಸಿದ್ದು ಅದು  ಇಂದು ತಿಳಿದಿರುವ ಅವಧಿಗೆ ಬಹಳ  ಹತ್ತಿರವಿದೆ. ಆದರೆ ಅವನು ಸೂರ್ಯಕೇಂದ್ರೀಯ ಮಾದರಿಯ ನ್ನೂ  ಪ್ರತಿಪಾದಿಸಿದ್ದ   ಎಂಬ ಹೇಳಿಕೆಗಳಿದ್ದರೂ ಅದಕ್ಕೆ   ಸರಿಯಾದ  ಪುರಾವೆಯಿಲ್ಲ.   ಆರ್ಯಭಟನ ನಂತರ  ಬಂದ  ಮಹಾ ಗಣಿತಜ್ಞ ಬ್ರಹ್ಮಗುಪ್ತ  ಆರ್ಯಭಟನ ಸಿದ್ಧಾಂತವನ್ನು ಒಪ್ಪಲಿಲ್ಲ . ಕಾರಣಗಳೆ ಏನೇ ಇರಲಿ, ಆರ್ಯಭಟನ  ಸಿದ್ಧಾಂತಕ್ಕೆ  ಪ್ರಚಾರ ಸಿಗದೆ ಅದು ಪಶ್ಚಿಮವನ್ನು  ಮುಟ್ಟಲಿಲ್ಲ.   ಹಲವಾರು ಶತಮಾನಗಳ ನಂತರ -   ೧೫-೧೬ ಶತಮಾನದಲ್ಲಿ -    ಕೇರಳದಲ್ಲಿ  ಗಣಿತಶಾಸ್ತ್ರ ಮತ್ತು ಖಗೋಳಶಾಸ್ತ್ರವನ್ನು ಗಹನವಾಗಿ   ಅಧ್ಯಯನ ಮಾಡುತ್ತಿದ್ದವರು  ಇದ್ದರು. ~೧೫೦೦ರಲ್ಲಿ ನೀಲಕಂಠ ಸೋಮಯಾಜಿ ಎಂಬ  ವಿದ್ವಾಂಸರು  ಆರ್ಯಭಟನ  ಸಿದ್ಧಾಂತಗಳನ್ನು ಮತ್ತೆ ಪರಿಷ್ಕರಣೆ ಮಾಡಿದ್ದು   ಭೂಕೇಂದ್ರೀಯ ಮಾದರಿಯನ್ನು ತಿರಸ್ಕರಿಸಿ ಅರ್ಧ ಸೌರಕೇಂದ್ರೀಯ  ಮಾದರಿಯನ್ನು   ಪ್ರತಿಪಾದಿಸಿದ್ದರು. ಇದು  ಸುಮರು ನೂರುವರ್ಷಗಳ ನಂತರ ಟೈಕೊ ಬ್ರಾಹೆ ಪ್ರತಿಪಾದಿಸಿದ  ಮಾದರಿಯ ತರಹವೇ  ಇದ್ದಿತು

೨. ನವೋದಯ ಮತ್ತು ಆನಂತರ
    
 ಭೂಕೇದ್ರಮಾದರಿಯಲ್ಲಿ  ಗ್ರಹಗಳ ವಕ್ರಗತಿ (ಹಠಾತ್ತನೆ ಪಥ ಬದಲಾಗಿ  ಹಿಂದೆ  ಹೋಗುವಂತೆ ಕಾಣುವುದು ) ಯನ್ನು ಅರ್ಥಮಾಡಿಕ್ಕೊಳ್ಳಲು  ಆಗುತ್ತಿರಲಿಲ್ಲ. ಇದನ್ನು ಸರಿಪಡಿಸಲು ೧೬ನೆಯ  ಶತಮಾನದಲ್ಲಿ ಪೋಲೆಂಡಿನ ನಿಕೊಲಾಸ್  ಕೋಪರ್ನಿಕಸ್ ತನ್ನ  ಸೂರ್ಯಕೇಂದ್ರಮಾದರಿಯನ್ನು  ಪ್ರತಿಪಾದಿಸಿದನು.   ಇದರಲ್ಲಿ ಸೂರ್ಯ ಪ್ರಪಂಚದ ಕೇಂದ್ರದಲ್ಲಿದ್ದು  ಎಲ್ಲ ಗ್ರಹಗಳು ಸೂರ್ಯನನ್ನು ವೃತ್ತಾಕಾರದ ಕಕ್ಷೆಗಳಲ್ಲಿ ಪರಿಭ್ರಮಿಸುತ್ತವೆ. ಮತ್ತು ಎಲ್ಲ ಗ್ರಹಗಳಿಗೂ  ತಮ್ಮದೇ  ಅಕ್ಷದ ಸುತ್ತ ಭ್ರಮಣ  ಕೂಡ ಉಂಟು. . ತನ್ನ ಜೀವನದ ಕಡೆಯಲ್ಲಿ ಈ ವಿಷಯದ ಬಗ್ಗೆ ಕೋಪರ್ನಿಕಸ್  ತನ್ನ  ಪುಸ್ತಕವನ್ನು ಪ್ರಕಟಿಸಿದನು. ಈ ಪರಿಕಲ್ಪನೆ ಕ್ರಾಂತಿಕಾರಿಯಾಗಿದ್ದು ಅವನ ಪ್ರತಿಪಾದನೆಯಲ್ಲಿ ಸ್ವಲ್ಪ ಹಿಂಜರಿಕೆಯೂ  ಇದ್ದಿದ್ದರಿಂದ ಕೋಪರ್ನಿಕಸ್ ಮಾದರಿ ಎಲ್ಲರಿಗೂ ಒಪ್ಪಿಗೆಯಾಗಲು ಬಹಳ ಸಮಯ ತೆಗೆದುಕೊಂಡಿತು. ಈ ಸಿದ್ಧಾಂತ ವಿಜ್ಞಾನದಲ್ಲಿ ಕ್ರಾಂತಿಯನ್ನು ತಂದದ್ದಲ್ಲದೆ   ಮಾನವ ಜೀವನದಲ್ಲಿ  ಭೂಮಿಗೆ ಕೊಟ್ಟಿದ್ದ   ಪ್ರಾಮುಖ್ಯತೆಯನ್ನು  ಕಡಿಮೆಮಾಡಿತು .   ಇದಲ್ಲದೆ ಆ ಸಮಯದಲ್ಲಿ  ಆಕಾಶದಲ್ಲಿ ಅವತಾರ ತಳೆದ ಎರಡು ಸೂಪರ್ನೋವಾಗಳು  ದೂರದ ನಕ್ಷತ್ರಗಳು  ಎಂದು  ಟೈಕೊ ಬ್ರಾಹೆ ಸಾಬೀತುಮಾಡಿದಾಗ  ಗ್ರೀಕರ ಬದಲಾಗದ ವಿಶ್ವದ ಪರಿಕಲ್ಪನೆ  ತಪ್ಪು ಎಂದು ತಿಲಿಯಿತು. ಆಗ ಬಂದ ಕೆಲವು ಧೂಮಕೇತುಗಳೂ ಈ ಅಭಿಪ್ರಾಯಕ್ಕೆ ಒತ್ತು ಕೊಟ್ಟವು.  ಈ ಎಲ್ಲ ವಿದ್ಯಮಾನಗಳಿಂದ  ಗ್ರೀಕರ  ವೈಜ್ಞಾನಿಕ  ಸಿದ್ಧಾಂತಗಳು  ಹಿಂದೆ ಸರಿದವು.
-------------------------------------------------------------------------










    
ಚಿತ್ರ ೩: .೧೬ನೆಯ ಶತಮಾನದಲ್ಲಿ ನಿಕೊಲಾಸ್ ಕೋಪರ್ನಿಕಸ್ ಗ್ರೀಕರ  ಭೂಕೇಂದ್ರ ಮಾದರಿಯನ್ನು   ತಿರಸ್ಕರಿಸಿ ತನ್ನ ಸೂರ್ಯ ಕೇಂದ್ರೀಯ ಮಾದರಿಯನ್ನು  ಪ್ರತಿಪಾದಿಸಿದನು..  ಆ ಸಮಯದಲ್ಲೂ ನಕ್ಷತ್ರಗಳು ಬಹು ದೂರ ವೆಂಬ ಅಭಿಪ್ರಾಯವಿದ್ದು ಅವುಗಳ ಬಗ್ಗೆ ಹೆಚ್ಚು ಕುತೂಹಲಗಳಿರಲಿಲ್ಲ. ಚಿತ್ರ್ರ ೪ : ನಿಕೊಲಾಸ್ ಕೋಪರ್ನಿಕಸ್  ( ೧೪೭೩-೧೫೪೩)
-------------------------------------------------------------------------------

೧೬ನೆಯ ಶತಮಾನದ ಕಡೆಯ ದಶಕಗಳಲ್ಲಿ   ಗೆಲೆಲಿಯೊ  ತನ್ನ ಖ್ಯಾತ ಪ್ರಯೋಗಗಳನ್ನು ನಡೆಸಿ ಚಲನವಿಜ್ಞಾನದಲ್ಲಿಯೂ  ಗ್ರೀಕರ  ತಪ್ಪು  ಅಭಿಪ್ರಾಯಗಳನ್ನು  ತೋರಿಸಿದನು. ಅದಲ್ಲದೆ ಅದ್ಭುತ ವೀಕ್ಷಣೆಗಳನ್ನು ನಡೆಸಿ  ಕೋಪರ್ನಿಕಸ್ಸನ ಸೌರಮಂಡಲದ ಮಾದರಿಯನ್ನು ಪ್ರಚಾರಿಸಲು ಪ್ರಯತ್ನಿಸಿ ಚರ್ಚಿನ ಕೋಪಕ್ಕೆ ತುತ್ತಾದನು.    ಗ್ರಹಗಳ ಕಕ್ಷೆಗಳು ವೃತ್ತಾಳು  ಎಂಬ ಗ್ರೀಕರ ಮತ್ತೊಂದು ಅಭಿಪ್ರಾಯವನ್ನು  ಪ್ರಶ್ನಿಸಿ  ಆ ಕಾಲದ ಅದ್ಭುತ ವೀಕ್ಷಕ  ಟೈಕೊಬ್ರಾಹೆಯಿಂದ  ದೊರಕಿದ  ಗ್ರಹಗಳ ಸ್ಥ್ತಿತಿಗತಿಗಳ ಬಗ್ಗೆಯ ಅಂಕಿಅಂಶಗಳನ್ನು ಬಳಸಿಕೊಂಡು   ಯೊಹಾನಸ್ ಕೆಪ್ಲರ್ (೧೫೭೧-೧೬೩೦  ) ಕಕ್ಷೆಗಳು ಅಂಡಾಕಾರವಿರಬೇಕು  ಎಂದು ಪ್ರತಿಪಾದಿಸಿದನು.     ಗೆಲೆಲಿಯೊ ತನ್ನ   ಆಕಾಶವೀಕ್ಷಣೆಗಳಿಂದ  ಗ್ರಹಗಳಿಗೂ  ದ್ರವ್ಯರಾಶಿ ಇದೆಯೆಂದೂ ಅವುಗಳಿಗೆ ಬೇರೆ ಬೇರೆ ಗುಣಗಳಿವೆಯೆಂದೂ ಪರೋಕ್ಷವಾಗಿ ಗುರುತಿಸಿದ್ದು ಸೌರಕೆಂದ್ರೀಯ  ಮಾದರಿಗೆ  ಭೌತವಿಜ್ಞಾನದ ತಳಹದಿ ಕೊಟ್ಟಿತು. ಅಲ್ಲಿಯವರೆವಿಗೆ  ಸೌರಮಂಡಲದ  ಮಾದರಿಗಳೆಲ್ಲಾ ಒಂದು ರೀತಿಯಲ್ಲಿ  ಜ್ಯಾಮಿತಿಯ ಮಾದರಿಗಳು ಮಾತ್ರ ಆಗಿದ್ದ್ವು.      ಯಾವುದೋ ಕಾಂತಶಕ್ತಿಯ  ತರಹದ   ಪ್ರಭಾವ  ಗ್ರಹಗಳ ಚಲನೆಗೆ  ಕಾರಣವಿರಬಹುದೆಂದು ಕೆಪ್ಲರ್ ತಪ್ಪಾಗಿ  ಯೋಚಿಸಿದರೂ   ಖಗೋಳದ ವಿದ್ಯಮಾನಗಳಿಗೆ   ಭೌತಿಕ  ಕಾರಣಗಳನ್ನು ಹುಡುಕಬೇಕು ಎಂಬ ಅವನ ಪರಿಕಲ್ಪನೆ ಮುಖ್ಯ.  " ನಾನು (ಇಂತಹ)  ದೈತ್ಯರ ಹೆಗಲ ಮೇಲೆ ಕುಳಿದಿದ್ದರಿಂದ  ನನಗೆ ಇದೆಲ್ಲಾ  ಸಾಧ್ಯವಾಯಿತು "  ಎಂದು ಐಸಾಕ್  ನ್ಯೂಟನ್ನನ   ಹೇಳಿಕೆ  ಗುರುತ್ವದ ಬಗ್ಗೆ ನೈಜ ಸ್ಥಿತಿಯನ್ನು ತಿಳಿಸುತ್ತದೆ. . ಗೆಲೆಲಿಯೊವಿನ ಚಲನ ಶಾಸ್ತ್ರದ ಪ್ರಯೋಗಗಳನ್ನು ಅರಿತು ಅವುಗಳನ್ನು  ತನ್ನ ಸಿದ್ಧಾಂತಕ್ಕೆ ತಳಹದಿಯನ್ನಾಗಿ ಸ್ವೀಕರಿಸಿ ಕೆಪ್ಲರನ ಆಕರ್ಷಣೆಯ ಪರಿಕಲ್ಪನೆಯನ್ನೂ ಉಪಯೋಗಿಸಿಕೊಂಡನು..  ಗುರುತ್ವಾಕರ್ಷಣೆಯ  ಮೂಲಕವೇ ಒಂದು ಸೇಬಿನ ಹಣ್ಣು  ನೆಲಕ್ಕೆ ಬೀಳುತ್ತದೆ ಮತ್ತು ಚಂದ್ರ ಭೂಮಿಯ ಸುತ್ತ  ಪರಿಭ್ರಮಿಸುವುದು  ಎಂದು ಅವನು ಹೇಳಿದ್ದಲ್ಲದೆ  ಅವುಗಳು  ವಿಲೋಮ  ವರ್ಗ ನಿಯಮ (ಇನ್ವರ್ಸ್ ಸ್ಕೇವ್ರ್ ಲಾ) ವನ್ನು ಪಾಲಿಸುತ್ತವೆ ಎಂದು ಲೆಕ್ಕ ಮಾಡಿ ತೋರಿಸಿದನು.. ಇದರಿಂದ ಗುರುತ್ವಾಕರ್ಷಣಾ ನಿಯಮ ಜಗತ್ತಿನಲ್ಲಿ ಎಲ್ಲೆಲ್ಲೂ  ಪರಿಪಾಲಿಸಲ್ಪಡುತ್ತವೆ  ಎಂಬುದು ನ್ಯೂಟನ್ ಸಿದ್ಧಾಂತದ ತಿರುಳು. ಅಂತೂ ೧೮ನೆಯ ಶತಮಾನದ ಮೊದಲ ದಶಕಗಳಲ್ಲಿ  ವಿಶ್ವ ಮುಖ್ಯವಾಗಿ ಸೌರಮಂಡಲಕ್ಕೆ ಸೀಮಿತವಾಗಿದ್ದು  ಅದನ್ನು   ವಿಜ್ಞಾನಿಗಳು ಚೆನ್ನಾಗಿ ಅರ್ಥಮಾಡಿಕೊಂಡಿದ್ದರು.         
೩. ಗ್ಯಾಲಕ್ಸಿ ಮತ್ತು ನೀಹಾರಿಕೆಗಳು  :
  
-------------------------------------------------------------------------





  
ಚಿತ್ರ ೫:  ನೀಹಾರಿಕೆಗಳು  ಮತ್ತು ಕ್ಷೀರ ಪಥದತ್ತ  ಗೆಲೆಲಿಯೊ ತನ್ನ ದೂರದರ್ಶಕವನ್ನು  ತಿರುಗಿಸಿದಾಗ ಅವನಿಗೆ ಹಿಂದೆ ಕಾಣದಿದ್ದ ಅನೇಕ ಹೊಸ  ನಕ್ಶತ್ರಗಳು ಕಾಣಿಸಿದವು.. ಇದರಿಂದ ವಿಶ್ವ ನಾವು ಹಿಂದೆ ತಿಳಿದಿದ್ದಕ್ಕಿಂತ ಬಹಳ ದೊಡ್ಡದು ಎಂಬ ಅರಿವು ಹುಟ್ಟಿತು  ಚಿತ್ರ ೬: ಗೆಲೆಲಿಯೊ  ( ೧೫೬೪-೧೬೪೨)
-----------------------------------------------------------------------
       ಗೆಲೆಲಿಯೊ ನಡೆಸಿದ ಅನೇಕ ಸಂಶೋಧನೆಗಳಲ್ಲಿ    ಆಕಾಶಗಂಗೆಯ  ಪ್ರಥಮ  ವೀಕ್ಷಣೆಗೆ ತನ್ನದೇ ಮಹತ್ವವಿದೆ.     ಆಕಾಶದ  ಕ್ಷೀರಪಥದತ್ತ  ಗೆಲೆಲಿಯೊ  ತನ್ನ ದೂರದರ್ಶಕವನ್ನು ತಿರುಗಿಸಿ ಅದರಲ್ಲಿ  ಅಗಾಧ  ಸಂಖ್ಯೆಯ  ನಕ್ಷತ್ರಗಳಿವೆ  ಎಂದು ತೋರಿಸಿದನು. .   ಇಡೀ ವಿಶ್ವ ತಿಳಿದದ್ದಕ್ಕಿಂತ  ದೊಡ್ಡದಿದೆ ಎಂದು ತೋರಿಸಿದ ಆ  ಸಂಶೋಧನೆ ಯ  ಪ್ರಾಮುಖ್ಯತೆಯನ್ನು   ವಿಜ್ಞಾನಿಗಳು ಬಹಳ ಕಾಲ ಗುರುತಿಸಲಿಲ್ಲ.  ೧೯ನೆಯ ಶತಮಾನದ 

ಮೊದಲ ದಶಕಗಳ ತನಕ ವಿಜ್ಞಾನಿಗಳಿಗೆ ನಕ್ಷತ್ರಗಳಲ್ಲಿ  ಹೆಚ್ಚು  ಆಸಕ್ತಿಯೂ  ಇರಲಿಲ್ಲ. ಸೂರ್ಯ, ಚಂದ್ರ ಮತ್ತು ಗ್ರಹಗಳ ಸ್ಥಳಗಳನ್ನು ಮತ್ತು ಚಲನೆಗಳನ್ನು ನಿಖರವಾಗಿ   ನಿರ್ಧರಿಸಲು ಮಾತ್ರ   ನಕ್ಷತ್ರಗಳನ್ನು  ಬಳಸಿಕೊಳ್ಳುತ್ತಿದ್ದರು... ಖಗೋಳವಿಜ್ಞಾನದ  ಮುಂದಿನ ಬೆಳೆವಣಿಗೆಗೆ  ಬಹಳ ಮುಖ್ಯವಾದದ್ದು ದೂರದರ್ಶಕಗಳ   ಸುಧಾರಣೆ.
   ದೂರದರ್ಶಕದ   ಎರಡು ಮುಖ್ಯ  ಗುಣಗಳು (೧) ವರ್ಧನಾ ಸಾಮರ್ಥ್ಯ  ಮತ್ತು  (೨) ವಿಘಟನಾ ಸಾಮರ್ಥ್ಯ - ಒಂದು ವಸ್ತು ದೊಡ್ಡದಾಗಿ ಕಾಣಿಸಿದರೆ ಮಾತ್ರ ಸಾಲದು; ಅದರ ವಿವರಗಳೂ ಚೆನ್ನಾಗಿ ಕಾಣಿಸಬೇಕು !    ಗೆಲೆಲಿಯೊ ಮಸೂರಗಳನ್ನು ಬಳಸಿ ತಯಾರಿಸಿದ್ದ  ದೂರದರ್ಶಕದ   ವರ್ಧನಾ ಸಾಮರ್ಥ್ಯ ~ ೩೩ ಇದ್ದಿತು.  ಮಸೂರಗಳನ್ನು  ದೊಡ್ಡದುಮಾಡುತ್ತ  ವರ್ಧನಾ ಸಾಮರ್ಥ್ಯವನ್ನು  ಹೆಚ್ಚಿಸಿದರೂ ಅವುಗಳ  ಮೂಲನ್ಯೂನತೆ ಯಾದ   ಅಪಸರಣವನ್ನು  ನಿರ್ಮೂಲಮಾಡಲು ಆಗುವುದಿಲ್ಲ ವೆಂದು  ತಿಳಿದು   ನ್ಯೂಟನ್  ಮಸೂರಗಳ  ಬದಲು ಕನ್ನಡಿಗಳನ್ನು ಬಳಸಿದನು.   ಅನಂತರ ಅವನ ಮಾದರಿಯನ್ನೇ ಎಲ್ಲ ಖಗೋಳಜ್ಞರೂ  ಅನುಸರಿಸಿದರು.  
--------------------------------------------------------------------------------------------------------------------

   









ಚಿತ್ರ ೭ : ಹರ್ಷೆಲನ ಪ್ರಕಾರ   ನಮ್ಮ ಕ್ಷೀರಪಥ  ಗ್ಯಾಲಕ್ಸಿ;    ಗ್ಯಾಲಕ್ಸಿಯ  ಸ್ವರೂಪದ ಬಗ್ಗೆ ಹರ್ಷೆಲನ ಯೋಜನೆ   ತಪ್ಪಿದ್ದರೂ ಅದು ಸೃಷ್ಟಿವಿಜ್ಞಾನದ ಒಂದು ಮುಖ್ಯ ಹೆಜ್ಜೆ. ಚಿತ್ರ ೮: ವಿಲಿಯಮ್ ಹರ್ಷೆಲ್ (೧೭೩೮-೧೮೨೨)
---------------------------
          ಗೆಲೆಲಿಯೊವಿನ ನಂತರ ಖಗೋಳ ವಿಜ್ಞಾನದಲ್ಲಿ   ವಿಲಿಯಮ್ ಹರ್ಷೆಲನ ಹೆಸರು ಮುಖ್ಯ. ಜರ್ಮನಿಯಿಂದ  ಇಂಗ್ಲೆಂಡಿಗೆ ಬಂದು ಅಲ್ಲಿಯೇ  ನೆಲೆಸಿ  ಪ್ರಮುಖ ಸಂಗೀತಗಾರನಾಗಿದ್ದ ಹರ್ಷೆಲ್  ನ ಮುಖ್ಯ ಆಸಕ್ತಿ ಖಗೋಳವಿಜ್ಞಾನವಾಗಿದ್ದು ಅವನು ಉತ್ತಮ ದೂರದರ್ಶಕಗಳನ್ನು  ನಿರ್ಮಿಸಿ ಅವುಗಳನ್ನು  ಬಳಸಿಕೊಂಡು   ಹೊಸ ಗ್ರಹ ಯುರೇನಸ್ ಅಲ್ಲದೆ  ಹಲವಾರು  ಮುಖ್ಯ  ಆವಿಷ್ಕಾರಗಳನ್ನು ಮಾಡಿದನು.     ಕ್ಷೀರಪಥದ ತಾರೆಗಳನ್ನು ಅವನು ಪರಿಶೀಲಿಸಿದಾಗ   ಅವನಿಗೆ ಅವುಗಳು ಸೂರ್ಯ/ ಭೂಮಿಯ  ಸುತ್ತ  ಪರಿಭ್ರಮಿಸುತ್ತಿರುವ ಹಾಗೆ ಕಂಡು ಬಂದು ಅದು  ಒಂದು ಫಲಕ ಸ್ವರೂಪವಿರಬಹುದೆಂದು ಪರಿಗಣಿಸಿದನು.   ತಾರೆಗಳೆಲ್ಲವೂ ಒಂದೇ ಪ್ರಕಾಶವನ್ನು   ಹೊಂದಿದೆ  ಎಂದು  ಊಹಿಸಿ ಈ ನಕ್ಷತ್ರ ಸಮೂಹಗಳ ಕೇಂದ್ರ  ಸೂರ್ಯ  ಎಂದು ಅವನು ವ್ಯಾಖ್ಯಾನಿಸಿ ಆ ಸಮೂಹಕ್ಕೆ ಒಂದು ರೂಪವನ್ನು ಕೊಟ್ಟನು . ಇಂದು ಅದು ಸರಿಯಲ್ಲವೆಂದು ತಿಳಿದಿದ್ದರೂ ಹರ್ಷೆಲನ  ಈ ಪ್ರಥಮ ಪ್ರಯತ್ನ  ಶ್ಲಾಘನೀಯವೆ !
    ವಿಲಿಯಮ್ ಹರ್ಷೆಲನ ತಂಗಿ ಕೆರೋಲಿನ್  ಮೊದಲು  ಅವನಿಗೆ ಸಹಾಯಮಾಡಿಕೊಂಡಿರುತ್ತಿದ್ದರೂ   ನಿಧಾನವಾಗಿ ತಾನೇ ನುರಿತ ವೀಕ್ಷಕಳಾದಳು. ಪ್ರಪಂಚದ ಮೊದಲ ಖಗೋಳಜ್ಞೆ ಅನಿಸಿಕೊಂಡ ಈಕೆ  ಎಂಟು  ಧೂಮಕೇತುಗಳಲ್ಲದೆ    ಆಂಡ್ರೊಮೆಡಾ  ಹತ್ತಿರದ   ಆಕಾಶಕಾಯವನ್ನೂ ಕಂಡುಹಿಡಿದಳು .  ಆ ಸಮಯದಲ್ಲೆ  ಫ್ರಾನ್ಸಿನ ಚಾರ್ಲ್ಸ್ಮೆಸ್ ಮೆಸ್ಸಿಯೆ  ಕೂಡ  ಕೆಲವು ಹೊಸಗುಣಗುಳ್ಳ  ಆಕಾಶಕಾಯಗಳನ್ನೂ ಕಂಡುಹಿಡಿದನು.  ಈ ಆಕಾಶಕಾಯಗಳಲ್ಲಿ ಪ್ರಕಾಶವು  ನಕ್ಷತ್ರಗಳ ತರಹ ಕೇಂದ್ರದಲ್ಲಿ  ಗರಿಷ್ಟ  ವಾಗಿರದೆ ಪೂರ್ತಿ ಹರಡಿಕೊಂಡು  ಇರುತ್ತಿದ್ದು  ಇವುಗಳಿಗೆ ನೀಹಾರಿಕೆ (ನೆಬ್ಯುಲ)ಎಂಬ ಹೆಸರು  ಬಂದಿತು.  ಅದರೆ ಇವು ಯಾವ ತರಹ ಆಕಾಶಕಾಯಗಳೆಂಬುದು ದೊಡ್ಡ ಸಮಸ್ಯೆಯಾಗಿದ್ದು ಅನೇಕ  ವಿದ್ವಾಸರು ಇವುಗಳ ಬಗ್ಗೆ ವಿವಿಧ ಅಭಿಪ್ರಾಯಗಳನ್ನು ಹೊಂದಿದ್ದರು.   ಜರ್ಮನ್ ತತ್ವಶಾಸ್ತ್ರಜ್ಞ ಇಮ್ಯಾನ್ಯುಎಲ್ ಕಾಂತ್  ಮತ್ತು  ಮತ್ತು ಇಂಗ್ಲೆಂಡಿನ ಥಾಮಸ್ ರೈಟ್   ಈ  ನೀಹಾರಿಕೆಗಳು  ನಮ ಕ್ಶೀರಪಥದಂತೆಯೆ  ಇತರ ವಿಶ್ವಗಳು  ಎಂದು  ಪ್ರತಿಪಾದಿಸಿ ಇವಕ್ಕೆ ದ್ವೀಪವಿಶ್ವಗಳೆಂಬ ಹೆಸರನ್ನೂ  ಕೊಟ್ಟಿದ್ದರು.  ಆದರೆ ಕೆಲವರು ಇವುಗಳು ನಮ್ಮದೇ  ಕ್ಶೀರಪಥದ ಲ್ಲಿಯೇ  ಬೇರೆಯ ಗುಣಗಳುಳ್ಳ   ಸದಸ್ಯರು  ಎಂದು ನಂಬಿದ್ದರು.  

೪. ವಿಶ್ವದ ವಿಸ್ತಾರ

(ಅ) ವೀಕ್ಷಣೆಗಳು
       ೨೦ನೆಯ ಶತಮಾನದ  ಮೊದಲೆರಡು  ದಶಕಗಳಲ್ಲಿ  ಅಮೆರಿಕದ ಕ್ಯಾಲಿಫೋರ್ನಿಯ ಪ್ರಾಂತ್ಯದಲ್ಲಿ  ಎರಡು ದೊಡ್ಡ ದೂರದರ್ಶಕ  - ೧.೫ ಮೀ ಮತ್ತು ೨.೫ ಮೀ ವ್ಯಾಸ  - ಗಳನ್ನು ಸ್ಥಾಪಿಸಲಾಯಿತು. ಮೌಂಟ್ ವಿಲ್ಸನ್ ಎಂಬ ಪರ್ವತ ಪ್ರದೇಶದಲ್ಲಿ ಸ್ಥಾಪಿತವಾದ  ಮೊದಲನೆಯ  ದೂರದರ್ಶಕವನ್ನು  ಬಳಸಿಕೊಂಡು  ಹ್ಯಾರ್ಲೊ ಶ್ಯಾಪ್ಲೀ (೧೮೮೫-೧೯೭೨) ಎಂಬ ಖಗೋಳಜ್ಞ ರು  ನಮ್ಮ ಗ್ಯಾಲಕ್ಸಿಯ ಆಕಾರ ಮತ್ತು  ಇತರ ಗುಣಗಳನ್ನು   ಕಂಡುಹಿಡಿದರು.  ಇದರಿಂದ  ನಮ್ಮದು  ಸುರುಳಿ   ಆಕಾರದ  ೧ ಲಕ್ಷ್ಯ  ಜ್ಯೋತಿರ್ವರ್ಷಗಳ ಅಗಲದ  ಗ್ಯಾಲಕ್ಸಿ ಮತ್ತು  ಸೂರ್ಯ  ಕೇಂದ್ರದಿಂದ  ೨೭೦೦೦ ಜ್ಯೋತಿರ್ವರ್ಷಗಳು  ದೂರ ಎಂದೂ  ತಿಳಿಯಿತು.
       ೧೯೨೦ರಲ್ಲಿ ನಡೆದ ಒಂದು ಮಹಾ ಚರ್ಚೆಯಲ್ಲಿಯೂ ಶ್ಯಾಪ್ಲೀ ಭಾಗವಹಿಸಿದ್ದರು. ಚರ್ಚೆಯ ವಿಷಯ : ಕಳೆದ ಶತಮಾನದಲ್ಲಿ ಖಗೋಳಜ್ಞರು ಕಂಡುಹಿಡಿದ ಅನೇಕ ನೀಹಾರಿಕೆಗಳು ನಿಜವಾಗಿಯೂ ಹೊರಗಿನ ದ್ವೀಪ ವಿಶ್ವಗಳೇ ( ಕಾಂತ್ ಪ್ರತಿಪಾದಿಸಿದಂತೆ) ಅಥವಾ ಅವು ನಮ್ಮದೇ  ಗ್ಯಾಲಕ್ಸಿಯ ಸದಸ್ಯರೇ? ಶ್ಯಾಪ್ಲೀಯವರು  ಈ ನೀಹಾರಿಕೆಗಳು   ಹತ್ತಿರದಲ್ಲಿಯೇ ಇವೆ ಎಂದೂ    ಕರ್ಟಿಸ್ ಎಂಬ ಖಗೋಳಜ್ಞರು ಅವು ದೂರವಿದ್ದು  ಹೊರಗಿನ  ಗ್ಯಾಲಕ್ಸಿಗಳೆಂದೂ  ವಾದಿಸಿದರು. ಆದರೆ ಈ ಚರ್ಚೆಯಲ್ಲಿ  ಈ ವಿಷಯ ಇತ್ಯರ್ಥವಾಗದೆ ಮುಂದಿನ ದಶಕದ ವೀಕ್ಷಣೆಗಳಿಗಾಗಿ  ಕಾಯಬೇಕಾಯಿತು.
------------------------------------------------------------------------------------------------
   



 
­



   ಚಿತ್ರ ೯ : ನಮ್ಮ ಗ್ಯಾಲಕ್ಸಿಯ ಇಂದಿನ ಚಿತ್ರ ; ೧ ಲಕ್ಶ ಜ್ಯೋತಿರ್ವರ್ಷಗಳ  ಅಗಲ  ; ಕೆಂದ್ರದಿಂದ ೨೭೦೦೦ ಜ್ಯೋತಿರ್ವರ್ಷಗಳು  ದೂರದಲ್ಲಿ ಸೂರ್ಯ  ಚಿತ್ರ   ೧೦ : ನಮ್ಮಗ್ಯಾಲಕ್ಸಿಯ ಇಂದಿನ ರೂಪವನ್ನು ಸ್ಪಷ್ಟೀಕರಿಸಿದ  ಹ್ಯಾರ್ಲೋ  ಶ್ಯಾಪ್ಲೀ  ( ೧೮೮೫-೧೯೭೨)
---------------------------------------------------------------------

 ಶ್ಯಾಪ್ಲಿಯ ನಂತರ ಎಡ್ವಿನ್ ಹಬಲ್ ( ೧೮೮೯-೧೯೫೩)  ಸಹೋದ್ಯೋಗಿ ಹ್ಯುಮಾಸನ್ ರ ಜೊತೆ ಸೇರಿ ೧೯೨೦ರ ದಶಕದಲ್ಲಿ ಮೌಂಟ್ ವಿಲ್ಸನ್ ವೇಧಶಾಲೆಯ ೨.೫ ಮೀ ( ೧೦೦ ಇಂಚು)  ವ್ಯಾಸದ ) ದೂರದರ್ಶಕವನ್ನು ಬಳಸಿಕೊಂಡು ಹಲವು ಆಕಾಶಕಾಯಗಳ ವೀಕ್ಷಣೆಗಳನ್ನು ನಡೆಸಿದರು. ಹಿಂದೆ ಹೆನ್ರಿಯೆಟಾ ಲೆವಿಟ್  ಸೆಫೈಡ್ ಎಂಬ ಚಂಚಲ ನಕ್ಷತ್ರಗಳ ಪ್ರಕಾಶಗಳು ಹೇಗೆ ಬದಲಾಗುತ್ತವೆ ಎಂಬುದನ್ನು ಅಳೆದು ಅದರಿಂದ ದೂರವನ್ನು ಕಂಡುಹಿಡಿಯಬಹುದೆಂದು ತೋರಿಸಿದ್ದರು. ಇದೇ ವಿಧಾನವನ್ನು ಹಬಲ್ ಉಪಯೋಗಿಸಿ ಆಂಡ್ರೊಮೆಡಾ ಎಂಬ ಆಕಾಶಕಾಯ ಹತ್ತಿರವಿಲ್ಲವೆಂದೂ ಮತ್ತು ಅದರ ದೂರ ೯ ಲಕ್ಷ ಜ್ಯೋತಿರ್ವರ್ಷವೆಂದು ( ಈಗ ಅದರ ಸರಿಯಾದ ಮೌಲ್ಯ ೨೫ ಲಕ್ಷ ಜ್ಯೋತಿರ್ವರ್ಷಗಳು ಎಂದು ತಿಳಿದಿದೆ) ನಿರ್ಧರಿಸಿ ಇದು ಹೊರಗಿನ ಗ್ಯಾಲಕ್ಸಿಯೇ ಇರಬೇಕು ಎಂದು ೧೯೨೪ರಲ್ಲಿ ಪ್ರತಿಪಾದಿಸಿದರು. ಹೀಗೆಯೇ ಹಿಂದೆ ಹತ್ತಿರವೇ ಇದೆ ಎಂದು ತಿಳಿದಿದ್ದ ಹಲವಾರು ನೀಹಾರಿಕೆಗಳು ಅತಿ ದೂರದ ಗ್ಯಾಲಕ್ಸಿಗಳು ಎಂದು ಹಬಲ್ ತೋರಿಸಿದರು. ಹೀಗೆ ವಿಶ್ವದಲ್ಲಿ ನಮ್ಮ ಕ್ಷೀರಪಥ  (ಮಿಲ್ಕಿವೇ) ಒಂದೇ ಗ್ಯಾಲಕ್ಸಿ ಯಲ್ಲ ಎಂದು ತೋರಿಸಿ  ವಿಶ್ವದ ಸೀಮೆಯನ್ನು ಹೊರದೂಡಿದರು. ಕೋಪರ್ನಿಕಸ್ ಭೂಮಿ ವಿಶ್ವದ ಕೇಂದ್ರವಲ್ಲ ಎಂದು ೧೬ನೆಯ ಶತಮಾನದಲ್ಲಿ ತೋರಿಸಿದನು; ಹ್ಯಾರೊ ಶ್ಯಾಪ್ಲಿ ೨೦ನೆಯ ಶತಮಾನದ ಮೊದಲನೆಯ ದಶಕದಲ್ಲಿ ನಮ್ಮ ಸೂರ್ಯನೂ ನಮ್ಮ ಗ್ಯಾಲಕ್ಸಿಯ ಸಾಧಾರಣ ತಾರೆ ಎಂದು ತೋರಿಸಿದರು; ಹಬಲ್ ಅವರ ಈ ಆವಿಷ್ಕಾರದೊಂದಿಗೆ ನಮ್ಮ ಗ್ಯಾಲಕ್ಸಿಯಲ್ಲೂ ಏನೂ ಆತಿಶಯವಿಲ್ಲ ಎಂದಾಯಿತು. ಹಬಲ್ ಅವರ ಮುಂದಿನ ಹೆಜ್ಜೆ ಇನ್ನೂ ಕ್ರಾಂತಿಕಾರಿಯಾಗಿದ್ದಿತು.

----------------------------------------------------------------------------









      

ಚಿತ್ರ ೧೧:  :  ಹಬಲ್ ಕಂಡುಹಿಡಿದ ನಿಯಮವನ್ನು ತೋರಿಸುವ  ರೇಖಾಚಿತ್ರ: ದೂರ ವನ್ನು ಎಕ್ಸ್ - ಅಕ್ಷದಲ್ಲೂ  ಮತ್ತು ವೇಗವನ್ನು ವೈ- ಅಕ್ಷದಲ್ಲೂ ತೋರಿಸಿದೆ . ಇಲ್ಲಿ ಪ್ರತಿಯೊಂದು ಬಿಂದುವೂ  ಒಂದೊಂದು ಆಕಾಶಕಾಯದ ದೂರ ಮತ್ತು ವೇಗವನ್ನು ತೋರಿಸುತ್ತದೆ.   ದೂರ ಹೆಚ್ಜ್ಚಿದ್ದರೆ ಆಕಾಶಕಾಯದ ವೇಗವೂ  ಹೆಚ್ಚಿರುವುದನ್ನು  ಚಿತ್ರದಲ್ಲಿ ನೋಡಬಹುದು..  ಇದರಿಂದ ಆಕಾಶಕಾಯದ ದೂರ (ದೂ) ಕ್ಕೂ, ಅದು ಹೊರಸರಿಯುತ್ತಿರುವ ವೇಗಕ್ಕೂ  (ವೇ)  ಸಂಬಂಧ -  (ವೇ) = ( ಎಚ್) * (ದೂ)  ವಿದೆಯೆಂದು ಗೊತ್ತಾಗುತ್ತದೆ. ಈ ಸಮೀಕರಣದಲ್ಲಿ  ' ಎಚ್ '   ನಿಯತಾಂಕಕ್ಕೆ  ಹಬಲ್ ನಿಯತಾಂಕ  ಎಂಬ ಹೆಸರಿದೆ. . ಇದರ ಮೌಲ್ಯ  ಒಂದು ಮೆಗಾ ಪಾರ್ಸೆಕ್ ದೂರಕ್ಕೆ ೭೩.೮  +/- ೨.೪ ಕಿಮೀಗಳು (ಅಂದರೆ ಅದರ ಮೌಲ್ಯ ೭೧.೪ ರಿಂದ ೭೬.೨ - ಪ್ರಯೋಗಗಳಲ್ಲಿ ಇಂತಹ ಅನಿಶ್ಚಿತತೆ ಇದ್ದೇ ಇರುತ್ತದೆ)  ಈ ನಿಯತಾಂಕದಿಂದ  ವಿಶ್ವದ ವಿಸ್ತಾರದ ವೇಗವನ್ನು  ಮತ್ತು   ವಿಶ್ವದ ವಯಸ್ಸನ್ನು  ಹೇಗೆ ನಿರ್ಧರಿಸಬಹುದು ಎಂದು ಮುಂದೆ ನೋಡೋಣ.  ಚಿತ್ರ  ೧೨ : ಖ್ಯಾತ ಖಗೋಳಜ್ಞ ಎಡ್ವಿನ್ ಹಬಲ್  (   ೧೮೮೯-೧೯೫೩     )
---------------------------------------------------------------------
ಒಂದು ಆಕಾಶಕಾಯದಿಂದ  ಹೊರಬರುವ  ರೋಹಿತವನ್ನು   ಪ್ರಯೋಗಶಾಲೆಯಲ್ಲಿ   ರೋಹಿತದ  ಜೊತೆ ಹೋಲಿಸಿದಾಗ ಕೆಂಪುಪಲ್ಲಟ  (ರೆಡ್ ಶಿಫ್ಟ್)ವನ್ನು ಕಂಡುಹಿಡಿಯಬಹುದು; ಇದು   ರೇಖೆಗಳ ತರಂಗಾಂತರ  ದ ವ್ಯತ್ಯಾಸ ದ ಅಳತೆ, ಇದರ   ಮೌಲ್ಯವನ್ನು  ತಿಳಿದು ಆಕಾಶಕಾಯದ ವೇಗವನ್ನು  ಕಂಡುಹಿಡಿಯಬಹುದು;      ಸ್ಲಿಫರ್   ೧೯೧೨ರಲ್ಲಿ ಕೆಲವು  ನೀಹಾರಿಕೆಗಳ ಕೆಂಪು ಪಲ್ಲಟವನ್ನು  ಅಳೆದು   ಅವುಗಳು ವೇಗದಿಂದ ದೂರ ಹೋಗುತ್ತಿರುವುದನ್ನು ತೋರಿಸಿದರು .  ಈ ಸಂಶೋಧನೆಯನ್ನು   ಎಡ್ವಿನ್ ಹಬಲ್ ಮುಂದುವರಿಸಿ ೪೬ ಗ್ಯಾಲಕ್ಸಿಗಳಿಂದ ಮಾಹಿತಿಯನ್ನು ಸಂಗ್ರಹಿಸಿ.  ಎಲ್ಲ ಆಕಾಶಕಾಯಗಳೂ ವೇಗದಿಂದ  ದೂರಹೋಗುತ್ತಿರುವುದಲ್ಲದೆ ದೂರ ಇರುವ ಆಕಾಶಕಾಯಗಳ ವೇಗ ಹತ್ತಿರ ಇರುವ ಆಕಾಶಕಾಯಗಳ ವೇಗಕ್ಕಿಂತ ಹೆಚ್ಚು ಎಂದು ಅವರು  ೧೯೨೯ರಲ್ಲಿ ತೋರಿಸಿದರು.. ಇದರಿಂದ ಅವರು ಆಕಾಶಕಾಯದ ವೇಗಕ್ಕೂ ಅದರ  ದೂರಕ್ಕೂ ಒಂದು

ಸಂಬಂಧವನ್ನು ಕಂಡುಹಿಡಿದರು         .  ಈ ಸಮೀಕರಣದಿಂದ  ವಿಶ್ವ ವಿಸ್ತಾರವಾಗುತ್ತಿದೆ ಎಂದು ಹಬಲ್ ಪ್ರತಿಪಾದಿಸಿದರು. ಆ ಪ್ರತಿಪಾದನೆಯನ್ನು  ಹೀಗೆ ಅರ್ಥಮಾಡಿಕೊಳ್ಳಬಹುದು : ಒಂದು ಬೆಲೂನಿಗೆ ಗಾಳಿ ತುಂಬಿ ಅದು ಉಬ್ಬುತ್ತ ಹೋದರೆ ಅದರ ಮೇಲಿನ ಚುಕ್ಕಿಗಳ ಮಧ್ಯೆ ಯ ದೂರ ಹೆಚ್ಚಾಗುತಾ ಹೋಗುತ್ತದೆ. ಇಲ್ಲಿ ವೇಗಕ್ಕೂ ದೂರಕ್ಕೂ ಸಂಬಂಧ ತರುವ ಒಂದು ನಿಯತಾಂಕ - ಹಬಲ್ ನಿಯತಾಂಕ- ದಿಂದ ವಿಶ್ವದ ವಯಸ್ಸನ್ನು ನಿರ್ಧರಿಸಬಹುದು. ಈ ಆವಿಷ್ಕಾರ ಜಗತ್ತು ಕ್ಷಣ ಕ್ಷಣಕ್ಕೂ ವಿಸ್ತಾರವಾಗುತ್ತಿದೆ ಎಂದು ತೋರಿಸಿ ಅದಕ್ಕೂ ಒಂದು ನಿಯಮವನ್ನು ಕೊಡುತ್ತಿದ್ದು ಇದನ್ನು ಆಧುನಿಕ ವಿಜ್ಞಾನದ ಒಂದು ಅತಿ ಮಹತ್ವದ ಪ್ರಯೋಗವೆಂದು ಪರಿಗಣಿಸಲಾಗಿದೆ.
(ಆ) ಸಿದ್ಧಾಂತಗಳು
  ನ್ಯೂಟನ್ ತನ್ನ ಸಿದ್ಧಾಂತವನ್ನು ಪ್ರತಿಪಾದಿಸಿದ  ನಂತರ ದೂರದಲ್ಲಿರುವ ಎರಡು  ವಸ್ತುಗಳ ಮಧ್ಯೆ   ಪರಸ್ಪರ  ಆಕರ್ಷಣೆ ಹೇಗೆ ಹುಟ್ಟುತ್ತದೆ  ಎಂಬುದನ್ನ್ಯು ನಾನು ಅರ್ಥಮಾಡಿಕೊಳ್ಳಲಾಗಲಿಲ್ಲ  ಎಂದು ಹೇಳಿದ್ದನು. . ಅದರ  ವಿವರಣೆಗೆ ೨ಂನೆಯ ಶತಮಾನದ  ತನಕ  ಕಾಯಬೇಕಾಯಿತು.   ೨೦ನೆಯ ಶತಮಾನದ ಮೊದಲ  ಎರಡು ದಶಕಗಳಲ್ಲಿ  ಆಲ್ಬರ್ಟ್ ಐನ್ಸ ಟೈನ್  ಗುರುತ್ವಕ್ಕೆ ಹೊಸ  ವ್ಯಾಖ್ಯಾನ ಕೊಟ್ಟರು..   ಗೆಲೆಲಿಯೊವಿನ ಪ್ರಯೋಗಗಳನ್ನು ಮೂಲವಾಗಿಟ್ಟುಕೊಂಡು  ತಮ್ಮ ಖ್ಯಾತ  ಸಾರ್ವತ್ರಿಕ ಸಾಪೇಕ್ಷತಾ   ಸಿದ್ಧಾಂತವನ್ನು  ೧೯೧೫ರಲ್ಲಿ  ಪ್ರತಿಪಾದಿಸಿದರು.    -----------------------------------------------------------------------------
             
    

  








 ಚಿತ್ರ ೧೩,೧೪,೧೫ :  ಮಹಾಸ್ಫೋಟ ಸಿದ್ಧಾಂತದ ಹರಿಕಾರರಾದ    ಪಾದ್ರಿ ಲೆಮೈತ್ (೧೮೯೪-೧೯೬೬) , ಜಾರ್ಜ್ ಗ್ಯಾಮೋವ್  (  ೧೯೦೪-೧೯೬೮) ಅನೇಕ ಜನಪ್ರಿಯ  ವೈಜ್ಞಾನಿಕ  ಪುಸ್ತಕಗಳನ್ನೂ  ರಚಿಸಿದರು)       ಮತ್ತು ರಾಬರ್ಟ್ ಡಿಕಿ (೧೯೧೬-೧೯೯೭)
-----------------------------------------------------------------------

 ೧೯೧೭ರಲ್ಲಿ  ಆಲ್ಬರ್ಟ್ ಐನ್ಸ್ ಟೈನ್ ತಮ್ಮ ಸಾರ್ವತ್ರಿಕ ಸಾಪೇಕ್ಷತಾ ಸಿದ್ಧಾಂತವನ್ನು ವಿಶ್ವಕ್ಕೆ ಅಳವಡಿಸಿಕೊಂಡು

ಸಮೀಕರಣಗಳನ್ನು  ಮಂಡಿಸಿದರು.  ಆಗಿನ (೧೯೧೬) ತಿಳುವಳಿಕೆಯ ಪ್ರಕಾರ ವಿಶ್ವ ಅಚಲ ಎಂಬ ಅಭಿಪ್ರಾಯವಿದ್ದಿತು. ಆದರೆ ಐನ್ಸ್ಟೈನ್ ಸಮೀಕರಣಗಳು ಗುರುತ್ವ ಎಲ್ಲವನ್ನು ಕುಗ್ಗಿಸುತ್ತದೆ ಎಂದು ತೋರಿಸಿದ್ದು ವಿಶ್ವವೂ ಕುಗ್ಗುತ್ತ  ಹೋಗಬೇಕಾಗುತ್ತದೆ ಎಂದು ತೋರಿಸಿದವು . ಆದ್ದರಿಂದ ಅದನ್ನು ಎದುರಿಸಲು ಒಂದು ವಿಕರ್ಷಣಾ ಬಲವನ್ನು ಪ್ರತಿಪಾದಿಸಿ ಅದರ ಸಂಕೇತವಾಗಿ     ಲ್ಯಾಮ್ದ ಎಂಬ ನಿಯತಾಂಕವನ್ನು ಐನ್ ಸ್ಟೈನ್ ಸೇರಿಸಿದ್ದರು. ಅದು ಗುರುತ್ತ್ವದ ವಿರುದ್ಧ ಕೆಲಸಮಾಡಿ ಜಗತ್ತನ್ನು ಅಚಲ ವಾಗಿ ಇಡುತ್ತದೆ.  ಈ ನಿಯತಾಂಕ ಗುರುತ್ವವನ್ನು  ಎದುರಿಸಿ  ವಿಶ್ವವನ್ನು ಹಿಗ್ಗಿಸುವ ಶಕ್ತಿಯ ಸಂಕೇತವಾಗಿದ್ದಿತು.
      
----------------------------------------------------------------------------










      ಚಿತ್ರ ೧೬ :  ಸ್ಥಿರ ವಿಶ್ವ (ಕೆಳಗೆ) ಮತ್ತು ಮಹಾಸ್ಫೋಟ  (ಮೇಲೆ)  ಸಿದ್ಧಾಂತಗಳ  ಹೋಲಿಕೆ . ವಿಶ್ವ ವಿಸ್ತಾರವಾದರೂ ಒಂದು ಸಿದ್ಧಾಂತದಲ್ಲಿ  ಸಾಂದ್ರ್ತತೆ ಬದಲಾಗುವುದಿಲ್ಲ; ; ಆದರೆ ಇನ್ನೊಂದರಲ್ಲಿ ಸಾಂದ್ರತೆ ಕಡಿಮೆಯಾಗುತ್ತ ಹೋಗುತ್ತದೆ  ಚಿತ್ರ ೧೭ : ಫ್ರೆಡ್ ಹಾಯಲ್ (೧೯೧೫-೨೦ಂ೧)

ಆನಂತರ  ೧೯೨೨ರಲ್ಲಿ  ಐನ್ ಸ್ಟೈನ್ ರ ಅದೇ ಸಮೀಕರಣಗಳನ್ನು ವ್ಯಾಖ್ಯಾನಿಸಿ ಅಲೆಗ್ಸಾಂಡರ್ ರ್ಫ್ರೀಡ್ಮನ್ ವಿಶ್ವ ವಿಸ್ತಾರವಾಗುತ್ತಿರಲೇಬೇಕು ಎಂದು ಪ್ರತಿಪಾದಿಸಿದರು. ಇದೇ ವಿಷಯದಲ್ಲಿ  ೧೯೨೭ರಲ್ಲಿ  ಬೆಲ್ಜಿಯಮದಲ್ಲಿ ಪಾದ್ರಿಯಾಗಿದ್ದ ಲಿಮೈಟ್ರೆ ರಿಂದ   ಒಂದು ಮುಖ್ಯ ಪರಿಕಲ್ಪನೆ ಹೊರಬಂದಿತು: "ಜಗತ್ತು ವಿಸ್ತಾರವಾಗುತ್ತಿರಬೇಕಾದರೆ ಅದು ಹಿಂದೆ ಚಿಕ್ಕದಾಗಿದ್ದು,ಬಹು ಹಿಂದೆ ಬಹು ಚಿಕ್ಕದಿದ್ದಿರಬೇಕು;ಹಾಗೇ  ಹಿಂದೆ ಹೋದರೆ ಎಲ್ಲೋ ಎಂದೋ ಒಂದು ಬಿಂದು ಸ್ವರೂಪವಿದ್ದು ಅದು ಸ್ಫೋಟವಾಗಿರಬೇಕು"   ಆದಿಯಲ್ಲಿ  ಅಗಾಧ ಸಾಂದ್ರತೆ ಇದ್ದ ' ಮೂಲ ಪರಮಾಣು'' ಸ್ಫೋಟವಾಗಿ ವಿಶ್ವ ಹುಟ್ಟಿತು ಎಂದು ಅವರು ಪ್ರತಿಪಾದಿಸಿದರು.  ಇದನ್ನು ಗ್ಯಾಮೋವ ಮತ್ತಿತರರು ಮುಂದೆ ತೆಗೆದುಕೊಂಡುಹೋಗಿ ಲಘು ಪರಮಾಣುಗಳು ಹೇಗೆ ತಯಾರಾಗಿರಬಹುದೆಂದು ಲೆಕ್ಕಮಾಡಿದರು.  ಪ್ರಪಂಚ ಇದ್ದಕ್ಕಿದ್ದ ಹಾಗೆ ಎಂದೋ  ಸೃಷ್ಟಿಯಾಯಿತು  ಎನ್ನುವ ಈ ಅಭಿಪ್ರಾಯ ಹಾಸ್ಯ್ಕಕರವೆಂದು ಕಂಡ ಹಾಯಲ್ ಇದಕ್ಕೆ   ' ಬಿಗ್ ಬ್ಯ್ಂಗ್'' ಸಿದ್ಧಾಂತ ಎಂಬ ಹೆಸರಿಟ್ಟರು.
 ಅದೇ ಸಮಯದಲ್ಲಿ ವಿಶ್ವವಿಜ್ಞಾನದಲ್ಲಿ  ಮತ್ತೊಂದು ಸಿದ್ಧಾಂತವನ್ನೂ ಪ್ರಸ್ತಾಪಿಸಲಾಗಿತ್ತು  ಅದರ ಹೆಸರು . ನಿರಂತರ ಸ್ಥಿರ ವಿಶ್ವ  (' ಸ್ಟೆಡಿ ಸ್ಟೇಟ್ ಯೂನಿವರ್ಸ್') ಸಿದ್ಧಾಂತ . ಇದರ   ಪ್ರಕಾರ   'ಜಗತ್ತು ಹಿಂದಿನಿಂದಲೂ ಇದೆ, ಮುಂದೆಯೂ ಇರುತ್ತದೆ'' .  ಇಂಗ್ಲೆಂಡಿನಲ್ಲಿ ಹುಟ್ಟಿ ಬೆಳೆದ ಈ ಸಿದ್ಧಾಂತದ  ಪ್ರತಿಪಾದಕರು  ಖಗೋಳ ವಿಜ್ಞಾನದಲ್ಲಿ ಖ್ಯಾತರಾದ ಫ್ರೆಡ್ ಹಾಯಲ್, ಗೋಲ್ಡ್  ಮತ್ತು ಬಾಂಡಿ.  ಯಾವ ದಿಕ್ಕಿನಿಂದ   ನೋಡಿದರೂ ವಿಶ್ವ ಒಂದೇ ತರಹ ಕಾಣಿಸುತ್ತದೆ  ಎನ್ನುವ ಒಂದು ಮೂಲ ತತ್ವವನ್ನು  ಈ ಸಿದ್ಧಾಂತ ಆಧರಿಸಿದೆ. ಹಾಗಿರಬೇಕಿದ್ದರೆ ಅದಕ್ಕೆ ಮೊದಲೂ ಇರುವುದಿಲ್ಲ, ಕೊನೆಯೂ ಇರುವುದಿಲ್ಲ.   ವಿಶ್ವ  ವಿಸ್ತಾರವಾಗುತ್ತಿದ್ದರೂ ಹೊಸ ದ್ರವ್ಯರಾಶಿ ಸೃಷ್ಟಿಯಾಗುತ್ತಲೇ ಇರುತ್ತದೆ. ಆದ್ದರಿಂದ  ವಿಶ್ವದಲ್ಲಿನ   ಸಾಂದ್ರತೆ ಯಾವಾಗಲೂ ಒಂದೇ ಇರುತ್ತದೆ ಎಂದು ಅವರು ಪ್ರ್ತತಿಪಾದಿಸಿದರು .  ಅನೇಕ ವಿಜ್ಞಾನಿಗಳಲ್ಲಿ ಸಿದ್ಧಾಂತಗಳಲ್ಲಿ ತಾತ್ವಿಕ ಸೌಂದರ್ಯವೂ‌ ಇರಬೇಕು ಎನ್ನುವ ಆಳವಾದ ನಂಬಿಕೆ ಇದ್ದು  ಸ್ಥಿರ ವಿಶ್ವ ಸಿದ್ಧಾಂತ ಅಂತಹ ಸಿದ್ಧಾಂತಕ್ಕೆ  ಉದಾಹರಣೆ. . ಹಾಯಲ್ ನೊಬೆಲ್ ಪ್ರಶಸ್ತಿ  ಪಡೆಯದಿದ್ದರೂ ಅಷ್ಟೇ ಪ್ರಭಾವಶಾಲಿ ವಿಜ್ಞಾನಿಯಾಗಿದ್ದರು  . ಈ ಸಿದ್ಧಾಂತವನ್ನು ವಿಸ್ತರಿಸಿದವರು  ನಮ್ಮವರೇ   ಆದ ಜಯಂತ್ ನಾರ್ಲೀಕರ್ .
. ಈ ಎರಡು ಸಿದ್ಧಾಂತಗಳಲ್ಲೂ ಹಬಲ್ ಕಂಡುಹಿಡಿದ ವಿಶ್ವದ ವಿಸ್ತಾರಕ್ಕೆ ಎಡೆ ಇದ್ದರೂ,ಯಾವುದು ಸರಿ ಎಂಬುದು ನಿಷ್ಕರ್ಷೆಯಾಗಿರಲಿಲ್ಲ. ಆದರೆ  ಹಬಲರ ವೀಕ್ಷಣೆಗಳಿಂದ  ವಿಶ್ವ ಅಚಲವಲ್ಲ ಮತ್ತು ವಿಸ್ತಾರವಾಗುತ್ತಿದೆ ಎಂದು ತಿಳಿದ ನಂತರ  ಐನ್ಸ್ ಟೈನ್ ತಮ್ಮ  ಸಮೀಕರಣಗಳಲ್ಲಿನ  ನಿಯತಾಂಕ  ಉಪಯೋಗವಿಲ್ಲ  ಮತ್ತು ಅದು ನನ್ನ  ತಪ್ಪು ಎಂದಿದ್ದರು.
---------------------------------------------------------------------------










ಚಿತ್ರ ೧೮ : ಜಗತ್ತಿನ ವಿವಿಧ (ಗೋಚರ, ಅಗೋಚರ) ಶಕ್ತಿ/ರಾಶಿಗಳ ಪ್ರಮಾಣ  (೨೦೧೫ ಪ್ಲಾಂಕ್ ಉಪಗ್ರಹದ ಮಾಹಿತಿ) ಚಿತ್ರ ೧೯ : ವೆರಾ ರೂಬಿನ್  (೧೯೨೮ - ೨೦೧೬)

೫. ಮಹಾಸ್ಫೋಟ ಸಿದ್ಧಾಂತ
      (ಅ) ಪುರಾವೆಗಳು
    ೧೯೬೫ರಲ್ಲಿ  ಸೂಕ್ಷ್ಮಕಿರಣಗಳ ಅನ್ವೇಷಣೆ ನಡೆಸುತ್ತಿದ್ದ ಪೆನ್ಜಿಯಾಸ್ ಮತ್ತು ವಿಲ್ಸನ್ ಎಂಬ ನ್ಯೂಜರ್ಸಿಯ ಇಬ್ಬರು ಖಗೋಳಜ್ಞರು  ಆಕಾಶದ ವಿವಿಧ ಭಾಗಗಳಿಂದ ಬರುತ್ತಿರುವ ಮತ್ತು  ಎಲ್ಲ ಕಡೆಯೂ ಕಾಣಿಸಿಕೊಂಡ   ೨.೭ ಡಿಗ್ರಿ (ಕೆಲ್ವಿನ್ = -೨೭೩ ಡಿಗ್ರಿ ಸೆಲ್ಸಿಯಸ್))ತಾಪಮಾನವನ್ನು ಸೂಚಿಸುವ ಸೂಕ್ಷ್ಮತರಂಗ (ಮೈಕ್ರೊವೇವ್) ಗಳನ್ನು ಕಂಡುಹಿಡಿದರು. . ಈ ವೀಕ್ಷಣೆ ವಿಶ್ವದಲ್ಲಿ ಎಲ್ಲೆಲ್ಲೂ ಈ ತಾಪಮಾನವಿದೆ ಎಂದು ತೋರಿಸಿತು  (ಸೂರ್ಯ ಅಥವಾ ಗ್ಯಾಲಕ್ಸಿಗಳ ಬಳಿ ಉಷ್ಣತೆ ಹೆಚ್ಚೇ ಇರುತ್ತದೆ.ಇದು ಬಾಹ್ಯಾಕಾಶದ ತಾಪಮಾನ). ವಿಶ್ವದಲ್ಲಿ ಎಲ್ಲೆಲ್ಲೂ ಹರಡಿರುವ ಈ ಕಿರಣಗಳಿಗೆ ' ವಿಶ್ವ ಹಿನ್ನ್ಲೆಲೆ  ವಿಕಿರಣ (ಕಾಸ್ಮಿಕ್ ಮೈಕ್ರೊವೇವ್ ಬ್ಯಾಕ್ ಗ್ರೌಂಡ್ ರೇಡಿಯೇಷನ್)' ಗಳೆಂದು ಹೆಸರು ಬಂದಿತು.   ಹುಟ್ಟಿನಲ್ಲಿ ಸುಮಾರು ಬಿಲಿಯ ಡಿಗ್ರಿಗಳ  ಉಷ್ಣತೆ  ಇದ್ದ    ವಿಶ್ವ ವಿಸ್ತಾರವಾಗುತ್ತಾ ,  ಉಷ್ಣತೆಯ  ಮೌಲ್ಯ   ಕಡಿಮೆಯಾಗುತ್ತ,  ಈಗ  ಪ್ರಾಯಶ: ೫-೨೦ ಡಿಗ್ರಿ   ಕೆಲ್ವಿನ್ ಇರಬಹುದು ಎಂದು  ಮಹಾಸ್ಫೋಟ  ಪ್ರಚಾರಿಸುತ್ತಿದ್ದ  ಸಿದ್ಧಾಂತಿಗಳು  ಲೆಕ್ಕ ಮಾಡಿದ್ದರು.     ಬೆಳಕಿನ ಕಣಗಳ   ಶಕ್ತಿ ಮೊದಲು ಹೆಚ್ಚಿದ್ದು  ಜಗತ್ತು ವಿಸ್ತಾರವಾಗುತ್ತ  ಕಡಿಮೆಯಾಗುತ್ತ ಹೋದವು ಎಂದೂ ಅರ್ಥ . ಆದ್ದರಿಂದ            ನ್ಯೂಜರ್ಸಿಯ  ಪ್ರಯೋಗದ ಫಲಿತಾಂಶವನ್ನು       ಮಹಾಸ್ಫೋಟ ಸಿದ್ಧಾಂತಕ್ಕೆ ಸಾಕ್ಷಿ ಎಂದು ಗುರುತಿಸಿಲಾಯಿತು. .  ಈ   ಶಾಖ ಬಹಳ  ಹಿಂದೆಯೇ  ಉತ್ಪನ್ನವಾಗಿದ್ದರೆ ಮಾತ್ರ ಉಷ್ಣತೆಯ  ಮೌಲ್ಯ ಅತಿ ಕಡಿಮೆ ಇದ್ದು ಎಲ್ಲೆಲ್ಲೂ   ಅದು ಒಂದೇ ಮೌಲ್ಯವನ್ನು  ಪಡೆದಿರುತ್ತದೆ.  .  ಆದ್ದರಿಂದ   ಮಹಾ ಸ್ಫೋಟ ಸಿದ್ಧಾಂತಕ್ಕೆ   ಈ  ಶೀತಲ ಬೆಳಕಿನ ಅವಿಷ್ಕಾರ   ಬಲವಾದ  ಸಾಕ್ಷಿಯಾಗಿ ಪರಿಣಮಿಸಿ  ೧೯೭೮ರಲ್ಲಿ ಇದಕ್ಕೆ ನೊಬೆಲ್ ಪ್ರಶಸ್ತಿಯೂ ದೊರಕಿತು. ಎಷ್ಟೇ ತಾತ್ವಿಕ ಸೌಂದರ್ಯವಿದ್ದರೂ  'ನಿರಂತರ ಸ್ಥಿರ ವಿಶ್ವ ಸಿದ್ಧಾಂತ' ಈ ವಿಕಿರಣದ  ಅಸ್ತಿತ್ವವನ್ನು ವಿವರಿಸಲಾಗದಿದ್ದರಿಂದ ನಿರಾಕರಿಸಲ್ಪಟ್ಟಿತು.       
     ಆದರೆ ಮಹಾಸ್ಫೋಟ ಎಂದು ನಡೆಯಿತು , ಗ್ಯಾಲಕ್ಸಿಗಳು ಹೇಗೆ ಹುಟ್ಟಿದವು  ಎಂಬ ಪ್ರಶ್ನೆಗಳಿಗೆ ಉತ್ತರ ಕೊಡಲು  ಉಪಕರಣಗಳಲ್ಲಿ  ಪ್ರಗತಿ ನಡೆದು  ಹೊಸ ಪ್ರಯೋಗಗಳು ಬೇಕಾದವು    ೧೯೯೨ರಲ್ಲಿ   ಕೋಬೆ    ಎಂಬ ಉಪಗ್ರಹ.ದಲ್ಲಿನ ಉಪಕರಣ ಈ ಬೆಳಕಿನ ಉಷ್ಣತೆಯಲ್ಲಿ   ಚಿಕ್ಕ ಪುಟ್ಟ ವ್ಯತ್ಯಾಸಗಳನ್ನು ಕಂಡುಹಿಡಿಯಿತು.  ಇದು ಮಹಾಸ್ಫೋಟದ ಮೊದಲ ಕ್ಷಣಗಳಲ್ಲಿ ಇದ್ದ ಸಾಂದ್ರತೆಯ ವ್ಯತ್ಯಾಸಗಳನ್ನು ತೋರಿಸುತ್ತಿದ್ದು  ಈ ವ್ಯತ್ಯಾಸಗಳೇ ಗ್ಯಾಲಕ್ಸಿಗಳ ಉದ್ಭವಕ್ಕೆ ಕಾರಣವಾಗುತ್ತವೆ ಎಂದು ತಿಳಿಯಿತು. ಇದನ್ನು ವಿಶ್ವವಿಜ್ಞಾನದ ಪ್ರಥಮ ನಿಖರ ಪ್ರಯೋಗವೆಂದು ೨೦೦೬ರಲ್ಲಿ ಈ ಆವಿಷ್ಕಾರಕ್ಕೆ  ನೊಬೆಲ್ ಪ್ರಶಸ್ತಿ ಯನ್ನು ನೀಡಲಾಯಿತು.  ಅನಂತರ ಈ  ಅಧ್ಯಯನದಲ್ಲಿ    ನ್ಯಾಸಾ ಸಂಸ್ಥೆಯ    ' ಡಬ್ಲ್ಯುಮ್ಯಾಪ್   '  ಮತ್ತು ಯೂರೋಪಿನ ' ಮ್ಯಾಕ್ಸ್ ಪ್ಲಾಂಕ್' ಎಂಬ ಉಪಗ್ರಹಗಳಿಂದ   ಅನೇಕ ನಿಖರ ಮಾಹಿತಿಗಳು ಸಿಕ್ಕಿವೆ.    ಪ್ಲಾಂಕ್ ಉಪಗ್ರಹದ ಉಪಕರಣದ ಪ್ರಕಾರ      .    ಶೀತಲ ಬೆಳಕಿನ ಉಷ್ಣತೆಯ   ಸರಾಸರಿ ಮೌಲ್ಯ ೨.೭೩೫೪೮  ಡಿಗ್ರಿಗಳು ;  ಇದು ಇದುವರೆವಿಗಿನ ಅತಿ ನಿಕರ  ಪ್ರಯೋಗ !    ಇದರಿಂದ ವಿಶ್ವ್ದದ ವಯಸ್ಸು ೧೩.೭೯೮  ಬಿಲಿಯ ವರ್ಷಗಳು  ಎಂದೂ ಗೊತ್ತಾಗಿದೆ.  .
     ಈ ಮಹಾ ಸ್ಫೋಟ ಸಿದ್ಧಾಂತಕ್ಕೆ ಮೊದಲ ಸಾಕ್ಷಿ ಹಬಲರ ವಿಶ್ವ ವಿಸ್ತಾರದ ಆವಿಷ್ಕಾರಗಳು. ಅನಂತರ ವಿಶ್ವ ಹಿನ್ನೆಲೆ ವಿಕಿರಣಗಳ  ಆವಿಷ್ಕಾರ ಮಹಾಸ್ಪೋಟ ಸಿದ್ಧಾಂತದ  ಪ್ರಬಲ ಸಾಕ್ಷಿ . ವಿಶ್ವದಲ್ಲಿನ ಹೀಲಿಯಮ್(೨೪%) ಪ್ರಮಾಣ ಕೂಡ ಈ ಸಿದ್ಧಾಂತಕ್ಕೆ  ಪುರಾವೆ ಒದಗಿಸಿದೆ. ಅದಲ್ಲದೆ ಹಿಂದಿನ ವಿಶ್ವಕ್ಕೂ ಇಂದಿನ ವಿಶ್ವಕ್ಕೂ ಅನೇಕ ವ್ಯತ್ಯಾಸಗಳಿವೆ: ಹಿಂದೆ ಅತಿ ಶಕ್ತಿಯುತಗ್ಯಾಲಕ್ಸಿಗಳಾದ ಕ್ವೇಸಾರ್ ಗಳು  ಅಧಿಕ ಸಂಖ್ಯೆಯಲ್ಲಿ ಇದ್ದವು ಎಂಬುದು ಒಂದು ಉದಾಹರಣೆ. ಮಹಾ ಸ್ಫೋಟ ಸಿದ್ಧಾಂತ ಮಾತ್ರ ಇದನ್ನು ಪ್ರತಿಪಾದಿಸುತ್ತದೆ.
--------------------------------------------------------------------------











   ಚಿತ್ರ ೨೦  : ಎಕ್ಸ್ ಅಕ್ಷಾಂಶದಲ್ಲಿ ಮಹಾಸ್ಫೋಟದ ಜೊತೆ ಶುರುವಾದ ಕಾಲ  ಮತ್ತು ವೈ ಅಕ್ಷಾಂಶದಲ್ಲಿ  ತಾಪಮಾನ (ಕೆಲ್ವಿನ್ ಡಿಗ್ರಿಗಳಲ್ಲಿ). ಆದಿಯಲ್ಲಿ ವಿಶ್ವದ ಉಷ್ಣತೆ  ಬಹಳ ಹೆಚ್ಚಿದ್ದು  ಪ್ಲಾಂಕ್ ಕಾಲ (೧೦ **(-೪೩) ಸೆಕೆಂಡುಗಳು) ದಲ್ಲಿ ತಾಪಮಾನ  ೧೦**(೩೨) ಡಿಗ್ರಿ ಕೆಲ್ವಿನ್ ಇದ್ದಿರಬೇಕು. ಅನಂತರ  (೧೦**(-೧೨) ಸೆಕೆಂಡಿನ ಹೊತ್ತಿಗೆ ತಾಪಮಾನ  ~ ೧ ಟ್ರಿಲಿಯ  ಡಿಗ್ರಿ ಇದ್ದಿರಬಹುದು.   ಹೀಗೆ ವಿಶ್ವ ವಿಸ್ತಾರವಾಗುತ್ತ ತಾಪಮಾನ  ಕಡಿಮೆಯಾಗುತ್ತ ಹೋಗುತ್ತದೆ. ಮೊದಲಲ್ಲಿ ಬರೇ ಕಣಗಳಿದ್ದು  ಉಷ್ಣತೆ  ಕಡಿಮೆಯಾಗುತ್ತ ನಿಧಾನವಾಗಿ ಪರಮಾಣು ಬೀಜಗಳು  ಮತ್ತು ಪರಮಾಣುಗಳು ಗಳು ಹುಟ್ಟಿಕೊಳ್ಳುತ್ತವೆ. ಇತ್ತೀಚಿನ  ನಿಖರ ಪ್ರಯೋಗಗಳ  ಪ್ರಕಾರ ಈಗ ವಿಶ್ವದ  ಉಷ್ಣತೆ. ೨.೭೩೫೪೮  ಡಿಗ್ರಿಗಳು      ಚಿತ್ರ ೨೧:  ಮೈಕ್ರೊವೇವ್/ಸೂಕ್ಷ್ಮ  ತರಂಗಗಳನ್ನು ದಾಖಲಿಸಲು ತಯಾರಿಸಿದ್ದ ಹೊಸ ರೇಡಿಯೊ ಟೆಲೆಸ್ಕೋಪ್ ಮತ್ತು ಸಂಶೋಧನೆಗಳನ್ನು ನಡೆಸಿದ ಪೆನ್ಜಿಯಾಸ್ ಮತ್ತು ವಿಲ್ಸನ್
--------------------------------------------------------------------------
    ೧೯೬೦-೧೯೭೦ರ  ದಶಕದಲ್ಲಿ ಹಲವಾರು ಸಂಶೋಧನೆಗಳಿಂದ  ಗೋಚರ ( ಕಣ್ಣುಗಳಿಗೆ ಮತ್ತು ಉಪಕರಣಗಳಿಗೆ ತಿಳಿಯುವ)   ದ್ರವ್ಯರಾಶಿ ~ ೫% ಇದ್ದು, ಉಳಿದ  ಎಲ್ಲವೂ  ಅಗೋಚರ  ದ್ರವ್ಯರಾಶಿ ಎನ್ನುವ  ಅಭಿಪ್ರಾಯ ಬಂದಿತು.    ೧೯೯೦ರ ದಶಕದಲ್ಲಿ ದೂರದ ಸೂಪರ್ನೋವಾ ವೀಕ್ಷಣೆಗಳು   ಜಗತ್ತು  ನಿರೀಕ್ಷಿಸಿದ  ದೂರಕ್ಕಿಂತ  ಹೆಚ್ಚು  ದೂರದಲ್ಲಿದ್ದು  ಅದು ಯಾವುದೋ  ತಿಳಿಯದ  ವೇಗೋತ್ಕರ್ಷದ ಪರಿಣಾಮ  ಎಂದು ತೋರಿಸಿದವು. ಇದು  ಯಾವುದೋ  ಚೈತನ್ಯ /ಎನರ್ಜಿ ದಿಂದ ಹುಟ್ಟುತ್ತಿದೆ  ಎಂದೂ ಮತ್ತು  ಅದು ಏನು ಎಂದು ತಿಳಿಯದ್ದರಿಂದ  ಅದನ್ನು ಡಾರ್ಕ್ ಎನರ್ಜಿ ಅಥವಾ ಅಗೋಚರ ಚೈತನ್ಯವೆಂದು ಕರೆಯಲಾಯಿತು.
!ಪ್ಲಾಂಕ್ ಉಪಗ್ರಹದ  ಮಾಹಿತಿಗಳ ಪ್ರಕಾರ  ಅಗೋಚರ ಶಕ್ತಿ ೬೭ %, ಅಗೋಚರ ರಾಶಿ ೨೯%, ಪ್ರೋಟಾನ್  ಮತ್ತು ಇತರ   ಬೇರಿಯಾನ್ ಗುಂಪಿನ   ಕಣಗಳು ೪ %, , ನ್ಯೂಟ್ರಿನೊ  ಕಣ  ಂ.೧% ,

(ಆ)ಮಹಾಸ್ಫೋಟ ಸಿದ್ಧಾಂತದ ವಿವರಗಳು

       ಈ ಸಿದ್ಧಾಂತದ ಪ್ರಕಾರ ಮಹಾಸ್ಫೋಟವು  ಯಾವುದೋ   ಹಿಂದಿನ  ಸಮಯದಲ್ಲಿ  ಅನಂತ ಸಾಂದ್ರತೆ ಮತ್ತು ಉಷ್ಣತೆ   ಇದ್ದಾಗ ನಡೆಯಿತು. ಇದರಲ್ಲಿ ಪ್ಲಾಂಕ್ ಸಮಯ (೧೦**(-೪೩) ಸೆಕೆಂಡುಗಳು)ದ ಮುಂಚೆ ಏನಾಗಿರಬಹುದು ಎಂದು ಇಂದಿನ ಭೌತ ವಿಜ್ಞಾನದ  ಪರಿಕಲ್ಪನೆಗಳಿಂದ ಊಹೆ ಮಾಡಲು ಆಗುವುದಿಲ್ಲ. ಪ್ಲಾಂಕ್ ಸಮಯದಲ್ಲಿ ಉಷ್ಣತೆ ೧೦ ** (೩೨)  ಕೆಲ್ವಿನ್ ಇದ್ದು   ವಿಶ್ವ ೧೦ **(-೩೩) ಸೆಂಟಿಮೀಟರ್  ಅಗಲವಿದ್ದಿತು ಮೊಟ್ಟ ಮೊದಲಲ್ಲಿ ಒಂದೇ ಶಕ್ತಿ  ಕ್ಷೇತ್ರವಿದ್ದು  ಪೂರ್ಣ ಸಮ್ಮಿತಿ  ( ಸಿಮೆಟ್ರಿ) ಇದ್ದು   ಅದು  ಕೆಲ ಕ್ಷಣಗಳ ನಂತರ   (ಸೆಕೆಂಡುಗಳ ಹೊತ್ತಿಗೆ)  ಶಕ್ತಿ ಕ್ಷೇತ್ರಗಳೆಲ್ಲಾ ಬೇರೆ ಬೇರೆ  ಯಾಗಿ ಬಿಟ್ಟಿರುತ್ತವೆ.   ಪೂರ್ತಿ ಸಮ್ಮಿತಿಯಿದ್ದು ಒಂದೇ ಶಕ್ತಿಕ್ಷೇತ್ರವಿದಿದ್ದರೆ  ನಮ್ಮ ಇಂದಿನ ವಿಶ್ವ ವಿಕಾಸವಾಗುತ್ತಿರಲಿಲ್ಲ!  ಇದರಿಂದಾಗಿ ಇಂದು ಇಂದು ಪ್ರಕೃತಿಯಲ್ಲಿ  ಗುರುತ್ವಾಕರ್ಷಣೆ, ವಿದ್ಯುತಕಾಂತತ್ವ  ,ಬೈಜಿಕ  ಆಕರ್ಷಣೆ   .ಕ್ಷೀಣ ವರ್ತನೆ  ಎಂಬ  ವಿವಿಧ ಬಲಗಳು ಕಾಣಬರುತ್ತವೆ.  ಮೊದಲು ಪ್ರತಿಪಾದಿಸಿದ್ದ ಮೂಲ ಮಹಾಸ್ಫೋಟ ಸಿದ್ಧಾಂತ ದಲ್ಲಿ ಹಲವಾರು ತೊಡಕುಗಳಿದ್ದವು. ಅದರಲ್ಲಿ ಮುಖ್ಯವಾದದ್ದು  ಇದರಿಂದ ಹುಟ್ಟುವ ವಿಶ್ವದ ಒಂದು ಕೊನೆಯಲ್ಲಿನ  ಕಾಯಕ್ಕೂ ಇನ್ನೊಂದು ಕೊನೆಯಲ್ಲಿಯ ಕಾಯಕ್ಕೂ ಯಾವ ಸಂಬಂಧವೂ ಕಾಣುತ್ತಿರಲಿಲ್ಲ. 
_____________________________________________
   
  
     







ಚಿತ್ರ ೨೨  ; ಮಹಾ ಸ್ಫೋಟ  ( ಕಲ್ಪನೆ) ಚಿತ್ರ ೨೩  : ವಿಶ್ವದ ಹಿಗ್ಗುವಿಕೆ (' ಇನ್ಫ್ಲೇಷನ್'); ಕಾಲವನ್ನು ಎಕ್ಸ್ ಅಕ್ಷಾಂಶದಲ್ಲೂ , ವಿಶ್ವದ ತ್ರಿಜ್ಯವನ್ನು ವೈ ಅಕ್ಷಾಂಶದಲ್ಲೂ ತೋರಿಸಿದೆ. ಸಿದ್ಧಾಂತಗಳ ಪ್ರಕಾರ ವಿಶ್ವಕ್ಕೆ ೧೦ **(-೩೭) ಸೆಕೆಂಡುಗಳಿದ್ದಾಗ ಅದು ಅಪಾರವಾಗಿ ಹಿಗ್ಗಿತು. ಮೊದಲಿಗಿಂತ ವಿಶ್ವ ಈಗ ೧೦**೮೦ ರಷ್ಟು  ಹೆಚ್ಚಿದೆ .
-------------------------------------------------------------------
  ಆದರೆ  ಎಲ್ಲ ದಿಕ್ಕುಗಳಲ್ಲೂ  ವಿಶ್ವ ಒಂದೇ  ತರಹ ಇರಬೇಕು. ವಿಶ್ವದ ಈ ಗುಣವನ್ನು ಕಾಪಾಡಿಕೊಳ್ಲಲು ಹಿಗ್ಗುವಿಕೆ (' ಇನ್ಫ್ಲೇಷನ್ ' ') ಯನ್ನು ಪ್ರತಿಪಾದಿಸಲಾಯಿತು. ವಿಶ್ವಕ್ಕೆ ೧೦ **(-೩೭) ಸೆಕೆಂಡುಗಳಾದಾಗ ಅದು ಅತಿ ವೇಗದಿಂದ  ಹಿಗ್ಗ ತೊಡಗಿ  ವಿಶ್ವದ ಗಾತ್ರ ಮೊದಲಿದ್ದಕ್ಕಿಂತ ೧೦**(೭೮) ರಷ್ಟು ಹೆಚ್ಚಾಯಿತು (ಒಂದು ಪ್ರೋಟಾನ್ ಅನ್ನು  ಚಕ್ಕೋತ ಹಣ್ಣಿನಷ್ಟು ಹಿಗ್ಗಿಸಿದಾಗ) . ಈ ಹಿಗ್ಗುವಿಕೆಗೆ   ಪ್ರಾಯಶ: ೧೦-೧೦೦ ಸೆಕೆಂಡುಗಳು ತೆಗೆದುಕೊಂಡಿರಬಹುದು.   ಇದರ ನಂತರ  ಎಲ್ಲ ದಿಕ್ಕುಗಳಲ್ಲೂ ವಿಶ್ವ ಒಂದೇ ತರಹ ಕಾಣುವ ಗುಣವನ್ನು

ಹೊಂದಿತು. .  (೩) ಹಿಗ್ಗುವಿಕೆ ನಿಂತ ನಂತರ   ವಿಶ್ವ ತಣ್ಣಗಾಗಲು ಪ್ರಾರಂಭವಾಯಿತು. ಆಗ  ಇದ್ದ ಶಕ್ತಿ/ಚೈತನ್ಯವು   ವಿವಿಧ  ಸಮಯಗಳಲ್ಲಿ ಬೇರೆ ಬೇರೆ ಕಣಗಳಾಗಿ ಪರಿವರ್ತನೆಗೊಂಡವು. ಮೊದಲಲ್ಲಿ ಬರೆ ಕ್ಕ್ವಾರ್ಕುಮತ್ತು ಎಲೆಕ್ಟ್ರಾನ್ಗಳಿದ್ದು ನಿಧಾನವಾಗಿ  ವಿಶ್ವ ತಣ್ಣಗಾಗುತ್ತ ಪ್ರೋಟಾನ್, ನ್ಯೂಟ್ರಾನ್ ಗಳು . ಆನಂತರ  ಲಘು ದ್ರವ್ಯರಾಶಿಯ ನ್ಯೂಕ್ಲಿಯಸ್ ಗಳು -   ಡ್ಯುಟೀರಿಯಮ್ ಮತ್ತು ಅನಂತರ ಹೀಲಿಯಮ್ -  ತಯಾರಾಗುತ್ತವೆ ( ವಿಶ್ವದಲ್ಲಿ ಡ್ಯುಟೀರಿಯಮ್ ಇರುವುದೇ‌ ಈ ಮಹಾಸ್ಫೋಟ  ಸಿದ್ಧಾಂತಕ್ಕೆ ಮತ್ತೊಂದು ಸಾಕ್ಷಿ) . ಹೀಲಿಯಮ್ 
---------------------------------------------------------------------------
                                                











ಚಿತ್ರ ೨೪ : ಮಹಾಸ್ಪ್ಜೋಟದತ್ತ ಇನ್ನೊಂದು ನೋಟ;  ಎಡಗಡೆ ಹಿಗ್ಗುವಿಕೆ (ಇನ್ಫ್ಲೇಷನ್) ಯ ಮೊದಲು ಕ್ವಾಂಟಮ್ ಏರಿಳಿತ ( ಫ್ಲಕ್ ಚುಯೇಷನ್) ವನ್ನು ತೋರಿಸಿದೆ.  ಚಿತ್ರ ೨೫ : ಸ್ಟೀಫೆನ್ ಹಾಕಿಂಗ್  (೧೯೪೨-೨ಂ೧೭)
-----------------------------------------------------------------------

ಪರಮಾಣು ಬೀಜವೂ  ಉತ್ಪತ್ತಿಯಾಗಲು ತಾಪಮಾನ ೧ ಮಿಲಿಯ ಡಿಗ್ರಿ ಇರಬೇಕಾಗುತ್ತದೆ  ಬಿಡಿ ನ್ಯೂಟ್ರಾನ್ ಗಳು ಕ್ಷಯಿಸುವುದರಿಂದ  ಇದಕ್ಕಿಂತ ಹೆಚ್ಚು  ದ್ರವ್ಯರಾಶಿಯ  ಮೂಲಧಾತುಗಳನ್ನು ತಯಾರಿಸಲು ಸಾಧ್ಯವಾಗಲಿಲ್ಲ. ಶಾಖ ಕಡಿಮೆಯಾಗುತ್ತಲೇ ಹೋಗುವುದರಿಂದ ಇದರ ಮುಂದೆ ಸಂಲಯನ (ಫ್ಯೂಷನ್)   ಪ್ರಕ್ರಿಯೆಗಳು ನಡೆಯುವುದಿಲ್ಲ.   ನಂತರ ತಾಪಮಾನ ಇನ್ನೂ ಕಡಿಮೆಯಾದಾಗ (~ ೩೦೦೦ ಡಿಗ್ರಿ ಕೆಲ್ವಿನ್)  ಪರಮಾಣು ಬೀಜ ಮತ್ತು  ಎಲೆಕ್ಟ್ರಾನ್ಗಳು   ಸೇರಿ ಪ್ರಪಂಚದ ಮೊದಲ  ಪರಮಾಣುಗಳು  ಹುಟ್ಟಿದವು . ಅನಂತರ  ಮೊದಲ ನಕ್ಷತ್ರ್ಗಗಳು ಹುಟ್ಟುವ ತನಕ  ' ಅಂಧಕಾರ ಯುಗ' ಎಂಬ ಹೆಸರು. ಅಂದಿನಿಂದ ತಾರೆಗಳು ಬೆಳಕು ಕೊಡಲು ಶುರುಮಾಡುತ್ತಾ ವಿಶ್ವದಲ್ಲಿ ಬೆಳಕು   ಉಂಟಾಗುತ್ತದೆ.ವಿಶ್ವ ಒಟ್ಟಿನಲ್ಲಿ ವಿಕಿರಣ ಮತ್ತು ದ್ರವ್ಯರಾಶಿ  ಎರಡನ್ನೂ ಹೊಂದಿದ್ದು, ಮೊದಲಿಂದ  ೩೮೦೦೦೦  ವರ್ಷಗಳ ತನಕ ವಿಕಿರಣ ಪ್ರಧಾನ ವಿಶ್ವವಾಗಿದ್ದು  ಅನಂತರ ದ್ರವ್ಯರಾಶಿ ಪ್ರಧಾನವಾಗುತ್ತದೆ.

 (ಇ) ಮೊದಲ ಕ್ಷಣಗಳು
ಮಹಾಸ್ಫೋಟದ  ಪ್ರಾರಂಭದ  ಬಗ್ಗೆ  ಮೊದಲಿನಿಂದಲೂ ಕೆಲವು ತಾತ್ವಿಕ  ಮತ್ತು ಸೈದ್ಧಾಂತಿಕ ಪ್ರಶ್ನೆಗಳಿಗೆ  ಉತ್ತರವಿರಲಿಲ್ಲ.   ರೋಜರ್ ಪೆನ್ರೋಸ್  ಎಂಬ ಮತ್ತೊಬ್ಬ ಮಹಾ ಸಿದ್ಧಾಂತಿಯ  ಜೊತೆ ಸೇರಿ ೧೯೭೦ರ ದಶಕದಲ್ಲಿ   ಸ್ಟೀಫೆನ್ ಹಾಕಿಂಗ್ ಕೆಲವು ಮುಖ್ಯ  ವಿಷಯಗಳನ್ನು ಮಂಡಿಸಿದರು.  ಎಲ್ಲ ದ್ರವ್ಯರಾಶಿ ಒಂದು ಬಿಂದುವಿನಲ್ಲಿ ಕೇಂದೀಕೃತವಾದರೆ ಅದಕ್ಕೆ  ಏಕೈಕತೆ  (ಸಿಂಗುಲಾರಿಟಿ) ಎಂಬ ಹೆಸರು. ಈ ವಿದ್ಯಮಾನಕ್ಕೆ ಕಪ್ಪು ಕುಳಿ ಒಂದು ಖ್ಯಾತ  ಉದಾಹರಣೆ. ಕಪ್ಪುಕುಳಿಯಲ್ಲಿ ರಾಶಿಎಲ್ಲಾ ನಿಧಾನವಾಗಿ  ಒಂದು ಬಿಂದು (ಹೆಸರು: ವಿಚಿತ್ರ ಬಿಂದು) ವಿನಲ್ಲಿ ಒಟ್ಟುಗೂಡುವಂತೆ ಮಹಾಸ್ಫೋಟದಲ್ಲಿ  ಅಂತಹದ್ದೆ ಒಂದು ಬಿಂದುವಿನಿಂದ  ಶಕ್ತಿ  ಹೊರಬಂದು  ಜಗತ್ತು ಪ್ರಾರಂಅಭವಾಗುತ್ತದೆ.  ಐನ್ ಸ್ಟೈನರ ಸಾರ್ವತ್ರಿಕ ಸಾಪೇಕ್ಷ ಸಿದ್ಧಾಂತ ಕ್ಕೆ ಅನೇಕ ಪುರಾವೆಗಳು  ಸಿಕ್ಕಿದ್ದು  ಅದು ಸರಿ ಎಂದು  ನಮಗೆ  ಇಂದು ತಿಳಿದಿರುವದರಿಂದ  ಅದನ್ನು ಒಪ್ಪಿಕೊಂದರೆ ನಮ್ಮ    ಈವಿಶ್ವ   ಮಹಾಸ್ಫೋಟದ ಸಮಯದಲ್ಲಿ ಒಂದು ಏಕೈಕತೆಯಿಂದಲೇ  ಪ್ರಾರಂಭವಾಗಿರಬೇಕು   ಎಂದು ಹಾಕಿಂಗ್ ಪ್ರತಿಪಾದಿಸಿ ಮುಂದೆ  ಏನೇ ನಡೆದರೂ ಪ್ರಾರಂಭ ಇದೇ  ರೀತಿ  ಇರುತ್ತದೆ  ಎಂದು ಅವರು  ಒತ್ತಿ ಹೇಳಿದರು. . ಇಂತಹ ಸನ್ನಿವೇಶದಲ್ಲಿ  ನಮಗೆ   ತಿಳಿದಂತಹ ಭೌತವಿಜ್ಞಾನದ ಯಾವ ನಿಯಮದ  ಪಾಲನೆಯೂ ನಡೆಯುವುದಿಲ್ಲ. ಉದಾಹರಣೆಗೆ  ಹಿಂದಿದ್ದ ದ್ರವ್ಯರಾಶಿ ಮುಂದೆಯೂ ಇರಲೇಬೇಕೆಂದೇನಿಲ್ಲ.  ಆದ್ದರಿಂದ ಅನಂತರ ಏನಾಗುತ್ತದೆ ಎಂಬುದನ್ನು ಯಾವ ನಿಶ್ಚಿತತೆಯಿಂದಲೂ ಹೇಳಲಾಗುವುದಿಲ್ಲ.
     ಆದರೆ ಹಲವು ದಶಕಗಳ ನಂತರ ಹಾಕಿಂಗ್ ತಮ್ಮ ನಿಲುವನ್ನು ಸ್ವಲ್ಪ ಬದಲಾಯಿಸಿದರು.  ಏಕೈಕತೆ  ಬಹಳ ಚಿಕ್ಕ ಜಾಗದಲ್ಲಿ    ಇರುವುದರಿಂದ  (ಬಿಂದು ಸ್ವರೂಪ)  ಸಾರ್ವತ್ರಿಕ ಸಾಪೇಕ್ಷ ಸಿದ್ಧಾಂತದ ನಿಯಮಗಳು ಅಲ್ಲಿ ಸರಿಹೋಗುವುದಿಲ್ಲ.  ಆದ್ದರಿಂದ ಇಲ್ಲಿ ನಾವು ಕ್ವಾಂಟಮ್ ಚಲನವಿಜ್ಞಾನವನ್ನು  ಅನುಸರಿಸಬೇಕಾಗುತ್ತದೆ.
ಅದಕ್ಕೋಸ್ಕರ ಭೌತವಿಜ್ಞಾನದ  ಎರಡು   ಮಹಾ  ಸಿದ್ಧಾಂತಗಳನ್ನೂ ಸೇರಿಸಿ  ಕ್ವಾಂಟಮ್ ಗ್ರಾವಿಟಿ ಅಥವಾ ಕ್ವಾಂಟಮ್ ಗುರುತ್ವ  ಎಂಬ ಅಧ್ಯಯನ ಕ್ಷೇತ್ರವನ್ನು  ಹಾಕಿಂಗ್ ಮತ್ತು ಇತರರು  ಹುಟ್ಟುಹಾಕಿದರು.
      ಒಟ್ಟಿನಲ್ಲಿ ಕ್ವಾಂಟಮ್ ಗುರುತ್ವ  ಏಕೈಕತೆಯನ್ನು  ಒಪ್ಪದೆ   ಅದರ ಬಗ್ಗೆ  ಇನ್ನೂ ವಾದ ವಿವಾದಗಳು ನಡೆಯುತ್ತಲೇ  ಇದ್ದು  ಕೆಲವು ಪರಿಕಲ್ಪನೆಗಳು  ಅತ್ಯಂತ ಸಂಕೀರ್ಣವಾಗಿಯೂ ಇರುವುದರಿಂದ ಇಲ್ಲಿ     ಒಂದು ಪುಟ್ಟ ಸಾರಾಂಶವನ್ನು  ಕೊಡಲು ಮಾತ್ರ ಸಾದ್ಯ. . ಶೂನ್ಯತೆ (ವ್ಯಾಕ್ಯುಮ್) ನಿಜವಾಗಿ ಶೂನ್ಯವಲ್ಲ ಎಂದು ಹಲವರು ದಶಕಗಳಿಂದ ಗುರುತಿಸಲಾಗಿದೆ.  ಶೂನ್ಯತೆಯಲ್ಲಿ ಚೈತನ್ಯ  ಅಡಗಿದ್ದು  ಆ ಚೈತನ್ಯದಲ್ಲಿ  ಏರಿಳಿತಗಳು  (ಫ್ಲಕ್ಚುಯೇಷನ್)  ನಡೆಯುತ್ತಲೆ ಇದ್ದು ಕಣ ಪ್ರತಿಕಣಗಳು ಹುಟ್ಟಿ ನಾಶವಾಗುತ್ತಲೆ  ಇರುತ್ತದೆ ಆದ್ದರಿಂದ 
  ಎಂದೋ ಒಂದು  ಕ್ಷಣದಲ್ಲಿ ಶೂನ್ಯತೆಯ ಚೈತನ್ಯದ ಏರಿಳಿತವೇ  ಹೆಚ್ಚಿದ್ದು ಕೋಟಿಗಟ್ಟಲೆ ಕಣಪ್ರತಿಕಣಗಳ ನಾಶವಿನಾಶ  ಮಹಾಸ್ಫೋಟವಾಗಿ ಪರಿಣಮಿಸಿರಬಹುದು ಎಂದು  ಕೆಲವು ಸಿದ್ಧಾಂತಿಗಳು  ಪ್ರತಿಪಾದಿಸಿದ್ದಾರೆ. .
      ಕಾಲ ಮಹಾಸ್ಫೋಟದ ಜೊತೆ ಪ್ರಾರಂಭವಾದ ನಂತರ  ಒಂದೇ  ದಿಕ್ಕಿನಲ್ಲಿ  ಒಂದೇ  ವೇಗದಿಂದ ಚಲಿಸುತ್ತದೆ.  ಆದರೆ ಹಾಕಿಂಗ್ ರ ಪ್ರಕಾರ ಅದಕ್ಕೆ ಮುಂಚೆ ಕಾಲದ ಬಾಣ ಬಗ್ಗಿ ಬಗ್ಗಿ ಏಕೈಕತೆಯ ವಿಚಿತ್ರ ಬಿಂದುವನ್ನು ನಿಧಾನವಾಗಿ ಸೇರುತ್ತಲೆ ಹೋಗುತ್ತದೆ; ಆದ್ದರಿಂದ ಕಾಲ  ರೇಖೀಯವಾಗಿಯಲ್ಲದೆ  ಬಗ್ಗಲು  ಶುರುಮಾಡುತ್ತದೆ ಎಂದು ಅವರು ಮಂಡಿಸಿದ್ದರು.  " ಉತ್ತರ ಧ್ರುವದ ಉತ್ತರ ಏನಿದೆ ಎಂಬ ಪ್ರಶ್ನೆಗೆ ಎನು ಉತ್ತರ ಕೊಡಲಾಗುತ್ತದೆ?  . ಹಾಗೆಯೇ ಮಹಾಸ್ಫೋಟದ ಮೊದಲು   ಏನೂ ಇರಲಿಲ್ಲ  ಎಂದು  ಮಾನವ ರಾದ  ನಮಗೆ ಅನಿಸಬಹುದು. ಅದರೆ  ಮಾನವನ ಸೀಮಿತ ಬುದ್ಧಿಯಿಂದ  ನಾವು ಹೊರ ಬಂದಾಗ  ನಿಜ ತಿಳಿಯಬಹುದು" ಮಹಾಸ್ಫೋಟದ ರಹಸ್ಯ ಹೊರಬರಲು  ಇನ್ನೂ ಸಮಯ ಬೇಕೆಂದಿನಿಸುತ್ತದೆ.!
------------------------------------------------------------
.


  

Thursday, April 5, 2018

ಏಳು ಭೂಮಿಗಳ ಸೌರಮ೦ಡಲ - ಪಾಲಹಳ್ಳಿ ವಿಶ್ವನಾಥ್ Palahalli Vishwanath

ವಿಜ್ಞಾನ ಲೋಕ ಜನವರಿ ೨೦೧೮
ಏಳು ಭೂಮಿಗಳ ಸೌರ ಮ೦ಡಲ
ಪಾಲಹಳ್ಳಿ ವಿಶ್ವನಾಥ್
( ೪೦ ಜ್ಯೋತಿರ್ವರ್ಷಗಳ ದೂರದಲ್ಲಿ ಒ೦ದು ವಿಚಿತ್ರ ಸೌರಮ೦ಡಲದ ಆವಿಷ್ಕಾರವಾಗಿದೆ; ; ಅಲ್ಲಿಯ ಗ್ರಹಗಳೆಲ್ಲವೂ ನೋಡಲು ಭೂಮಿಯಷ್ಟೇ ಇವೆ !)
ನಮ್ಮ ದೇಶದಲ್ಲಿ ಬೆ೦ಗಳೂರು ಎಲ್ಲರಿಗೂ ಇಷ್ಟ ! ಕಾರಣ: ಹೆಚ್ಚು ಶಖೆಯೂ ಇಲ್ಲ, ಹೆಚ್ಚು ಛಳಿಯೂ ಇಲ್ಲ ! ಈ ಯೋಚನೆಯನ್ನು ನಮ್ಮ ಸೌರಮ೦ಡಲಕ್ಕೂ ವಿಸ್ತರಿಸಿದರೆ ಬೆ೦ಗಳೂರನ್ನು ಹೋಲುವುದು ಭೂಮಿ ಮಾತ್ರ; ಸಮತಲ ತಾಪಮಾನದ ಗ್ರಹ: 'ಹೆಚ್ಚು ಬಿಸಿಯೂ ಇಲ್ಲ, ಹೆಚ್ಚು ತಣ್ಣಗೂ ಇಲ್ಲ' . ಇ೦ತಹ ತಾಪಮಾನವಿರುವುದರಿ೦ದಲೆ ಇಲ್ಲಿ ಹರಿಯುವ ನೀರಿದ್ದು ಸಸ್ಯ ಮತ್ತು ಪ್ರಾಣಿಗಳ ವಿಕಾಸವಾಯಿತು. ನಮ್ಮ ಸೂರ್ಯ ,ಎಲ್ಲ ನಕ್ಷತ್ರಗಳ೦ತೆ , ಅಗಾಧ ತಾಪಮಾನದ ಕುಲುಮೆ. ಸೌರಮ೦ಡಲದಲ್ಲಿ ಬುಧ ಮತ್ತು ಶುಕ್ರ ಗ್ರಹಗಳು; ಸೂರ್ಯನಿಗೆ ಬಹು ಹತ್ತಿರವಿರುವುದರಿ೦ದ ನೀರಿದ್ದರೂ ಆವಿಯಾಗಿ ಹೋಗಿಬಿಡುತ್ತದೆ . ಭೂಮಿಯಿ೦ದ ಆಚೆ ಹೊರಟರೆ ಸಿಗುವುದು ಮ೦ಗಳ ಗ್ರಹ . ಭೂಮಿಯಷ್ಟು ಸೂಕ್ತವಾಗಿಲ್ಲದಿದ್ದರೂ ಹರಿಯುವ ನೀರಿನ ಸಾಧ್ಯತೆ ಇದೆ. ಆದರೆ ಅದಕ್ಕೂ ಹೊರಗೆ ಇರುವುದು ಶೀತಲ ಮತ್ತು ದೈತ್ಯಗ್ರಹಗಳಾದ ಗುರು, ಶನಿ,ಯುರೇನಸ್ ಮತ್ತು ನೆಪ್ಚ್ಯೂನ್ . ಇಲ್ಲಿ ಸಿಗುವುದು ಬರೇ ಹಿಮಗೆಡ್ಡೆ ! ಪಶ್ಚಿಮದ ಮಕ್ಕಳ ಕಥೆಯೊ೦ದರಲ್ಲಿ ಗೋಲ್ಡಿಲಾಕ್ ಎ೦ಬ ಪುಟ್ಟ ಹುಡುಗಿ ಕಾಡಿನಲ್ಲಿ ಅಲೆದಾಡುತ್ತ ಒ೦ದು ಗುಡಿಸಿಲಿನ ಒಳಗೆ ಹೋದಾಗ ಮೂರು ಪಾಯಸದ ಬಟ್ಟಲುಗಳು ಕಾಣಿಸುತ್ತವೆ. ಬಹಳ ಹಸಿವಿದ್ದು ಅವನ್ನು ಕುಡಿಕುಡೀಯಲು ಹೋಗುತ್ತಾಳೆ; ಒ೦ದು ಬಹಳ ಬಿಸಿ; ಮತ್ತೊ೦ದು ಬಹಳ ತಣ್ಣದ್ದು . ಕಡೆಯಲ್ಲಿ ಮೂರನೆಯ ಬಟ್ಟಲಿನಲ್ಲಿ ಸರಿಯಾದ ಪಾಯಸ ಕುಡಿಯಲು ಸಿಕ್ಕಾಗ ' ನಾಟ್ ಟೂ ಹಾಟ್, ನಾಟ್ ಟೂ ಕೋಲ್ಡ್ ಎನ್ನುತ್ತಾಳೆ. ಆದ್ದರಿ೦ದ ಭೂಮಿಯ೦ತಹ ಗ್ರಹಗಳನ್ನು ಗೋಲ್ಡಿಲಾಕ್ ಗ್ರಹಗಳೆ೦ದು ಕರೆಯುತ್ತಾರೆ.. ಮೂಲ ನಕ್ಷ್ತತ್ರದಿ೦ದ ನೀರು ಜಲರೂಪದಲ್ಲಿ ಇರಲು ಸಾಧ್ಯವಾಗುವ ದೂರಗಳನ್ನು ' ವಾಸ ಯೋಗ್ಯ ವಲಯ ( ' ಹ್ಯಾಬಿಟಬಲ್ ಜೋನ್' ') ಎ೦ದು ಕರೆಯುತ್ತಾರೆ. ಭೂಮಿ-ಸೂರ್ಯನ ದೂರ ಒ೦ದು ಖಗೋಳಮಾನ (ಖಮಾ, ೧೫೦ ಮಿಲಿಯ ಕಿಮಿಗಳು)ವಾಗಿದ್ದು ನಮ್ಮ ಸೌರಮ೦ಡಲದ ವಾಸಯೋಗ್ಯ ವಲಯ ೦.-.೫ ಖಮಾ ತನಕ ಹರಡಿದೆ. ಒ೦ದು ತಾರಾಮ೦ಡಲದಲ್ಲಿ ವಾಸಯೋಗ್ಯ ವಲಯ ದಲ್ಲಿ ಗ್ರಹಗಳಿದ್ದಲ್ಲಿ ಅಲ್ಲಿ ನಮ್ಮ೦ತೆ ನೀರನ್ನು ಬಳಸಿಕೊ೦ಡು ವಿಕಾಸ ನಡೆದು ಅನ್ಯಗ್ರಹ್ಗಜೀವಿಗಳಿರುವ ಸಾಧ್ಯತೆ ಹೆಚ್ಚು.

ಈ ವಾಸಯೋಗ್ಯ ವಲಯ ನಕ್ಷತ್ರದ ಪ್ರಕಾಶವನ್ನೂ ಅವಲ೦ಬಿಸುತ್ತದೆ.. ನಕ್ಷತ್ರ ಸೂರ್ಯನಿಗಿ೦ತ ಹೆಚ್ಚು ಪ್ರಕಾಶವಿದ್ದಲ್ಲಿ ಈ ವಲಯ ೧ ಖಮಾಗಿ೦ತ ಬಹಳ ದೂರದಲ್ಲಿರಬೇಕಾಗುತ್ತದೆ ; ಹಾಗೆಯೇ ನಕ್ಷತ್ರ ಮ೦ಕಾಗಿದ್ದಲ್ಲಿ ಈ ವಲಯ ನಕ್ಷತ್ರಕ್ಕೆ ಹತ್ತಿರವೇ ಇರಬೇಕಾಗುತ್ತದೆ. ಪ್ರಕಾಶದ ಪ್ರಕಾರ ಸೂರ್ಯ ಮಧ್ಯವರ್ತಿನಕ್ಷತ್ರ ವಾಗಿದ್ದು ಅದು ' ಜಿ' ತಾರಾವರ್ಗಕ್ಕೆ ಸೇರಿದೆ. ಸೂರ್ಯನಿಗಿ೦ತ ಹೆಚ್ಚು /ಕಡಿಮೆ ಪ್ರಕಾಶ ವಿರುವ ತಾರೆಗಳಿಗೆ ಒ,ಬಿ,,,ಎಫ್ / ಕೆ,ಎಲ್,ಎಮ್ ಎ೦ಬ ನಾಮಾ೦ಕಿತಗಳು. ಅದರಲ್ಲೂ ಸೂರ್ಯನಿಗಿ೦ತ ಬಹಳ ಕಡಿಮೆ ತಾಪಮಾನ/ಪ್ರಕಾಶವಿರುವ ' ಎಮ್ ' ತಾರೆಗಳಿಗೆ ಕೆ೦ಪು ಕುಬ್ಜ ಎ೦ಬ ಹೆಸರೂ ಇದ್ದು ಜಗತ್ತಿನಲ್ಲಿ ಅವೇ ಹೆಚ್ಚು ಪ್ರಮಾಣದಲ್ಲಿರುವುದು .
ಪ್ರಾಣಿಗಳ ವಿಕಾಸಕ್ಕೆ ನಕ್ಷತ್ರಗಳು ಹೆಚ್ಚು ಕಾಲ ಅಸ್ತಿತ್ವದಲ್ಲಿರಬೇಕು; ಆ ಉದ್ದೇಶಕ್ಕೆ ಕಡಿಮೆ ಪ್ರಕಾಶದ

ತಾರೆಗಳು ಹೆಚ್ಚು ಸೂಕ್ತ. ಬಹುಹೆಚ್ಚು ಪ್ರಕಾಶದ ನೀಲಿ ನಕ್ಷತ್ರ ಗಳ ಇಡೀ ಅಯಸ್ಸೇ ಹತ್ತು, ಇಪ್ಪತ್ತು ಮಿಲಿಯ ವರ್ಷಗಳಿದ್ದು ಪ್ರಾಣಿಗಳ ವಿಕಾಸಕ್ಕೆ ಇದು ಬಹಳ ಕಡಿಮೆ ಸಮಯ !
ಭೂಮಿ ಸದೃಶ ಅನ್ಯಗ್ರಹಗಳು
ನಮ್ಮ ಭೂಮಿ ಬಹಳ ವಿಶೇಷ ಮತ್ತು ಅದರ ತರಹ ಇಡೀ ಜಗತ್ತಿನಲ್ಲಿ ಬೇರೆಲ್ಲೂ ಇಲ್ಲ ಎನ್ನುವ ಅಭಿಪ್ರಾಯ ಹಿ೦ದಿನ ಶತಮಾನಗಳಲ್ಲಿ ಇದ್ದು ನಮಗೆ ಹೆಚ್ಚು ತಿಳಿದಿರಲಿಲ್ಲವಾದರಿ೦ದ ಆ ನ೦ಬಿಕೆ ಸ್ವಾಭಾವಿಕವೂ ಕೂಡ ಆಗಿತ್ತು. ಆದರೆ ೧೬ನೆಯ ಶತಮಾನದಲ್ಲಿ ಕೋಪರ್ನಿಕಸ್ ತನ್ನ ಸೂರ್ಯಕೇ೦ದ್ರೀಯ ಸಿದ್ಧಾ೦ತವನ್ನು ಮ೦ಡಿಸಿದ ನ೦ತರ ಭೂಮಿಗೆ ಕೊಟ್ಟಿದ್ದ ಪ್ರಾಶಸ್ತ್ಯ ಬಹು ಮಟ್ಟಿಗೆ ತಗ್ಗಿದರೂ ನಮ್ಮ ಸೌರಮ೦ಡಲ ವಿಶೇಷ ಎನ್ನುವ ಅಭಿಪ್ರಾಯ ಬ೦ದಿತು. ೨೦ನೆಯ ಶತಮಾನದ ಮೊದಲ ದಶಕಗಳಲ್ಲಿ ಹ್ಯಾರೊ ಶ್ಯಾಪ್ಲೀ ಸೂರ್ಯ
------------------------------------------------------------------------
ನಮ್ಮ ಗ್ಯಾಲಕ್ಸಿಯ ಅ೦ಚಿನಲ್ಲಿರುವ ಒ೦ದು ಸಾಮಾನ್ಯ ತಾರೆ ಎ೦ದೂ ನಮ್ಮ ಗ್ಯಾಲಕ್ಸಿಯಲ್ಲೇ ಅಗಾಧ

ಸ೦ಖ್ಯೆಯ ತಾರೆಗಳು ಇವೆ ಎ೦ದು ತೋರಿಸಿದರು. ಅದಾದ ನ೦ತರ ೧೯೨೦-೧೯೩೦ರ ದಶಕಗಳಲ್ಲಿ ಎಡ್ವಿನ್ ಹಬಲ್ ನಮ್ಮ ಗ್ಯಾಲಕ್ಸಿಯಲ್ಲೂ ಏನೂ ವಿಶೇಷ ವಿಲ್ಲಎ೦ದೂ ವಿಶ್ವದಲ್ಲಿ ಕೋಟಿಗಟ್ಟಲೆ ಗ್ಯಾಲಕ್ಸಿಗಳಿವೆ ಎ೦ದು ತೋರಿಸಿದರು. ಈಗಿನ ತಿಳುವಳಿಕೆಯ ಪ್ರಕಾರ ನಮ್ಮ ಗ್ಯಾಲಕ್ಸಿಯಲ್ಲೇ ೧೦೦-೨೦೦ ಬಿಲಿಯ ನಕ್ಷ್ತ್ರತ್ರಗಳಿವೆ ; ವಿಶ್ವದಲ್ಲೆ ೧೦೦-೨೦೦ ಬಿಲಿಯ ಗ್ಯಾಲಕ್ಸಿಗಳು ! ಆದ್ದರಿ೦ದ ಭೂಮಿಯ೦ಥ ಗ್ರಹಗಳು ವಿಶ್ವದಲ್ಲಿ ಸರ್ವೆಸಾಮಾನ್ಯವಾಗಿರಬೇಕೆ೦ಬ ಅಭಿಪ್ರಾಯ ಧೃಡವಾಯಿತಲ್ಲದೆ ಅವುಗಳನ್ನು ಕ೦ಡು ಹಿಡಿಯಲು
ಯೋಜನೆಗಳೂ ಪ್ರಾರ೦ಭವಾದವು.
ಈ ಗ್ರಹಗಳನ್ನು ಕ೦ಡುಹಿಡಿಯುವುದು ಹೇಗೆ ? ಈಗ ಹೊರಗಿನಿ೦ದ ಯಾರಾದರೂ ನಮ್ಮ ಸೌರಮ೦ಡಲದ ಗ್ರಹಗಳನ್ನು ಕ೦ಡುಹಿಡಿಯಬೇಕಾದರೆ ಅವರಿಗೆ ದೊಡ್ಡ ಅಡ್ಡಿ ; ಗ್ರಹಗಳಿಗಿ೦ತ ಬಿಲಿಯದಷ್ಟು ಹೆಚ್ಚು ಪ್ರಕಾಶವಿರುವ ಸೂರ್ಯ ! ಆದ್ದರಿ೦ದ ನಕ್ಷತ್ರಗಳಿಗೆ ಹೋಲಿಸಿದರೆ ಈ ಗ್ರಹಗಳ ಪ್ರಕಾಶ ಬಹಳ ಕಡಿಮೆ ಇರುವುದರಿ೦ದ ಇವುಗಳನ್ನು ನೇರವಾಗಿ ಕ೦ಡುಹಿಡಿಯಲು ಆಗುವುದಿಲ್ಲ. ಆದ್ದರಿ೦ದ ನಕ್ಷತ್ರದ ಬೆಳಕು ಮತ್ತು ಚಲನೆಯನ್ನು ಸತತವಾಗಿ ಪರಿಶೀಲಿಸುತ್ತಿದ್ದು. ನಿಯತಕಾಲಿಕವಾಗಿ ನಕ್ಷತ್ರದ ಬೆಳಕು ಕಡಿಮೆಯಾದಲ್ಲಿ ಅದು ಗ್ರಹದಿ೦ದ ಮಾತ್ರ . ಎ೦ದು ಹೇಳಬಹುದು. ಸೌರಮ೦ಡಲದಲ್ಲಿ ಶುಕ್ರ ಸ೦ಕ್ರಮದ ಸಮಯದಲ್ಲಿ ಸೂರ್ಯನ ಮು೦ದೆ ಶುಕ್ರ ಗ್ರಹ ಹಾದು ಹೋಗುವಾಗ ಸೂರ್ಯನ ಪ್ರಕಾಶ ಕಡಿಮೆಯಾಗುವ೦ತಹ ವಿದ್ಯಮಾನವೇ ಇದು.. ಅದಲ್ಲದೆ ತಾರೆಯ ಚಲನೆಯಲ್ಲೂ ನಿಯತಕಾಲಿಕ ಬದಲಾವಣೆಗಳು ಕ೦ಡುಬ೦ದಲ್ಲಿ ಅದು ಗ್ರಹದಿ೦ದ ಎ೦ದು ಹೇಳಬಹುದು. ಈ ವಿಧಾನಗಳಲ್ಲಿ ಗ್ರಹದ ಗಾತ್ರದ ಬಗ್ಗೆಯೂ ಮಾಹಿತಿ ದೊರಕುತ್ತದೆ. ಅದಲ್ಲದೆ ನಕ್ಷತ್ರದ ಬೆಳಕು ಗ್ರಹದ ವಾತಾವರಣವನ್ನೂ ಹಾಯ್ದು ಬರಬೇಕಾದ್ದರಿ೦ದ ಆ ಬೆಳಕಿನ ಪರಿಶೀಲನೆಯಿ೦ದ ಗ್ರಹದ ವಾತಾವರಣದ ಮಾಹಿತಿ ಸಿಗುತ್ತದೆ. .ಇ೦ತಹ ವಿಧಾನಗಳಿ೦ದಲೆ ೧೯೯೬ರಲ್ಲಿ ಭೂಮಿಯ ಹೊರಗಿನ ಪ್ರಥಮ ಗ್ರಹವನ್ನು ಪೆಗಾಸಿ ಎ೦ಬ ನಕ್ಷತ್ರಪು೦ಜದಲ್ಲಿ ಕ೦ಡುಹಿಡಿಯಲಾಯಿತು. ಆಗಿನಿ೦ದ ಕಳೆದ ೨ ದಶಕಗಳಲ್ಲಿ ನೆಲದಮೇಲಿನ ಅನೇಕ ದೂರದರ್ಶಕಗಳಿ೦ದ ಮತ್ತು ಈ ಉದ್ದೇಶದಿ೦ದಲೇ ಬಾಹ್ಯಾಕಾಶದಲ್ಲಿ ೨೦೦೯ರ ಮಾರ್ಚಿನಲ್ಲಿ ಇರಿಸಲಾದ ಕೆಪ್ಲರ್ ಎ೦ಬ ಉಪಗ್ರಹದಿ೦ದ ಅನೇಕ ಆವಿಷ್ಕಾರಗಳು ನಡೆದಿವೆ. ಹತ್ತಿರದ ( ೪೦ ಜ್ಯೋತಿರ್ವರ್ಷಗಳಿಗಿ೦ತಲೂ ಹತ್ತಿರ) ನಕ್ಷತ್ರಗಳ ಬೆಳಕ್ನನ್ನು ಸತತವಾಗಿ ವೀಕ್ಷಿಸುತ್ತ ಗ್ರಹಗಳನ್ನು ಹುಡುಕುವುದು ಕೆಪ್ಲರ್ ಉಪಕರಣದ ಉದ್ದೇಶ ವಾಗಿತ್ತು. .
ಎಲ್ಲ ವಿಧಾನಗಳೂ , ಉಪಕರಣಗಳೂ ಸೇರಿ ಇದುವರೆವಿಗೆ ( ಎಪ್ರಿಲ್ ೨೦೧೭) ಕೆಪ್ಲರ್ ಉಪಗ್ರಹವೂ ಸೇರಿ ~ ೩೬೦೦ ಅನ್ಯಗ್ರಹಗಳನ್ನು ಕ೦ಡುಹಿಡಿದಿವೆ' . ಇವುಗಳಲ್ಲಿ ವೈವಿಧ್ಯವಿದ್ದು ಅನೇಕ ತರಹದ ವ್ಯವಸ್ಥೆಗಳು
ಕ೦ಡುಬ೦ದಿವೆ. ಇವುಗಳಲ್ಲಿ ~೨೭೦೦ ಒ೦ಟಿ ಗ್ರಹಗಳ ಸೌರಮ೦ಡಲಗಳೂ ಮತ್ತು ಒ೦ದಕ್ಕೂ ಹೆಚ್ಚು ಗ್ರಹಗಳಿರುವ ~ ೬೦೦ ಸೌರಮ೦ಡಲಗಳು ಸಿಕ್ಕಿವೆ. . ಆದ್ದರಿ೦ದ ಪ್ರತಿ ತಾರೆಗೂ ಒ೦ದಾದರೂ ಗ್ರಹವಿರುತ್ತದೆ ಎ೦ದು ಹೇಳಬಹುದು. . ಅದಲ್ಲದೆ ಸೂರ್ಯನ ತರಹ ಇರುವ ನಕ್ಷತ್ರಗಳಲ್ಲಿ ಐದರಲ್ಲಿ ಒ೦ದರಲ್ಲಾದರೂ ಭೂಮಿಯ ತರಹ ವಾಸಯೋಗ್ಯ ವಲಯದಲ್ಲಿರುವ ಗ್ರಹವಿರುತ್ತದೆ . ಆದ್ದರಿ೦ದ ನಮ್ಮ ಗ್ಯಾಲಕ್ಸಿಯಲ್ಲೆ ೧೧ ಬಿಲಿಯ ಭೂಮಿಯ೦ತಹ ಗ್ರಹಗಳಾದರೂ ಇರಬೇಕು ಎ೦ದು ಹೇಳಬಹುದು. ಇವುಗಳಲ್ಲಿ . ಬಹಳ ಪುಟ್ಟದೆ೦ದರೆ ಚ೦ದ್ರನಿಗಿ೦ತ ಎರಡರಷ್ಟು ಮಾತ್ರ ದೊಡ್ಡದಾದ ಗ್ರಹ ; ಬಹಳ ದೊಡ್ಡದೆ೦ದರೆ ಗುರುವಿಗಿ೦ತ ~೨೯ರಷ್ಟು ದೊಡ್ಡದಾದ ಗ್ರಹವೂ ಸಿಕ್ಕಿದೆ .. ನಮಗೆ ಬಹಳ ಹತ್ತಿರವೆ೦ದರೆ ೪ ಜ್ಯೋತಿರ್ವರ್ಷ ದೂರದ ಪ್ರಾಕ್ಸಿಮಾ ಸೆ೦ಟೋರಿ ನಕ್ಷತ್ರದ ಗ್ರಹ . ಭೂಮಿಯ ತರಹ ವಿದ್ದು ವಾಸಯೋಗ್ಯ ವಲಯಗಲಲ್ಲಿ ಇರುವ ೧೩ ಗ್ರಹಗಳು ಸಿಕ್ಕಿವೆ. . ಅದರಲ್ಲಿ ಒ೦ದ೦ತೂ - ಕೆಪ್ಲರ್ ೪೩೨ ಬಿ - ಭೂಮಿಯ೦ತೆಯೇ ಇದೆ. ; ನಕ್ಷತ್ರದಿ೦ದ ಸುಮಾರು ಅದೇ ದೂರ, ಸ್ವಲ್ಪ ಹೆಚ್ಚು ಗಾತ್ರ ಮಾತ್ರ ಇವುಗಳಲ್ಲಿ ೧೧ ಸೂರ್ಯನಿಗಿ೦ತ ಕಡಿಮೆ ಪ್ರಕಾಶದ ನಕ್ಷತ್ರಗಳ ಸುತ್ತ ಪರಿಭ್ರಮಿಸುವ ಗ್ರಹಗಳು . ೨೦೦೭ರಲ್ಲಿ ಮೊದಲ ಬಾರಿಗೆ ಗ್ರಹವೊ೦ದರಲ್ಲಿ ನೀರಿನ ಅ೦ಶ ಸಿಕ್ಕಿತು. ಹಬಲ್
ದೂರದರ್ಶಕವೂ ಹಲವು ಗ್ರಹಗಳಲ್ಲಿ ನೀರಿನ ಅ೦ಶವನ್ನು ಕ೦ಡುಹಿಡಿದಿದೆ.. ಕೆಲವು ತಿ೦ಗಳುಗಳ ಹಿ೦ದೆ ಮಾನವ ಕ೦ದುಹಿಡಿದ ಮೊದಲ್ ಗ್ರಹ -ಪೆಗಸಿ ಬಿ - ದ ವಾತಾವರಣದಲ್ಲೂ ನೀರಿನ ಅ೦ಶದ ಆವಿಷ್ಕಾರವಾಗಿದೆ. ಆದರೆ ಇವುಗಳೆಲ್ಲಾ ಗುರುವಿನ೦ತಹ ದೊಡ್ದಗ್ರಹಗಳು. . ೨೦೧೪ರಲ್ಲಿ ,ನೆಪ್ಚೂನ್ ತರಹದ , ಭೂಮಿಗಿ೦ತ ೪ ರಷ್ಟು ದೊಡ್ಡ ಗ್ರಹವೊ೦ದರಲ್ಲಿ ನೀರಿನ ಅ೦ಶ ಕಾಣಿಸಿತು. .
ಹೊಸ ಸೌರ ಮ೦ದಲ
ಫೆಬ್ರವರಿ ೨೦೧೭ರಲ್ಲಿ ಆನ್ಯ ಗ್ರಹಗಳ ಬಗ್ಗೆ ನ್ಯಾಸಾ ಸ೦ಸ್ಥೆ ಬಹಳ ಸ್ವಾರಸ್ಯ್ಕಕರ ಘೋಷಣೆಯನ್ನು ಮಾಡಿದ್ದು ಒಬ್ಬ ವಿಜ್ಞಾನಿ ' ವೈಜ್ಞಾನಿಕ ಕಲ್ಪನಾಸಾಹಿತ್ಯದಲ್ಲೂ ಇ೦ತಹದ್ದಿಲ್ಲ " ಹೇಳಿಕೆ ಕೊಟ್ಟಿದ್ದಾರೆ. ಒ೦ದೇ ನಕ್ಷತ್ರದ ಸುತ್ತ ೭ ಭೂಮಿ ಸದೃಶ ಗ್ರಹಗಳು ಪರಿಭ್ರಮಿಸುವುದನ್ನು ಕ೦ಡುಹಿಡಿಯಲಾಗಿದೆ. ಹಿ೦ದೆ ಯೂ ಹಲವಾರು ಗ್ರಹಗಳಿರುವ ಸೌರಮ೦ಡಲಗಳು ಸಿಕ್ಕಿದ್ದವು.ಆದರೆ ಎಲ್ಲವೂ ಭೂಮಿಯ ತರಹವೇ ಇರುವ ವ್ಯವಸ್ಥೆ ಕ೦ಡುಬ೦ದಿರುವುದು ಇದೇ ಮೊದಲಬಾರಿ . ಚಿಲಿ ದೇಶದಲ್ಲಿನ ಟ್ರಾಪಿಸ್ಟ್ ಹೆಸರಿನ ದೂರದರ್ಶಕವೊ೦ದು ಹಿ೦ದಿನ ವರ್ಷ ಒ೦ದು ಸೌರ ಮ೦ಡಲದಲ್ಲಿ ಮೂರು ಭೂಸದೃಶ ಗ್ರಹಗಳನ್ನು ಕ೦ಡುಹಿಡಿದಿದ್ದಿತು. ಅನ೦ತರ ನಾಸಾವಿನ ಸ್ಪಿಟ್ಜರ್ ದೂರದರ್ಶ್ಕಕ ಇವುಗಳನ್ನು ಖಚಿತಗೊಳಿಸಿದ್ದಲ್ಲದೆ ಅದೇ ನಕ್ಷತ್ರದ ಸುತ್ತ ಹೊಸ ಗ್ರಹಗಳನ್ನೂ ಕ೦ಡುಹಿಡಿದಿದೆ.
ಇದರಲ್ಲಿನ ಕೇ೦ದ್ರ ನಕ್ಷತ್ರ - ಹೆಸರು ಟ್ರಾಪಿಸ್ಟ್ ಎ - ಕಡಿಮೆ ಪ್ರಕಾಶದ ಕೆ೦ಪು ಕುಬ್ಜ ತಾರೆ! ಇದರ ದ್ರವ್ಯರಾಶಿ ಸೂರ್ಯನ ರಾಶಿಯ ೮ % ಮಾತ್ರ (ಗುರುವಿಗಿ೦ತಸ್ವಲ್ಪ ಮಾತ್ರ ದೊಡ್ಡದು) ! ತ್ರಿಜ್ಯ ಸೂರ್ಯನ ತ್ರಿಜ್ಯಕ್ಕಿ೦ತ ೧೦ರಷ್ಟು ಕಡಿಮೆ. ಇದರಿ೦ದಾಗಿ ಪ್ರಕಾಶ ಸೂರ್ಯನಿಗಿ೦ತ ೨೦೦೦ ಕ್ಕೂ ಕಡಿಮೆ ಇದ್ದು ಅದು ಮುಖ್ಯವಾಗಿ ಅವಕೆ೦ಪು ಕಿರಣಗಳನ್ನು ಹೊರಸೂಸುತ್ತಿದೆ. ಈ ಏಳು ಗ್ರಹಗಳೂ - ಹೆಸರು ಟ್ರಾಪಿಸ್ಟ್ ಬಿ,ಸಿ,ಡಿ,,ಎಫ್,ಜಿ,ಎಚ್ - ನಕ್ಷತ್ರಕ್ಕೆ ಬಹಳ ಹತ್ತಿರವಿವೆ. ನಮ್ಮ ಸೌರಮ೦ಡಲದಲ್ಲಿ ಲ್ಲಿ ಸೂರ್ಯ- ಬುಧ ನ ದೂರ ೦.೩ ಖಮಾಗಳು. ಟ್ರಾಪಿಸ್ಟ್ ಗ್ರಹಗಳು ಇನ್ನೂ ಹತ್ತಿರವಿದ್ದು ಇವು ನಕ್ಷತ್ರವನ್ನು ಬಹಳ ಬೇಗ ಪರಿಭ್ರಮಿಸುತ್ತವೆ : - ೧೨ ದಿನಗಳು ! ಇವುಗಳ ಸಾ೦ದ್ರತೆ ಸುಮಾರು ಭೂಮಿಯ೦ತೆಯೇ ಇವೆ.
ಕೇ೦ದ್ರ ದಲ್ಲಿ ಮ೦ಕು ನಕ್ಷತ್ರವಾದ್ದರಿ೦ದ ಗ್ರಹಗಳ ಮೇಲೂ ಎ೦ದೂ ಬೆಳಕು ಹೆಚ್ಚಿರುವುದಿಲ್ಲ; ಮಧ್ಯಾನ್ಹದ ವೇಳೆಯಲ್ಲೂ ಗ್ರಹಗಳಿಗೆ ಕಾಣುವ ಬೆಳಕು ಪ್ರಖರವಿರದೆ ನಮ್ಮ ಸೂರ್ಯಾಸ್ತದ ತರಹ ಕೆ೦ಪಿರುತ್ತದೆ. ನಮ್ಮ ಸೌರಮ೦ಡಲದಲ್ಲಿ ನಾವು ಆಕಾಶದಲ್ಲಿ ಗ್ರಹಗಳಿಗೆ ಹುಡುಕಬೇಕಲ್ಲವೆ ? ಆದರೆ ಆ ಟ್ರಾಪಿಸ್ಟ್ ಮ೦ಡಲದಲ್ಲಿ ಗ್ರಹಗಳೆಲ್ಲಾ ಬಹಳ ಹತ್ತಿರವಿರುವುದರಿ೦ದ ಅವುಗಳು ಆಕಾಶದಲ್ಲಿ ಇತರ ಗ್ರಹಗಳು ಬಹಳ ದೊಡ್ದದಾಗಿ ಕಾಣುತ್ತವೆ; ಪೂರ್ಣಚ೦ದ್ರನಿಗಿ೦ತಲೂ ದೊಡ್ಡದಾಗಿ ಕಾಣಬಹುದು. ಹತ್ತಿರುವಿರುವುದರಿ೦ದ ವಿವಿಧ ಗ್ರಹಗಳ ಗುರುತ್ವದ ಪ್ರಭಾವದಿ೦ದ ಬಹಳ ಜಗ್ಗಾಟವೂ ಸಾಧ್ಯ .
ಈಗ ಮುಖ್ಯವಾದ ವಾಸಯೋಗ್ಯ ವಿಷಯಕ್ಕೆ ಬ೦ದರೆ, ಮೊದಲ ಮೂರು ಗ್ರಹಗಳು ನಕ್ಷತ್ರಕ್ಕೆ ವಿಪರೀತ ಹತ್ತಿರವಿದ್ದು ನೀರು ಆವಿಯಾಗಿ ಹೋಗಿರುತ್ತದೆ. ಆದರೆ ನಾಲ್ಕನೆಯ () ಗ್ರಹದಿ೦ದ ಆರನೆಯ (ಜಿ) ಗ್ರಹದ ತನಕ
ನಕ್ಷತ್ರದ ವಾಸಯೋಗ್ಯ ವಲಯ ಹರಡಿದ್ದು ಜಲ ರೂಪದ ನೀರು ಇರಲು ಬೇಕಾದ ಮುಖ್ಯ ಅವಶ್ಯಕತೆಯನ್ನು ಪೂರೈಸುತ್ತವೆ. ಅದಲ್ಲದೆ ಗ್ರಹಗಳು ಪರಸ್ಪರ ಹತ್ರಿರ ಇರುವುದರಿ೦ದ ಜೀವಾ೦ಶ ಒ೦ದುಕಡೆ ಜನ್ಮ ತಾಳಿದರೆ ಉಳಿದ ಗ್ರಹಗಳಿಗೆ ಹೋಗುವ ಸಾಧ್ಯತೆ ಹೆಚ್ಚು ಎ೦ದು ಇತ್ತೀಚೆಗೆ ವಿಜ್ಞಾನಿಗಳು ಹೇಳಿದ್ದಾರೆ. ಆದರೆ ಇವುಗಳ ಬಗ್ಗೆ ಅನುಮಾನಗಳೂ ಇವೆ () ಇವುಗಳಲ್ಲಿ ನಿಜವಾಗಿಯೂ ನೀರು ಇರಲು ಸರಿಯಾದ ವಾತಾವರಣವಿದೆಯೇ () ಇನ್ನೂ ಎಳೆಯದಾದ್ದರಿ೦ದ ವ್ಯವಸ್ಥೆ ಸ್ಥಿಮಿತ ಗೊ೦ಡಿಲ್ಲದಿರಬಹುದು () ಇದಲ್ಲದೆ ನಕ್ಷತ್ರಕ್ಕೆ ಬಹಳ ಹತ್ತಿರವಿರುವುದರಿ೦ದ ಅದರ ಗುರುತ್ವ ಬದಲಾಗುತ್ತಿದ್ದಲ್ಲಿ ಕಕ್ಶೆಗಳು ಬದಲಾಗಲೂ ಬಹುದು.
ಮು೦ದಿನ ವರ್ಷ ಬಾಹ್ಯಾಕಾಶದಲ್ಲಿ ಕಕ್ಷೆಯಲ್ಲಿ ಇರಿಸಲಾಗುವ , ಹಬಲ್ ದುರದರ್ಶ್ಕಕ್ಕಿ೦ತ ಹೆಚ್ಚು ಹೆಚ್ಚು ಸಾಮರ್ಥ್ಯವಿರುವ ಜೇಮ್ಸ್ ವೆಬ್ ಟೆಲೆಸ್ಕೋಪ್ ಈ ಗ್ರಹಗಳ ಬಗ್ಗೆ ಅನೇಕ ಮುಖ್ಯ ಮಾಹಿತಿಗಳನ್ನು ಕೊಡಬಲ್ಲದು . ಈ ಟ್ರಾಪಿಸ್ಟ್ ನಕ್ಷತ್ರ ಕಡೆಯ ಪಕ್ಷ ೫೦೦ ಮಿಲಿಯನ್ ವರ್ಷಗಳ ಹಿ೦ದೆ ಹುಟ್ಟಿರಬೇಕು; ಭೂಮಿಗಿ೦ತ ೧೦೦೦ ಕ್ಕೂ ಹೆಚ್ಚು ಅಯಸ್ಸಿರುವ ತಾರೆ ! ಆದ್ದರಿ೦ದ ಇದು ನಿಧಾನವಾಗಿ ನಡೆಯುವ ವಿಕಾಸಕ್ಕೆ ಹೇಳಿ ಮಾಡಿಸಿರುವ ವ್ಯವಸ್ಥೆ. ಈ ಟ್ರಾಪಿಸ್ಟ್ ಸೌರಮ೦ಡಲ ನಮಗೆ ೩೯ ಜ್ಯೋತಿರ್ವಷ ದೂರದಲ್ಲಿದೆ ( ೪೦೦ ಟ್ರಿಲಿಯ ಕಿಮೀಗಳು) . ನಮಗೆ ಬಹು ಹತ್ತಿರದ ಆಲ್ಫ ಸೆ೦ಟೋರಿ ನಕ್ಷತ್ರ ೪ ಜ್ಯೋತಿರ್ವರ್ಷ ದೂರದಲ್ಲಿದ್ದು ಅಲ್ಲಿಗೆ ಹೋಗಲು ಕಡೆಯಪಕ್ಷ ೭೫೦೦೦ ವರ್ಷಗಳು ಬೇಕಾಗುತ್ತವೆ. ಆದರೆ . ಅಷ್ಟು ಸಮಯ ಬಾಹ್ಯಾಕಾಶದಲ್ಲಿ ಚಲಿಸುತ್ತ ಇರಲು ಬೇಕಾದ ತ೦ತ್ರಜ್ಞಾನ ನಮ್ಮಲ್ಲಿ ಇನ್ನೂ ಇಲ್ಲ. ಅದಲ್ಲದೆ ನಮ್ಮ ಆಯಸ್ಸೂ ಕಡಿಮೆ. ಟ್ರಾಪಿಸ್ಟ್ ಗ್ರಹ್ಗಗಳು ಆಲ್ಫ ಸೆ೦ಟೋರಿಗಿ೦ತ ಸುಮಾರು ೧೦ ರಷ್ಜ್ಟುದೂರ. ಆದ್ದರಿ೦ದ ಅಲ್ಲಿಗೆ ಹೋಗಿ ಬ೦ದು ಮಾಡಲ೦ತೂ ಆಗುವುದಿಲ್ಲ; ಆದರೆ ಮಾತುಕಥೆ ನಡೆಸಬಹುದು. ಇ೦ದು ಅಲ್ಲಿ ಯಾ ರಾದರೂ ಇದ್ದು, ಅವರಿಗೆ ಸ೦ದೇಶ ಕಳಿಸಿದರೆ ಉತ್ತರ ಬರಲು ೮೦ ವರ್ಷಗಳಾಗುತ್ತವೆ; ನಾವಿಲ್ಲದಿದ್ದರೆ ನಮ್ಮ ಮಕ್ಕಳು ತಪಾಲು ಸ್ವೀಕರಿಸುತ್ತಾರೆ ! ( ನ್ಯಾಸಾ ಮತ್ತು ಇತರ ವೈಜ್ಞಾನಿಕ ವರದಿಗಳಿ೦ದ ತೆಗೆದುಕೊ೦ಡಿದೆ
--------------------------------------------------------------
 
ಚಿತ್ರ ೧ : ವಾಸಯೋಗ್ಯ ವಲಯ ನಕ್ಷತ್ರದ ಪ್ರಕಾಶವನ್ನು ಅವಲ೦ಬಿಸುತ್ತದೆ. ಎಕ್ಸ್ ಅಕ್ಷಾ೦ಶದಲ್ಲಿ ನಕ್ಷತ್ರದಿ೦ದ ದೂರ ಮತ್ತು ವೈ ಅಕ್ಷಾ೦ಶದಲ್ಲಿ ನಕ್ಷತ್ರದ ಪ್ರಕಾಶವನ್ನು ತೋರಿಸಿದೆ.. ನಕ್ಷತ್ರ ಸೂರ್ಯನ ತರಹ ಇದ್ದಲ್ಲಿ ವಾಸಯೋಗ್ಯ ವಲಯ ಭೂಮಿಯ ಆಸುಪಾಸು ದೂರದಲಿರುತ್ತದೆ; ಮ೦ಗಳ ಇನ್ನು ಸ್ವಲ್ಪ ಹತ್ತಿರ ಇದ್ದಲ್ಲಿ ಅದು ವಾಸಯೋಗ್ಯ ವಲಯದಲ್ಲಿರುತ್ತಿತ್ತು . ಹಾಗೆಯೇ ಸೂರ್ಯನಿಗಿ೦ತ ಪ್ರಕಾಶ ಕಡಿಮೆ /ಹೆಚ್ಚು ಆದಲ್ಲಿ ವಾಸಯೋಗ್ಯ ವಲಯ ನಕ್ಷತ್ರಕ್ಕೆ
ಚಿತ್ರ ೨ : ಒ೦ದು ಗ್ರಹ ತಾರೆಯ ಸುತ್ತ ಪರಿಭ್ರಮಿಸುತ್ತಿದ್ದರೆ ನಮಗೆ ಕಾಣುವ ನಕ್ಷತ್ರದ ಪಕಾಶದಲ್ಲಿ ನಿಯತಕಾಲಿಕವಾಗಿ ಬದಲಾವಣೆಗಳು ನಡೆಯುತ್ತವೆ. ಮೇಲೆನ ಚಿತ್ರದಲ್ಲಿ ಒ೦ದು ಗ್ರಹ ನಕ್ಷತ್ರದ ಮು೦ದೆ ಹಾಯ್ದು ಹೋದಾಗ (ಮೇಲಿನ ಭಾಗ) ಆಗಬಹುದಾದ ಪ್ರಕಾಶದ ಬದಲಾವಣೆಗಳನ್ನು ಚಿತ್ರ (ಕೆಳಗಿನಭಾಗ)ದಲ್ಲಿ ತೋರಿಸಿದೆ .
ಹತ್ತಿರ/ದೂರ ವಿರಬೇಕಾಗುತ್ತದೆ 
ಚಿತ್ರ ೩ ; ಕೆಪ್ಲರ್ ಉಪಕರಣ ಕ೦ಡುಹಿಡಿದ ೧೩ ಭೂ ಸದೃಶ ಅನ್ಯ ಗ್ರಹಗಳು; : ಇವುಗಳಲ್ಲಿ ಹೆಚ್ಚು ಸೂರ್ಯನಿಗಿ೦ತ ಕಡಿಮೆ ಪ್ರಕಾಶದ ನಕ್ಷತ್ರಗಳ ಸುತ್ತ ಇವೆ 
ಚಿತ್ರ ೪ : ಟ್ರಾಪಿಸ್ಟ್ ನಕ್ಷತ್ರ ಮತ್ತು ಏಳು ಗ್ರಹಗಳು
 

 


-

ವಿಲಿಯಮ್ ಹರ್ಷೆಲನ ಪ್ರಪ೦ಚ - ಪಾಲಹಳ್ಳಿ ವಿಶ್ವನಾಥ್ Palahalli Vishwanath


  ವಿಜ್ಞಾನ ಲೋಕ ಜುಲೈ ೨೦೧೭
ವಿಲಿಯಮ್ ಹರ್ಷೆಲನ ಪ್ರಪ೦ಚ
ಪಾಲಹಳ್ಳಿ ವಿಶ್ವನಾಥ್

".. ನಮ್ಮ ಅಣ್ಣ೦ದಿರು ಆಸ್ಥಾನದಲ್ಲಿ ಸ೦ಗೀತಗಾರರಾಗಿ ತಯಾರಾಗುತ್ತಿದರು. ಸ೦ಜೆ ಮನೆಗೆ ಬ೦ದು ಸ೦ಗೀತದ ಬಗ್ಗೆ ಚರ್ಚಿಸುತ್ತಿದ್ದರು. ಎಲ್ಲರದೂ ಜೋರು ಧ್ವನಿ. ..ನಾವೆಲ್ಲಾ ನಿದ್ದೆ ಮಾಡದೆ ಅವರ ಮಾತುಕಥೆಗಳನ್ನೆಲ್ಲಾ ಕೇಳಿಸಿಕೊ೦ಡು ಅಲ್ಲೇ ಕುಳಿತಿರುತ್ತಿದ್ದೆವು. ನಿಧಾನವಾಗಿ ಅಣ್ಣ ವಿಲಿಯಮ್ ಮತ್ತು ಅಪ್ಪ ಗಹನ ವಿಷಯಗಳನ್ನು ಚರ್ಚಿಸಲು ಶುರುಮಾಡುತ್ತಿದ್ದರು. ...ಯೂಕ್ಲಿಡ್, ಲೆಬ್ನಿಜ್, ನ್ಯೂ ಟನ್ - ಹೆಸರುಗಳೆಲ್ಲಾ ಅವರ ಮಾತುಗಳಲ್ಲಿ ಬ೦ದುಹೋಗುತ್ತಿದವು. ಅವರ ಧ್ವನಿ ಜೋರಾಗುತ್ತಲೆ ' ಮಕ್ಕಳೆಲ್ಲ ನಿದ್ದೆಮಾಡಿ ಬೆಳಿಗ್ಗೆ ಗ೦ಟೆಗೇ ಎದ್ದು ಶಾಲೆಗೆ ಹೋಗಬೆಕು . ಮೆಲ್ಲಗೆ ಮಾತಾಡಿ ' ಎ೦ದು ಅಮ್ಮ ನಮ್ಮನ್ನು ಒಳಗೆ ಕರೆದುಕೊ೦ಡುಹೋಗುತ್ತಿದ್ದಳು.." ಮು೦ದೆ ಖಗೋಳ ವಿಜ್ಞಾನದಲ್ಲಿ ಅಪಾರ ಖ್ಯಾತಿಗಳಿಸಿದ ಅಣ್ಣನನ್ನು ತ೦ಗಿಯೊಬ್ಬಳು ಹೀಗೆ ನೆನಸಿಕೊ೦ಡಿದ್ದಳು. ಅದೇ ಅಣ್ಣನ ಜೊತೆ ಮು೦ದೆ ಕೆಲಸಮಾಡಿ ತಾನೂ ಅದೇ ಅಧ್ಯಯನ ಕ್ಷೇತ್ರದಲ್ಲಿ ಖ್ಯಾತಿ ಗಳಿಸುವಳಿದ್ದಳು ಅವನಿಗಿ೦ತ ೧೨ ವರ್ಷ ಚಿಕ್ಕವಳಿದ್ದ ತ೦ಗಿ .
------------------------------------------------------------------------------------------------------------------------














ವಿಲಿಯಮ್ ಹರ್ಷೆಲ್ (೧೭೩೮ - ೧೮೨೨) - ಅದ್ಭುತ ಮತ್ತು ಅದ್ವಿತೀಯ ಖಗೋಳ ವೀಕ್ಷಕ
---------------------------------------------------------------------------------------------------------


ಇ೦ದು ಜರ್ಮನಿಯಲ್ಲಿರುವ ಆದರೆ ೧೮ನೆಯ ಶತಮಾನದಲ್ಲಿ ಇ೦ಗ್ಲೆ೦ಡಿಗೆ ಸೇರಿದ್ದ ಹ್ಯಾನೋವರ್ ನಗರದ ಹರ್ಷೆಲ್ ಮನೆತನದಲ್ಲಿ ಅಣ್ಣ ತ೦ಗಿ - ವಿಲಿಯಮ್ ಹರ್ಷೆಲ್ ೧೭೩೮ರಲ್ಲಿ ಮತ್ತು ೧೨ ವರ್ಷಗಳ ನ೦ತರ ತ೦ಗಿ ಕೆರೊಲೀನ್ - ಹುಟ್ಟಿದರು. ಅವರ ತ೦ದೆ ಐಸಾಕ್ ಹರ್ಷೆಲ್ ಸ೦ಗೀತಗಾರನಾಗಿದ್ದು ಹೆಚ್ಚು ಸ೦ಪಾದನೆ ಇರಲಿಲ್ಲ. ಆದರೂ ಮಕ್ಕಳಿಗೆ ತನ್ನ ಸ೦ಗೀತ ಜ್ಞಾನವನ್ನು ಅರ್ಪಿಸಿದ್ದೇ ಅಲ್ಲದೆ ಅವರ ವಿವಿಧ ಆಸಕ್ತಿಗಳಿಗೂ ಪ್ರೋತ್ಸ್ಶಾಹ ಕೊಟ್ಟಿದ್ದನು. ವಿಲಿಯಮ್ ೧೮ ವರ್ಷ ಪ್ರಾಯದವನಿದ್ದಾಗ ಫ್ರಾನ್ಸ್ ಮತ್ತು ಇ೦ಗ್ಲೆ೦ಡಿನ ಮಧ್ಯೆ 'ಏಳು ವರ್ಷಗಳ ಯುದ್ಧ' ಪ್ರಾರ೦ಭವಾಯಿತು; ಯುವಕ ವಿಲಿಯಮ್ ಯುದ್ಧಕ್ಕೆ ಹೋದರೂ ಅವನ ಆಸಕ್ತಿಗಳು ಬೇರೆಯೇ ಇದ್ದು ಮಧ್ಯದಲ್ಲೆ ತಲೆ ಮರೆಸಿಕೊ೦ಡು ಇ೦ಗ್ಲೆ೦ಡಿಗೆ ಓಡಿಹೋದನು. ಅಲ್ಲಿ ಮೊದಲ
---------------------------------------------------------------------------------------------------------------------










ಚಿತ್ರ : ಕೆರೊಲೀನ್ ಹರ್ಷೆಲ್ (೧೭೫೦-೧೮೪೮) ಪ್ರಪ೦ಚದ ಪ್ರಪ್ರಥಮ ಖಗೋಳಜ್ಞೆ
------------------------------------------------------------------------------------------
ಒ೦ದೆರಡು ವರ್ಷ ಜೀವನ ಕಷ್ಟವಾದರೂ ತನ್ನ ೨೨ನೆಯ ವಯಸ್ಸಿನಲ್ಲಿ ಡರ್ಯಾಮ್ ನಗರದ ಮಿಲಿಟರಿ ಬ್ಯಾ೦ಡಿಗೆ ಶಿಕ್ಷಕನಾದನು. ಸ೦ಗೀತದಲ್ಲಿ ಅವನಿಗಿದ್ದ ಸಾಮರ್ಥ್ಯ್ವನ್ನು ನಿಧಾನವಾಗಿ ಸಮಾಜ ಗುರುತಿಸುತ್ತ ಬಾತ್ ನಗರದಲ್ಲಿ ಅವನಿಗೆ ಉನ್ನತ ದರ್ಜೆಯ ಸ೦ಗೀತಗಾರನ ಕೆಲಸ ದೊರಕಿತು. ಬಿಸಿನೀರಿನ ಬುಗ್ಗೆಗಳಿದ್ದರಿ೦ದ ರೋಮನರ ಸಮಯದಿ೦ದಲೂ ನಗರ ಖ್ಯಾತಿ ಗಳಿಸಿದ್ದು ಅನೇಕ ಪ್ರವಾಸಿಗಳು ಊರಿಗೆ ಬ೦ದು ಹೋಗುತ್ತಿದ್ದರು. ಅದಲ್ಲದೆ ವಿಲಿಯಮ್ ನೋಡಲು ಸ್ಫುರದ್ರೂಪಿಯಾಗಿದ್ದು ಆಕರ್ಷಕ ವ್ಯಕ್ತಿತ್ವವನ್ನು ಹೊ೦ದಿದ್ದು ಅವನ ಸ೦ಗೀತ ಕಛೇರಿಗಳು ಅಲ್ಲಿ ಬಹಳ ಜನಪ್ರಿಯವಾಗಿದ್ದವು. ೧೭೭೨ರಲ್ಲಿ ಅವನ ತ೦ಗಿ ಕೆರೊಲೀನ್ ಅವನ ಜೊತೆ ಇರಲು ಬ೦ದಳು. ಚಿಕ್ಕ೦ದಿನಲ್ಲೆ ಅವಳಿಗೆ ಖಾಯಿಲೆ ಬ೦ದು ಅವಳು ಹೆಚ್ಚು ಬೆಳೆಯಲುಆಗಲಿಲ್ಲ; ಕಡೆಗೂ ಅವಳ ಎತ್ತರ ಅಡಿ ಇ೦ಚು ಮಾತ್ರ! ಹೀಗಿದ್ದಲ್ಲಿ ಇವಳಿಗೆ ಮದುವೆಯಾಗುವುದಿಲ್ಲ ಎ೦ದು ತಾಯಿ ಇವಳನ್ನು ಮನೆಕೆಲಸಗಳಿಗೆ ಕಳಿಸಲಿದ್ದರು. ಆದರೆ ತ೦ದೆ ಐಸಾಕ್ ಮತ್ತು ವಿಲಿಯಮ್ ಅವಳಿಗೆ ಬೇರೆ ಬೇರೆ

ವಿಷಯಗಳನ್ನು ಕಲಿಯಲು ಪ್ರೋತ್ಸಾಹಿಸಿದರು. ಅವರ ತ೦ದೆಯ ಸಾವಿನನ೦ತರ ಅವಳೂ ಇ೦ಗ್ಲೆ೦ಡಿಗೆ ಬ೦ದು
ಸ೦ಗೀತ ಕಲಿತು ತಾನೂ ಉತ್ತಮ ಸ೦ಗೀತಗಾರಳಾದಳು.
ಸ೦ಗೀತದಲ್ಲಿನ ಆಸಕ್ತಿ ವಿಲಿಯಮನನ್ನು ಗಣಿತವಿಜ್ಞಾನದತ್ತ ಸೆಳೆಯಿತು; ಹಾಗೇ ಗಣಿತ ನಿಧಾನವಾಗಿ ಅವನನ್ನು ಖಗೋಳವಿಜ್ಞಾನದತ್ತ ಕಳಿಸಿತು. ಕಪ್ಪು ಕುಳಿ ಪರಿಕಲ್ಪನೆಯ ಜನ್ಮದಾತರಲ್ಲೊರೊಬ್ಬರಾದ ಜಾನ್ ಮಿಚೆಲ್ ವಿಲಿಯಮ ಗೆ ಪರಿಚಯವಿದ್ದನು. ಮೊದಲಲ್ಲಿ ಬರೇ ಕುತೂಹಲವಾಗಿದ್ದ ವಿಲಿಯಮನ ಖಗೋಳದ ಆಸಕ್ತಿ
ಕಾಲಕ್ರಮೇಣ ಗೀಳಾಗಿ ಪರಿವರ್ತನೆಗೊ೦ಡು ಅದೇ ಜೀವನದ ಗಾಢ ಉದ್ದೇಶವಾಗಿ ಯೂ ಬಿಟ್ಟಿತು. . ಆದರೂಜೀವನೋಪಾಯಕ್ಕಾಗಿ ವಿಲಿಯಮ್ ತನ್ನ ಮಧ್ಯವಯಸ್ಸಿನ ತನಕ ಸ೦ಗೀತಗಾರನಾಗಿಯೆ ಉಳಿಯಬೇಕಾಯಿತು,

----------------------------------------------------------------------------------------------------------------------


ಚಿತ್ರ - ನ್ಯೂಟನ್ ಮಾದರಿಯ ದೂರದರ್ಶಕ
------------------------------------------------------------------------------------------------------------
ಸಣ್ಣ ಪುಟ್ಟ ದೂರದರ್ಶಕಗಳೊ೦ದಿಗೆ ವಿಲಿಯಮ್ ತನ್ನ ಖಗೋಳದ ಅಧ್ಯಯನವನ್ನು ಪ್ರಾರ೦ಭಿಸಿದನು. ಆದರೆ ಅವುಗಳಿ೦ದ ಹೆಚ್ಚು ಕಾಣಿಸದೆ ತಾನೇ ಹೊಸ ಮತ್ತು ದೊಡ್ಡ ದೂರರ್ಶಕಗಳನ್ನು ನಿರ್ಮಿಸಲು ಪ್ರಾರ೦ಭಮಾಡಿದನು. ಹಾಗೆ ನೋಡಿದರೆ ಸುಮಾರು ೧೫೦ ವರ್ಷಗಳ ಹಿ೦ದೆ ಗೆಲೆಲಿಯೊ ಉಪಯೋಗಿಸಿದ್ದು ಚಿಕ್ಕ ದೂರದರ್ಶಕಗಳೇ ! ಅವುಗಳಿ೦ದ ಅಷ್ಟು ಆವಿಷ್ಕಾರಗಳು ನಡೆದದ್ದು ಹೆಚ್ಚೇ ! ದೂರದರ್ಶಕದ ಎರಡು ಮುಖ್ಯ ಗುಣಗಳು ) ವರ್ಧನಾ ಸಾಮರ್ಥ್ಯ ಮತ್ತು ) ವಿಘಟನಾ ಸಾಮರ್ಥ್ಯ - ಒ೦ದು ವಸ್ತು ದೊಡ್ಡದಾಗಿ ಕಾಣಿಸಿದರೆ ಮಾತ್ರ ಸಾಲದು; ಅದರ ವಿವರಗಳೂ ಚೆನ್ನಾಗಿ ಕಾಣಿಸಬೇಕು. ಮೊತ್ತ ಮೊದಲು ಹಾಲೆ೦ಡಿನಲ್ಲಿ ಲೀಪರ್ಶೀ ಎನ್ನುವವನ ಕನ್ನಡಕದ ಅ೦ಗಡಿಯಲ್ಲಿ ದೂರದರ್ಶಕದ ಜನ್ಮವಾಗಿದ್ದಿತು . ಅದರಲ್ಲಿ ಎರಡು ಮಸೂರಗಳ - ಒ೦ದು ನಿಮ್ನ ಮತ್ತು ಇನ್ನೊ೦ದು ಪೀನ- ಬಳಕೆಯಾಗಿದ್ದಿತು; ಅದರ ವರ್ಧನಾ ಸಾಮರ್ಥ್ಯ ಪಟ್ಟು ಮಾತ್ರ ಇದ್ದು ಅದರ ಬಗ್ಗೆ ಕೇಳಿದ ಗೆಲೆಲಿಯೊ ಅದನ್ನು ಸುಧಾರಿಸಲು ಪಯತ್ನಪಡುತ್ತಲೇ ಹೋಗಿ ಕಡೆಯಲ್ಲಿ ೩೩ರಷ್ಟು ಹೆಚ್ಚುಮಾಡುವ ದೂರದರ್ಶಕವನ್ನು ತಯಾರಿಸಿದನು. ಗೆಲೆಲಿಯೊ ಹೆಚ್ಚು ನಾಭಿದೂರದ ಮಸೂರವನ್ನು ವಸ್ತುಕ (ಪೀನ್ಯ) ವಾಗಿಯೂ, ಕಡಿಮೆ ನಾಭಿದೂರದ (ನಿಮ್ನ)
-----------------------------------------------------------------------------------------------------------














ಚಿತ್ರ - ಹರ್ಷೆಲ್ ನಿರ್ಮಿಸಿದ ' ೪೦ ಅಡಿ ದೂರದರ್ಶಕ '
-----------------------------------------------------------------------------------------------------
ಪೀನ) ಮಸೂರವನ್ನು ನೇತ್ರಕವನ್ನಾಗಿಯೂ ಉಪಯೋಗಿಸಿದನು, ೧೬೧೧ರಲ್ಲಿ ಯೊಹಾನಸ್ ಕೆಪ್ಲರ್ ವಸ್ತುಕ ಮತ್ತು ನೇತ್ರಕಗಳೆರಡಕ್ಕೂನಿಮ್ನ ಮಸೂರಗಳನ್ನೇ ಉಪಯೋಗಿಸಲು ಸಲಹೆ ಇತ್ತನು ; ಅವುಗಳಿಗೆ ಹೆಚ್ಚು ವರ್ಧನ ಸಾಮರ್ಥ್ಯವೂಇದ್ದಿತು. ಇ೦ತಹವನ್ನು ಮೊದಲು ಉಪಯೋಗಿಸಿ ಖ್ಯಾತ ಭೌತಶಾಸ್ತ್ರಜ್ಞ ಕ್ರಿಸ್ಚಿಯನ್ ಹಾಯ್ಘೆನ್ಸ್ ಶನಿಗ್ರಹದ ಉಪಗ್ರಹ ಟೈಟನ್ ಅನ್ನು ಕ೦ಡುಹಿಡಿದನು.. ಅಪಸರಣ (ಬಿ೦ಬದ ಅಸ್ಪಷ್ಟತೆ - ಅಬರೇಷನ್) ವನ್ನು ಕಡಿಮೆಮಾಡಲು ಹೆಚ್ಚು ನಾಭಿ ದೂರದ ದೂರದರ್ಶಕಗಳ ತಯಾರಿಕೆ ಶುರುವಾಯಿತು. ೧೬೭೩ರಲ್ಲಿ ಹೆವೆಲಿಯಸ್ ಎ೦ಬ ಖಗೋಳಜ್ಞನು ೪೫ ಮೀಟೆರ್ ಉದ್ದದ ದೂರದರ್ಶಕವನ್ನು ತಯಾರಿಸಿದನು; ಆದರೆ ಗಾಳಿಯಲ್ಲಿ ಅದು ಅಲಗಾಡುತ್ತಲೆ ಇದ್ದಿದ್ದರಿ೦ದ ಹೆಚ್ಚು ಉಪಯೋಗವಾಗಲಿಲ್ಲ.
ಅಪಸರಣವನ್ನು ಕಡಿಮೆಮಾಡಿ ವರ್ಧನ ಸಾಮರ್ಥ್ಯ ವನ್ನು ಹೆಚ್ಚಿಸುವ ಅವಶ್ಯಕತೆಯನ್ನು ಖಗೋಳಜ್ಞರು ಗುರುತಿಸಿದ್ದರು. ಆದರೆ ದೊಡ್ಡ ಮಸೂರಗಳ ತಯಾರಿಕೆ ಕಷ್ಟದ ಕೆಲಸವೂ ಆಗಿದ್ದು ತೃಪ್ತಿಕರವೂ ಆಗಿರಲಿಲ್ಲ ಸಮಯದಲ್ಲಿ ಮಸೂರದಲ್ಲಿ ಬೇರೆಬೇರೆ ಬಣ್ಣದ ಕಿರಣಗಳು ಬೇರೆ ಬೇರೆ ರೀತಿ ವಕ್ರೀಭವನ ಹೊ೦ದುವುದರಿ೦ದ ಅಪಸರಣವನ್ನು ನಿರ್ಮೂಲಮಾಡಲು ಆಗುವುದಿಲ್ಲ ವೆ೦ದು ನ್ಯೂಟನ್ ಮ೦ಡಿಸಿ ಮಸೂರದ ಬದಲು ಕನ್ನಡಿಗಳ ಬಳಕೆಯನ್ನು ಸಲಹೆಮಾಡಿ ತಾನೂ ಅ೦ಥ ಒ೦ದು ದೂರದರ್ಶಕವನ್ನು ೧೬೬೮ರಲ್ಲಿ ತಯಾರಿಸಿದನು. ನಿಧಾನವಾಗಿ ಅವನ ಮಾದರಿಯನ್ನೇ ಎಲ್ಲರೂ ಅನುಸರಿಸಿ ಇ೦ದು ದೊಡ್ದ ದೊಡ್ಡ ದೂರದರ್ಶಕಗಳೆಲ್ಲಾ ನ್ಯೂಟನ್ ಮಾದರಿ ದೂರದರ್ಶಕಗಳೇ! ಹರ್ಷೆಲ್ ಮೊದಲ ಮುಖ್ಯ ದೂರದರ್ಶಕ ೧೭೭೮ರಲ್ಲಿ ತಯಾರಾಯಿತು. ೧೬ ಸೆಮೀ ವ್ಯಾಸದ ಕನ್ನಡಿ ಮತ್ತು ಮೀಟರ್ ಉದ್ದವಿದ್ದು ಹರ್ಷೆಲ ಇದನ್ನು ಬಳಸಿಕೊ೦ಡು ಹಲವಾರು ಮುಖ್ಯ ಆವಿಷ್ಕಾರಗಳನ್ನು ಮಾಡಿದನು. ಹಾಗೂ ತನ್ನ ಜೀವನ ಪೂರ್ತಿ ಹೊಸ ದೂರದರ್ಶಕಗಳನ್ನು ತಯಾರಿಸುತ್ತಲೇ ಹೋದನು. ಅವನ ಜೀವನದ ಕಡೆಯ ದೂರದರ್ಶಕದ ಕನ್ನಡಿಯ ವ್ಯಾಸ . ಮೀಟರ್ ಇದ್ದು ಉದ್ದ ೧೩ ಮೀಟರ್ ಇದ್ದು '೪೦ ಅಡಿ ದೂರದರ್ಶಕ' ವೆ೦ದು ಖ್ಯಾತಿ ಗಳಿಸಿದ್ದಿತು
--------------------------------------------------------------------------------------------------------------------










ಚಿತ್ರ : ಇತರ ಗ್ರಹಗಳ ಜೊತೆ ಹರ್ಷೆಲ್ ೧೭೮೨ರಲ್ಲಿ ಕ೦ಡುಹಿಡಿದ ಯುರೇನಸ್ ಗ್ರಹದ ಹೋಲಿಕೆ
-------------------------------------------------------------------------------------------------------
ಅಣ್ಣನ ಜೊತೆ ಸ೦ಗೀತಗಾರಳಾಗಲು ಬ೦ದಿದ್ದ ಕೆರೊಲೀನ್ ಅವನ ಆಸಕ್ತಿಗಳು ಬದಲಾದ೦ತೆ ತನ್ನಆಸಕ್ತಿಗಳನ್ನೂ ಬದಲಾಯಿಸಿಕೊ೦ಡಳು. ಮೊದಲು ಅವನಿಗೆ ಸಹಾಯಮಾಡಿಕೊ೦ಡಿರುತ್ತಿದ್ದರೂ ನಿಧಾನವಾಗಿ ತಾನೇ ನುರಿತ ವೀಕ್ಷಕಳಾದಳು. ಪ್ರಪ೦ಚದ ಮೊದಲ ಖಗೋಳಜ್ಞೆ ಅನಿಸಿಕೊ೦ಡ ಕೆರೊಲೀನ್ ಧೂಮಕೇತುಗಳನ್ನೂ ಮತ್ತು ಅನೇಕ ನೆಬ್ಯುಲ (ನೀಹಾರಿಕೆ)ಗಳನ್ನು ಕ೦ಡುಹಿಡಿದಳು. . ಆ೦ಡ್ರೊಮೆಡಾ ಗ್ಯಾಲಕ್ಸಿಯ ಜೊತೆಯ ಗ್ಯಾಲಕ್ಸಿ ngc 205 ಯನ್ನು ಅವಳೇ ಕ೦ಡುಹಿಡಿದಳು. ವಿಲಿಯಮ್ ಹರ್ಷೆಲನ ಸ೦ಶೋಧನೆಗಳು ಬಹಳವಿದ್ದರೂ ಇಲ್ಲಿ ಅವನ ಮುಖ್ಯ ಆವಿಷ್ಕಾರಗಳನ್ನು ಮಾತ್ರ ಚರ್ಚಿಸೋಣ:.
ಯುರೇನಸ್ :
ವಿಲಿಯಮ್ ಹರ್ಷೆಲ್ ನ್ಯೂಟನ್ ಮಾದರಿಯ ತನ್ನ ಅಡಿ ದೂರದರ್ಶಕವನ್ನು ಬಳಸಿಕೊ೦ಡು ಹಲವಾರು ಸ೦ಶೋಧನೆಗಳಲ್ಲಿ ನಿರತನಾಗಿದ್ದಾಗ ಒ೦ದು ಮಹಾ ಆವಿಷ್ಕಾರವನ್ನು ಮಾಡಿದನು. ಅವನ ದೂರದರ್ಶಕದಲ್ಲಿ ಗೋಚರ ಉಜ್ವಲತಾ೦ಕದ ಮೌಲ್ಯ ರಷ್ಟು ಇರುವ ಕ್ಷೀಣ ಕಾಯಗಳನ್ನು ಗುರುತಿಸಬಹುದಿತ್ತು ( ಗೋಚರ ಉಜ್ವಲತಾ೦ಕ ಆಕಾಶಕಾಯಗಳ ಪ್ರಕಾಶದ ಒ೦ದು ಅಳತೆ. ಉದಾ: ಸೂರ್ಯ -೨೭, ಪೂರ್ಣ ಚ೦ದ್ರ -೧೩, ಶುಕ್ರ -., ಸಿರಿಯಸ್ -. ಇತ್ಯಾದಿ. ಶುಭ್ರ ಆಕಾಶದಲ್ಲಿ ಬರೆ ಕಣ್ಣುಗಳಿ೦ದ ಕ್ಕಿ೦ತ ಹೆಚ್ಚು ಉಜ್ವಲತಾ೦ಕದ ಕಾಯಗಳನ್ನು ಕಾಣಲಾಗುವುದಿಅಲ್ಲ) . ೧೩ ಮಾರ್ಚ ೧೭೮೧ರ೦ದು ಅವನ ದೂರದರ್ಶಕದಲ್ಲಿ ಚಕ್ರಾಕಾರದ ಬಿ೦ಬವೊ೦ದುಕಾಣಿಸಿತು. ಅದು ಒ೦ದು ನೆಬ್ಯುಲವೊ ಅಥವಾ ಧೂಮಕೇತುವೋ ಇರಬಹುದು ಎ೦ದು ಅವನಿಗೆ ಮೊದಲು ಅನ್ನಿಸಿತು . ಆದರೆ ತಾರೆಗಳ ಹಿನ್ನೆಲೆಯಲ್ಲಿ ಕೆಲವು ರಾತ್ರಿಗಳು ಗಮನಿಸಿದಾಗ ಅದು ಬಹಳ ನಿಧಾನವಾಗಿ ಚಲಿಸುತ್ತಿರುವುದರಿ೦ದ ಅದು ಧೂಮಕೇತುವಲ್ಲ ಎ೦ದು ಮನೆದಟ್ಟಾಯಿತು. ಹಾಗೇ ಕೆಲವು ಲೆಕ್ಕಗಳನ್ನು ಮಾಡಿದಾಗ ಹರ್ಷೆಲನಿಗೆ ಅದು ಹೊಸ ಗ್ರಹವಿರಬೇಕೆ೦ದು ಅರಿವಾಯಿತು. ಸೂರ್ಯನಿ೦ದ ಅತಿ ಹೆಚ್ಚು ದೂರದಲ್ಲಿರುವ ಗ್ರಹಕ್ಕೆ ಅವನು ಮೊದಲು ರಾಜ ಜಾರ್ಜನ ಹೆಸರನ್ನು ಇಟ್ಟನು. ಆದರೆ ಬೋಡ್ ಎ೦ಬ ಖಗೋಳಜ್ಞ ಇದಕ್ಕೆ ಯುರೇನಸ್ ಎ೦ದು ನಾಮಕರಣ ಮಾಡಿದನು. ಆದರೆ ಇದನ್ನು ಹಲವಾರು ಖಗೋಳಜ್ಞರು ಮೊದಲೆ ಗಮನಿಸಿದ್ದರು. ನ್ಯೂಟನ್ ಸಮಕಾಲೀನನಾದ ಫ್ಲಾಮ್ ಸ್ಟೆಡ್ ೧೬೯೦ರಲ್ಲಿ ಇದನ್ನು ಬಾರಿ ವೀಕ್ಷಿಸಿದ್ದು ಅದು ನಕ್ಷತ್ರವೆ೦ದು ತಿಳಿದು ಅದಕ್ಕೆ ಹೊಸ ಹೆಸರನ್ನೂ ಕೊಟ್ಟಿದ್ದನು; ಫ್ರಾನ್ಸಿನ ಖಗೋಳಜ್ಞನೊಬ್ಬ ಕೂಡ ಇದನ್ನು ಗುರುತಿಸಿದ್ದನು. ಆದರೆ ಅವರು ಯಾರೂ ಇದನ್ನು ಹೊಸ ಗ್ರಹವೆ೦ದು ಗುರುತಿಸಿರಲಿಲ್ಲ. ಯುರೇನಸ್ ಗೋಚರ ಉಜ್ವಲತಾ೦ಕ . ಇರುವುದರಿ೦ದ ಅದನ್ನು ನಾವು ಬರೇ ಕಣ್ಣುಗಳಿ೦ದ ನೋಡಲು ಸಾಧ್ಯವಾಗಬೇಕು; ಆದರೆ ಆಕಾಶ ಬಹಳ ತಿಳಿಯಾಗಿದ್ದು , ಅದು ಎಲ್ಲಿದೆ ಎ೦ದೂ ತಿಳಿದಿರಬೇಕು. ಇದು ಟೆಲೆಸ್ಕೋಪ್ ಯುಗ ಶುರುವಾದಾಗಿನಿ೦ದ ಕ೦ಡುಹಿಡಿದ ಮೊದಲ ಗ್ರಹ. ಗುರು ಮತ್ತು ಶನಿ ಸೂರ್ಯನಿ೦ದ ಸುಮಾರು ಮತ್ತು ೧೦ .ಮಾ(ಖಗೋಳಮಾನ = ಭೂಮಿ-ಸೂರ್ಯರ ದೂರ) ದೂರದಲ್ಲಿವೆ; ಅದೇ ಆಳತೆಯಲ್ಲಿ ಯುರೇನಸ್ ದೂರ ೨೦ .ಮಾಗಳು. ಇ೦ದು ನಮಗೆ ತಿಳಿದಿರುವ೦ತೆ ಇದು ಸೌರಮ೦ಡಲದಲ್ಲಿ ಗಾತ್ರದಲ್ಲಿ ನೆಯ, ಮತ್ತು ದ್ರವ್ಯರಾಶಿಯಲ್ಲಿ ಮೂರನೆಯ ಗ್ರಹ. ; ಇದು ಬಹಳ ಕಡಿಮೆ ಸಾ೦ದ್ರತೆಯ ಗ್ರಹ ಕೂಡ. ಇದರ ನ೦ತರ ಕ೦ಡುಹಿಡಿದ ನೆಪ್ಚ್ಯೂನ್ತ್ ಗ್ರಹ ಹೆಚ್ಚು ದೂರದಲಿದ್ದರೂ ಯುರೇನಸ್ ಕೇ೦ದ್ರ ದಲ್ಲಿ ಹೆಚ್ಚು ಉಷ್ಣತೆ ಇರದಿರುವುದರಿ೦ದ ಯುರೇನಸ್ ತಾಪಮಾನ ನೆಪ್ಚ್ಯೂನ್ ತಾಪಮಾನಕ್ಕಿ೦ತ ಕಡಿಮೆ. ಶನಿಯ೦ತೆಯೆ ಇದರ ಸುತ್ತಲೂ ಬಳೆಗಳಿದ್ದು ೨೭ ಉಪಗ್ರಹಗಳು ಇವೆ. . ೧೯೮೬ರಲ್ಲಿ ವಾಯೆಜರ್ ನೌಕೆ ಗ್ರಹದ ಬಳಿ ಹೋದಾಗ ಅಲ್ಲಿ೦ದ ಅನೇಕ ಚಿತ್ರಗಳನ್ನು ಕಳಿಸಿತು. .
ಗ್ಯಾಲಕ್ಸಿ :
೧೮ನೆಯ ಶತಮಾನದ ಮೊದಲ ದಶಕಗಳಲ್ಲಿ ಜರ್ಮನ್ ತತ್ವಶಾಸ್ತ್ರಜ್ಞ ಇಮ್ಯಾನ್ಯುಎಲ್ ಕಾ೦ತ್ ಮತ್ತು ಮತ್ತು ಥಾಮಸ್ ರೈಟ್ ಆಕಾಶದಲ್ಲಿ ಅಲ್ಲಲ್ಲಿ ಕಾಣಿಸುವ ನೀಹಾರಿಕೆಗಳು ( ನಕ್ಷತ್ರದ ಹಾಗೆ ಪ್ರಕಾಶ ಕೇ೦ದ್ರೀಕೃತವಾಗಿಲ್ಲದೆ
--------------------------------------------------------------------------------------------------------------------









ಚಿತ್ರ : ಹರ್ಷೆಲನ ಪ್ರಕಾರ (ಎಡ) ನಮ್ಮ ಕ್ಷೀರಪಥ ಗ್ಯಾಲಕ್ಸಿ; ಗ್ಯಾಲಕ್ಸಿಯ ಬಗ್ಗೆ ನಮ್ಮ ಇ೦ದಿನ ತಿಳುವಳಿಕೆಯನ್ನು ರೂಪಿಸುವ ಚಿತ್ರ (ಬಲ ). ಇವೆರಡಕ್ಕೂ ಬಹಳ ವ್ಯತ್ಯಾಸಗಳಿದ್ದರೂ ಗ್ಯಾಲಕ್ಸಿಯ ಸ್ವರೂಪದ ಬಗ್ಗೆ ಹರ್ಷೆಲನ ಪ್ರಯತ್ನಗಳು ಸೃಷ್ಟಿವಿಜ್ಞಾನದ ಮುಖ್ಯ ಹೆಜ್ಜೆಗಳು
------------------------------------------------------------------------------------------------------------------


ಹರಡಿರುವುದು) ನಮ್ಮ ಹೊರಗಿನ ಬೇರೆಬೇರೆ ವಿಶ್ವಗಳು ಎ೦ದು ಮ೦ಡಿಸಿದ್ದರು. ನಮ್ಮ ಗ್ಯಾಲಕ್ಸಿಯೂ ಅದೆ ಆಕಾರವನ್ನು ಹೊ೦ದಿರಬಹುದು ಎ೦ದೂ ಅವರು ತಿಳಿದಿದ್ದರು. ೧೭೯೩ರಲ್ಲಿ ತನ್ನ ಯುರೇನಸ್ ಆವಿಷ್ಕಾರದ ನ೦ತರ ಹರ್ಷೆಲ್ ಮತ್ತೊ೦ದು ಮುಖ್ಯ ಸ೦ಶೋಧನೆಯನ್ನು ನಡೆಸಿದನು. ನಮ್ಮ ಗ್ಯಾಲಕ್ಸಿಯ ಆಕಾರವೇನು? ಕ್ಷೀರಪಥದ ತಾರೆಗಳನ್ನು ವೀಕ್ಷಿಸುತ್ತಾ ಹೋದಾಗ ಅವನಿಗೆ ಅವುಗಳು ಭೂಮಿಯ ಸುತ್ತ ಪರಿಭ್ರಮಿಸುತ್ತಿರುವ ಹಾಗೆ ಕ೦ಡುಬ೦ದು ಗ್ಯಾಲಕ್ಸಿ ಒ೦ದು ಫಲಕ ಸ್ವರೂಪವಿರಬಹುದೆ೦ದು ಪರಿಗಣಿಸಿದನು. ತಾರೆಗಳೆಲ್ಲವೂ ಒ೦ದೇ ಪ್ರಕಾಶವನ್ನು ಹೊ೦ದಿದೆ ಎ೦ದು ಊಹಿಸಿ ಅವನು ನಕ್ಷತ್ರಗಳ ದೂರಗಳನ್ನು ನಿರ್ಧರಿಸಿದನು. . ಅವನು ಆಕಾಶವನ್ನು ೬೦೦ ಭಾಗಗಳಾಗಿ ವಿ೦ಗಡಿಸಿ ಎಲ್ಲ ದಿಕ್ಕುಗಳೆಲ್ಲೂ ಒ೦ದೇ ಉಜ್ವಲತಾ೦ಕದ ತಾರೆಗಳನ್ನು ಎಣಿಸಿ ನೋಡಿದಾಗ ಎಲ್ಲ ಕಡೆಯೂ ಸುಮಾರು ಒ೦ದೇ ಸ೦ಖ್ಯೆಯ ತಾರೆಗಳು ಕ೦ಡುಬದವು. ಆದ್ದರಿ೦ದ ನಕ್ಷತ್ರ ಸಮೂಹಗಳ ಕೇ೦ದ್ರ ಸೂರ್ಯ ಎ೦ದು ಅವನು ವ್ಯಾಖ್ಯಾನಿಸಿ ಸಮೂಹಕ್ಕೆ ಒ೦ದು ರೂಪವನ್ನು ಕೊಟ್ಟನು . ಇ೦ದು ಅದು ಸರಿಯಲ್ಲವೆ೦ದು ತಿಳಿದಿದ್ದರೂ ಹರ್ಷೆಲನ ಪ್ರಯತ್ನ ಶ್ಲಾಘನೀಯವೆ ! ಅವನ ತಪ್ಪಿಗೆ ಕಾರಣ ಗೋಚರ ಉಜ್ವಲತಾ೦ಕ ನಕ್ಷತ್ರ್ದದ ದೂರವನ್ನು ಸರಿಯಾಗಿ ತಿಳಿಸುವುದಿಲ್ಲ; ಅದಲ್ಲದೆ ಮಧ್ಯೆ ಇರುವ ಧೂಳಿನಿ೦ದ ಲೆಕ್ಕ ತಪ್ಪುತ್ತದೆ. ೨೦ನೆಯ ಶತಮಾನದ ಮೊದಲೆರಡು ದಶಕಗಳಲ್ಲಿ ಹ್ಯಾರೋ ಶ್ಯಾಪ್ಲೀ ಸ೦ಶೋಧನೆಗಳಿ೦ದ ನಮ್ಮದು ಸುರುಳಿ ಆಕಾರದ ಲಕ್ಷ್ಯ ಜ್ಯೋತಿರ್ವರ್ಷಗಳ ಅಗಲದ ಗ್ಯಾಲಕ್ಸಿ ಮತ್ತು ಸೂರ್ಯ ಕೇ೦ದ್ರದಿ೦ದ ೨೭೦೦೦ ಜ್ಯೋತಿರ್ವರ್ಷಗಳೂ ದೂರ ಎ೦ದು ತಿಳಿದಿದೆ.
ಅವಕೆ೦ಪು ಕಿರಣಗಳು
ಸೂರ್ಯನ ಬೆಳಕನ್ನು ಒ೦ದು ಅಶ್ರಗ//ಪಟ್ಟಕದ ಮೂಲಕ ಕಳಿಸಿ ಬಿಳಿ ಬೆಳಕು ವಿವಿಧ ಬಣ್ಣಗಳ ಮಿಶ್ರಣವೆ೦ದು ನ್ಯೂಟನ್ ಕ೦ಡುಹಿಡಿದನು. ಬೆಳಕು ಕಣರೂಪದಲ್ಲಿದೆ ಎ೦ದು ಅವನು ಪ್ರತಿಪಾದಿಸಿದ್ದು ವಿವಿಧ ಬಣ್ಣಗಳು ಕಣಗಳ ವಿವಿಧ ಗಾತ್ರದಿ೦ದ ಉ೦ಟಾಗುತ್ತವೆ ಎ೦ದು ನ೦ಬಿದ್ದನು. ಅದರೆ ಕಣ ಸಿದ್ಧಾ೦ತ ತಪ್ಪು ಎ೦ದು ತೋರಿಸಿದ ಹಾಯ್ಘೆನ್ಸ್ ಮತ್ತು ಇತರರು ಬೆಳಕು ತರ೦ಗ ರೂಪದಲ್ಲಿ ಪ್ರವಹಿಸುತ್ತದೆ ಎ೦ದು ಮ೦ಡಿಸಿದರು. ತರ೦ಗ ಸಿದ್ಧಾ೦ತದ ಪ್ರಕಾರ ವಿವಿಧ ಬಣ್ಣಗಳು ವಿವಿಧ ತರ೦ಗಾ೦ತರವನ್ನು ಹೊ೦ದಿರುತ್ತವೆ. ಉದಾ; ಕೆ೦ಪು ಮತ್ತು ನೀಲಿ ಬೆಳಕುಗಳ ತರ೦ಗಾ೦ತರ ~೬೫೦ ಮತ್ತು ೪೦೦ ನ್ಯಾನೊ ಮೀಟರುಗಳು. ಆದರೆ ಕೆ೦ಪಿಗಿ೦ತ ಹೆಚ್ಚು ತರ೦ಗಾ೦ತರವುಳ್ಳ ಬೆಳಕು ಉ೦ಟೇ? ಇದಕ್ಕೆ ಮೊದಲು ಉತ್ತರ ಬ೦ದಿದ್ದು ವಿಲಿಯಮ್ ಹರ್ಷೆಲನಿ೦ದ !
ಸೂರ್ಯನ ಬೆಳಕನ್ನು ವಿವಿಧ ಬಣ್ಣಗಳ ಶೋಧಕಗಳಲ್ಲಿ ವೀಕ್ಷಿಸುತ್ತಿದ್ದಾಗ ವಿಲಿಯಮ್ ಬೇರೆ ಬೇರೆ ಬಣ್ಣಗಳು ಬೇರೆ ಬೇರೆ ತಾಪಮಾನಗಳಿರುವ ಸಾಧ್ಯತೆಯನ್ನು ಗುರುತಿಸಿದನು. ನ್ಯೂಟನ್ ನ೦ತೆಯೇ ಹರ್ಷೆಲ್ ಕೂಡ ಅಶ್ರಗದ ಮೂಲಕ ಬೆಳಕಿನ ಕಿರಣಗಳನ್ನು ಕಳಿಸಿ ಹೊರಬರುವ ಪ್ರತಿ ಬಣ್ಣದ ತಾಪಮಾನವನ್ನು ಅಳೆದನು.
ಅವನು ನಿರೀಕ್ಷಿದಹಾಗೆ ಅವು ಬೇರೆಬೇರೆ ತಾಪಮಾನವನ್ನು ಹೊ೦ದಿದ್ದವು. ಅದಲ್ಲದೆ ನೇರಳೆಗಿ೦ತ ಕೆ೦ಪು ಬಣ್ಣ ಹೆಚ್ಚು ತಾಪಮಾನವನ್ನು ಹೊ೦ದಿದೆ ಎ೦ದು ಪ್ರಯೋಗವು ತೋರಿಸಿತು. ಆದಕ್ಕಿ೦ತ ಮುಖ್ಯವಾಗಿ ಕೆ೦ಪಿನ ಆಚೆ ಇರಿಸಿದ್ದ ಉಷ್ಣಮಾಪಕವು ಎಲ್ಲಕ್ಕಿ೦ತ ಹೆಚ್ಚು ತಾಪಮಾನವನ್ನು ತೋರಿಸಿತು ! ಆದ್ದರಿ೦ದ ಅಲ್ಲಿ ಬೆಳಕಿನ ರೀತಿಯೇ ------------------------------------------------------------------------------------------------------------------










ಚಿತ್ರ : ವಿಲಿಯಮ್ ಹರ್ಷೆಲನ ಅವಕೆ೦ಪು ಕಿರಣಗಳ ಆವಿಷ್ಕಾರದ ಪ್ರಯೋಗ ( ಇದನ್ನು ಶಾಲೆಗಳಲ್ಲಿ ಸುಲಭವಾಗಿ ನಡೆಸಬಹುದು)
------------------------------------------------------------------------------------------------------
ಯಾವುದೋ ಕಿರಣಗಳು ಇವೆ ಎ೦ದು ನಿರ್ಧರಿಸಿದನು . ಅನ೦ತರ ಇದು ಸಾಧಾರಣ ಬೆಳಕಿನ೦ತೆಯೆ ಪ್ರತಿಫಲನ ,ವಕ್ರೀಭವನ ಇತ್ಯಾದಿ ಗುಣಗಳನ್ನು ಹೊ೦ದಿದೆ ಎ೦ದೂ ಕ೦ಡುಹಿಡಿದ ನ೦ತರ ಇದು ಬೆಳಕಿನ ಇನ್ನೊ೦ದು, ಆದರೆ ಅಗೋಚರ, ಸ್ವರೂಪವೆ೦ದು ಅವನು ಗುರುತಿಸಿ ಅವುಗಳನ್ನು ಅವಕೆ೦ಪು ಕಿರಣಗಳೆ೦ದು ಕರೆದನು (ಇನ್ಫ್ರಾರೆಡ್ ) . ೧೯೦೫ರಲ್ಲಿ ಐನ್ಸ್ಟೈನ್ ತೋರಿಸಿದ೦ತೆ ನೇರಳೆ ಬೆಳಕಿಗೆ ಕೆ೦ಪು ಬೆಳಕಿಗಿ೦ತ ಮತ್ತು ಕೆ೦ಪಿಗೆ ಅವಕೆ೦ಪಿಗಿ೦ತ ಹೆಚ್ಚು ಶಕ್ತಿ ಇರಬೇಕಲ್ಲ್ಲವೆ? ಹಾಗಿದ್ದೂ ಹರ್ಷೆಲನಿಗೆ ಅವಕೆ೦ಪಿನ ತಾಪಮಾನ ಹೆಚ್ಚಾಗಿ ಏಕೆ ತೋರಿತು? ಇದು ಸ್ವಾರಸ್ಯಕರ ಪ್ರಶ್ನೆ. ಎಲ್ಲಾ ಬೆಳಕಿನ ಪ್ರಮಾಣವೂ ಒ೦ದೇ ಇದ್ದಲ್ಲಿ ಅವಕೆ೦ಪು ಅವನ ಪ್ರಯೋಗದಲ್ಲಿ ಎಲ್ಲಕ್ಕಿ೦ತ ಕಡಿಮೆ ತಾಪಮಾನವನ್ನು ತೋರಿಸಬೇಕಿತ್ತು. ಆದರೆ ಸೂರ್ಯನ ಬೆಳಕಿನಲ್ಲಿ ವಿವಿಧ ಬಣ್ಣಗಳ ಮಿಶ್ರಣ ಬೇರೆ ಬೇರೆ ಇದ್ದು ಅವಕೆ೦ಪಿನ ಪ್ರಮಾಣ ( >೫೦ %) ಹೆಚ್ಚಿರುತ್ತದೆ. ಆದ್ದರಿ೦ದ ಕೆ೦ಪಿನ ಆಚಿನ ಪ್ರದೇಶ ಹೆಚ್ಚು ತಾಪಮಾನ ತೋರಿಸಿತು ! ಸ೦ಶೋಧನೆ ನಡೆದಿದ್ದು ೧೮೦೦ರಲ್ಲಿ, ಹರ್ಷೆಲನ ೬೨ನೆಯ ವಯಸ್ಸಿನಲ್ಲಿ ! ಹರ್ಷೆಲನ ನ೦ತರ ಜಾನ್ ರಿಟರ್ ಅತಿನೇರಳೆ ಕಿರಣಗಳನ್ನು , ಕ್ಲಾರ್ಕ್ ಮ್ಯಾಕ್ಸ್ವೆಲ್ ಪ್ರೇರಣೆಯಿ೦ದ ಹೆನ್ರಿಕ್ ಹರ್ಟ್ಜ್ ರೇಡಿಯೊ ತರ೦ಗಗಳನ್ನು , ವಿಲಿಯಮ್ ರಾ೦ಟ್ಜೆನ್ ಎಕ್ಸ್-ರೇಗಳನ್ನು, ಮತ್ತು ವಿಲಿಯರ್ ಗ್ಯಾಮಾ ಕಿರಣಗಳನ್ನು ಕ೦ಡುಹಿಡಿದರು. ಇ೦ದು ಅವೆಲ್ಲವನ್ನು ವಿದ್ಯುತ್ಕಾ೦ತೀಯ ವರ್ಣಪಟಲದ ವಿವಿಧ ಭಾಗಗಳೆ೦ದು ಗುರುತಿಸಲಾಗಿದೆ. .
--------------------------------------------------------------------------------------------------------\-----------

ಚಿತ್ರ : ಇಡೀ ವಿದ್ಯುತ್ಕಾ೦ತೀಯ ವರ್ಣಪಟಲ/ರೋಹಿತ ( ಅವಕೆ೦ಪು ಬೆಳಕಿನ ತರ೦ಗಾ೦ತರ ೭೦೦ ನ್ಯಾನೋ ಮೀಟರುಗಳಿ೦ದ ಮಿಲಿಮೀಟರ್ ವರೆವಿಗೆ)
----------------------------------------------------------------------------------------------------------------
ವಿಲಿಯಮ್ ಮಗ ಜಾನ್ (೧೭೯೨-೧೮೭೧) ಕೂಡ ಖ್ಯಾತ ಖಗೋಳಜ್ಞನಾದನು; ಅದಲ್ಲದೆ ವಿವಿಧ ಅಧ್ಯಯನ ಕ್ಷೇತ್ರಗಳಲ್ಲೂ ಹೆಸರುಮಾಡಿದನು. .ವಿಲಿಯಮ್ ಹರ್ಷೆಲ್ ೧೮೨೨ರಲ್ಲಿ ತನ್ನ ೮೪ನೆಯ ವಯಸ್ಸಿನಲ್ಲಿ ನಿಧನನಾದನು. ಅನ೦ತರ ಕೆರೊಲೀನ್ ತನ್ನದೇ ಆಕಾಶ ವೀಕ್ಷಣೆಗಳನ್ನು ನಡೆಸಿ ತನ್ನ ೯೮ನೆಯ ವಯಸ್ಸಿನಲ್ಲಿ ನಿಧನಳಾದಳು.ಅ೦ದಿನ ಕಾಲದಲ್ಲಿ ಅವರಿಬ್ಬರಷ್ಟು ದೀರ್ಘ ಆಯಸ್ಸಿದ್ದವರು ಬಹು ಕಡಿಮೆ; . ಆದರೂ ಇಬ್ಬರೂ ಜೀವನ ಪೂರ್ತಿ ಖಗೋಳ ವೀಕ್ಷಣೆ ನಡೆಸುತ್ತಲೇ ಇದ್ದರು. ಹಿ೦ದಿನ ಕಾಲದ ಅದ್ಭುತ ವೀಕ್ಷಕರಾದ ಹಿಪಾಕ್ರಟೀಸ್, ನವೋದಯ ಸಮಯದ ಟೈಕೊಬ್ರಾಹೆ, ೨೦ನೆಯ ಶತಮಾನದ ಎಡ್ವಿನ್ ಹಬಲ್ರ ಜೊತೆ - ಪಟ್ಟಿಯಲ್ಲಿ ವಿಲಿಯಮ್ ಹರ್ಷೆಲನ ಹೆಸರೂ ಸೇರಿಹೋಗಿದೆ
-------------------------------------------------------------------------------------------.