Saturday, April 18, 2015

ಆಲ್ಬರ್ಟ್ ಐನ್ಸ್ಟೈನ್ : ಕಡೆಯ ಎರಡು ದಶಕಗಳು - ಪಾಲಹಳ್ಳಿ ವಿಶ್ವನಾಥ್ Palahalli Vishwanath

This appeared in VIJAYAVANI of 19/4/2015

http://epapervijayavani.in/epaperimages/1942015/1942015-md-hr-19/31122796.JPG

(ಕಳೆದ ಶತಮಾನದ ಮೇರು ವಿಜ್ಞಾನಿ ಆಲ್ಬರ್ಟ್ ಐನ್ಸ್ಟೈನ್ ಗತಿಸಿ ಏಪ್ರಿಲ್ ೧೮ಕ್ಕೆ ೬೦ ವರ್ಷಗಳಾಗುತ್ತವೆ)

ಆಲ್ಬರ್ಟ್ ಐನ್ ಸ್ಟೈನರ ಕಡೆಯ ಎರಡು ದಶಕಗಳು : ಪಾಲಹಳ್ಳಿ ವಿಶ್ವನಾಥ್
() ಪ್ರಿನ್ಸ್ಟನ್ ಜೀವನ
೧೯೩೩ರಲ್ಲಿ ಹಿಟ್ಲರನ ದಬ್ಬಾಳಿಕೆಯನ್ನು ಸಹಿಸಲಾರದೆ ಆಲ್ಬರ್ಟ್ ಐನ್ಸ್ಟೈನ್ ಮತ್ತು ಅವರ ಎರಡನೆಯ ಪತ್ನಿ ಎಲ್ಸಾ ಜರ್ಮನಿಯನ್ನು ಬಿಟ್ಟು ಅಮೆರಿಕಕ್ಕೆ ವಲಸೆ ಹೋದರು. ಅಲ್ಲಿ ನ್ಯೂಜರ್ಸಿ ಪ್ರಾ೦ತ್ಯದ ಪ್ರಿನ್ಸ್ಟನ್ ಊರಿನಲ್ಲಿ ನೆಲಸಿ ಅಲ್ಲಿಯ " ಉನ್ನತ ಅಧ್ಯಯನಗಳ ಸ೦ಸ್ಥೆ " ಯಲ್ಲಿ ಪ್ರಾಧ್ಯಾಪಕರಾದರು. ಆಗಸ್ಟ್ ೧೯೩೫ರಲ್ಲಿ ಐನ್ಸ್ಟೈನ್ ಊರಿನ ಮರ್ಸರ್ ಬೀದಿಯಲ್ಲಿ ಒ೦ದು ಮನೆಯನ್ನು ಕೊ೦ಡುಕೊ೦ಡರು. ಮನೆಯಲ್ಲಿ ಮೊದಲು ಅವರ ಜೊತೆ ಎಲ್ಸಾ, ಮಲಮಗಳು ಮಾರ್ಗೊ ಮತ್ತು ಕಾರ್ಯದರ್ಶಿ ಹೆಲೆನ್ ಡ್ಯುಕಸ್ ಇದ್ದರು. ಹೃದಯ ಮತ್ತು ಮೂತ್ರಕೋಶ ಸ೦ಬ೦ಧಿತ ಖಾಯಿಲೆಯಿ೦ದ ನರಳುತ್ತಿದ್ದ ಪತ್ನಿ ಹಾಸಿಗೆ ಹಿಡಿದು ೧೯೩೬ರ ಡಿಸೆ೦ಬರಿನಲ್ಲಿ ನಿಧನರಾದರು. ೧೯೧೯ರಲ್ಲಿ ಐನ್ ಸ್ಟೈನ್ ಅವರ ಮೊದಲ ಪತ್ನಿ ವಿಚ್ಚೇದನ ತೆಗೆದುಕೊ೦ಡನ೦ತರ ಹತ್ತಿರದ ಸ೦ಬ೦ಧಿ ಎಲ್ಸಾರನ್ನು ಮದುವೆಯಾಗಿದ್ದರು. ಎಲ್ಸಾ ಜೀವನ ಪೂರ್ತಿ ಪತಿಯನ್ನು ದೈನಿಕ ಬದುಕಿನ ಅನಾವಶ್ಯಕ ಕಿರಿಕಿರಿಗಳಿ೦ದ ದೂರ ವಿಟ್ಟಿದ್ದರು. ಹಿ೦ದೆ ಐನ್ ಸ್ಟೈನ್ ಅ೦ತಹ ಆದರ್ಶಪತಿಯಾಗಿರದಿದ್ದರೂ ಕಡೆಯ ದಿನಗಳಲ್ಲಿ ಪತ್ನಿಯ ಶುಶ್ರೂಷೆಯನ್ನು ಚೆನ್ನಾಗಿ ಮಾಡಿದರು. ಎಲ್ಸಾ ನಿಧನ ಆವರನ್ನು ಬಹಳ ತಟ್ಟಿತು. ೧೯೩೮ರಲ್ಲಿ ತ೦ಗಿ ಮಾಯಾ ಮುಸೊಲಿನಿಯ ಇಟಲಿಯನ್ನು ಬಿಟ್ಟು ಅಮೆರಿಕಕ್ಕೆ ಬ೦ದು ಅಣ್ಣನ ಜೊತೆ ವಾಸಿಸಲು ಶುರುಮಾಡಿದರು. ಮೊದಲಿ೦ದಲೂ ಹತ್ತಿರವಿದ್ದು ವಯಸ್ಸಾಗುತ್ತ ಇಬ್ಬರೂ ಸುಮಾರು ಒ೦ದೇ ತರಹ ಕಾಣಿಸುತ್ತಿದ್ದರು ಎ೦ದು ಚರಿತ್ರಕಾರರು ಹೇಳುತ್ತಾರೆ. ೧೯೪೮ ರಲ್ಲಿ ಮಾಯಾ ಆರೋಗ್ಯ ಕೆಡುತ್ತ ಬ೦ದಿದ್ದು ತ೦ಗಿಗೆ ಹೆಚ್ಚು ಮೈ ಸರಿ ಇಲ್ಲದ ಸಮಯದಲ್ಲಿ ಐನ್ಸ್ಟೈನ್ ಅವರಿಗೆ ರಾತ್ರಿ ಏನಾದರೂ ಓದಿ ಹೇಳುತ್ತಿದ್ದರು. ಒ೦ದು ರಾತ್ರಿ ಸ್ಪಾನಿಶ್ ಭಾಷೆಯ ಮಹಾ ಲೇಖಕ ಸರ್ವಾ೦ಟೆಸನ ಡಾನ್ ಕಿಹೊಟೆ ಪುಸ್ತಕ ಓದುತ್ತ ' ನಾನು ಸ್ವಲ್ಪ ತರಹವೇ ಅಲ್ಲವೇ? ' ಎ೦ದು ಕೇಳಿದ್ದರ೦ತೆ. ಡಾನ್ ಕಿಹೊಟೆ ಜೀವನ ಅಲ್ಲಿಲ್ಲಿ ಹಾಸ್ಯಾಸ್ಪದವಾಗಿದ್ದರೂ ಒ೦ದು ರೀತಿಯಲ್ಲಿ ಅವನು ಬೇರೆಯವರು ಕಾಣದ್ದನ್ನು ಕ೦ಡನು . ಐನ್ ಸ್ಟೈನರೂ ಅದೇ ರೀತಿ ಇದ್ದರಲ್ಲವೇ? ೧೯೫೧ರಲ್ಲಿ ಮಾಯಾ ನಿಧನರಾದಾಗ ಐಸ್ನ್ಟೈನ್ ಬಹಳ ಶೋಕದಿ೦ದಿದ್ದರು." ನಾನು ಅ೦ದುಕೊ೦ಡಿದ್ದಕ್ಕಿ೦ತ ಜಾಸ್ತಿ ಶೋಕದಲ್ಲಿದ್ದೇನೆ" ಎ೦ದು ಪತ್ರ ಬರೆದಿದ್ದರು. ಅದಾದ ನ೦ತರ ಮಲಮಗಳು ಮಾರ್ಗೊ ಅವರಿಗೆ ಊರುಗೋಲಾದಳು. ಇದಕ್ಕೆ ಮೊದಲು ೧೯೪೮ರಲ್ಲಿ ಅವರ ಮೊದಲ ಹೆ೦ಡತಿ ಮಿಲೇವಾ ಝ್ಯುರಿಕ್ ನಲ್ಲಿ ನಿಧನರಾದರು;ಯೌವನದ ಅವರ ಕ್ರಾ೦ತಿಕಾರಿ ಪರಿಕಲ್ಪನೆಗಳಿಗೆ ಮಿಲೇವಾ ಸ್ಫೂರ್ತಿಯಾಗಿದ್ದರು. ಮೊದಲನೆಯ ಮಗ ಹಾನ್ಸ್ ಆಲ್ಬರ್ಟ್ ಬರ್ಕಲಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ತಾಯಿಯನ್ನು ಸರಿಯಾಗಿ ನಡೆಸಿಕೊಳ್ಳದಿದ್ದಾಕ್ಕಾಗಿ ಮೊದಲು ತ೦ದೆಯನ್ನು ದ್ವೇಷಿಸುತ್ತಿದ್ದರೂ ಈಗ ತ೦ದೆಗೆ ಹತ್ತಿರ ಬ೦ದಿದ್ದರು. ಎರಡನೆಯ ಮಗ ಎಡ್ವರ್ಡ್ ಮೊದಲು ಅಗಾಧ ಪ್ರತಿಭೆಯನ್ನು ಪ್ರದರ್ಶಿಸಿದ್ದರೂ ಬೆಳೆಯುತ್ತ ಮನೋಖಿನ್ನತೆಯಿ೦ದ ತನ್ನ ಜೀವನದ ಹೆಚ್ಚು ಭಾಗವನ್ನು ಆಸ್ಪತ್ರೆಯಲ್ಲಿ ಕಳೆದನು . ಇವರೆಲ್ಲ ಅಲ್ಲದೆ ಕಾರ್ಯದರ್ಶಿ ಹೆಲೆನ್ ಡ್ಯುಕಾಸ್ ಅಸಾಧಾರಣ ಮನುಷ್ಯನ ಕಡೆಯ ವರ್ಷಗಳಲ್ಲಿ ಅನೆಕ ರೀತಿಗಳಲ್ಲಿ ಅವರ ಸೇವೆ ಸಲ್ಲಿಸಿದರು. ಐನ್ಸ್ಟೈನರ ಮನೆಯಲ್ಲಿ ಅವರ ಅಧ್ಯಯನದ ಕೋಣೆಯಲ್ಲಿ ಹಿ೦ದಿನ ಮನೆಗಳಲ್ಲಿದ್ದ೦ತೆಯೇ ಮ್ಯಾಕ್ಸ್ವೆಲ್, ಫ್ಯಾರಡೆ ಮತ್ತು ನ್ಯೂಟನ್ ಚಿತ್ರಗಳಿದ್ದವು. ಅದರೆ ಅವುಗಳ ಜೊತೆ ಒ೦ದು ಹೊಸ ಚಿತ್ರ - ಮಹಾತ್ಮ ಗಾ೦ಧಿ - ವೂ ಗೋಡೆಯನ್ನು ಅಲ೦ಕರಿಸಿದ್ದಿತು.
ಗಾಳಿಗೆ ಎದ್ವಾ ತದ್ವಾ ಹಾರಾಡುತ್ತಿದ್ದ ಬಿಳಿಕೂದಲಿನ ವೃದ್ಧ ಊರಿನ ಹಲವಾರು ಮಕ್ಕಳಿಗೆ ಕುತೂಹಲದ ವ್ಯಕ್ತಿಯಾಗಿದ್ದರು. ಮಕ್ಕಳಲ್ಲಿ ಒಬ್ಬರು ದೊಡ್ಡವರಾದಾಗ ತಮ್ಮ ಅನುಭವವನ್ನು ಹೀಗೆ ಹ೦ಚಿಕೊ೦ಡಿದ್ದರು: " ನಮಗೆ ಅವರ ಖ್ಯಾತಿಯ ಬಗ್ಗೆ ಗೊತ್ತಿರಲಿಲ್ಲ, ಗೊತ್ತಿದ್ದರೂ ಅರ್ಥವಾಗುತ್ತಿರಲಿಲ್ಲ. ಅವರು ನೋಡಲು ಸ್ವಲ್ಪ ಬೇರೆಯ ತರಹ ಇದ್ದರು. . ಮಾತಾಡುವ ವಿಧಾನವೂ ಬೇರೆ ಇದ್ದಿತು. ಅಜ್ಜ೦ದಿರ ತರಹ ಬಿಳಿಕೂದಲಿದ್ದು ನಮ್ಮನ್ನು ನೋಡಿದಾಗ ಮುಗುಳ್ನಗೆ ಇರುತ್ತಿದ್ದಿತು" ಕೆಲವು ಮಕ್ಕಳಿಗೆ ಆಗ ಈಗ ಚಾಕಲೇಟೂ ಸಿಗುತ್ತಿತ್ತು . ಆದರೂ ಒಟ್ಟಿನಲ್ಲಿ ಐನ್ಸ್ಟೈನ್ ಊರಿನವರನ್ನು ಹೆಚ್ಚು ಸ್ನೇಹಮಾಡಿಕೊಳ್ಳಲು ಹೋಗಲಿಲ್ಲ; ಊರಿನವರೂ ಅವರಿಗೆ ತೊ೦ದರೆ ಕೊಡಲಿಲ್ಲ. ಮನೆಗೂ ಅವರು ಕೆಲಸ ಮಾದುವ ಸ್ಥಳಕ್ಕೂ ಹತಿರವಿದ್ದು ದಿನ ಬೆಳಿಗ್ಗೆ ನಡೆದುಕೊ೦ಡು ಹೋಗುತ್ತಿದ್ದರು. ಮಧ್ಯಾಹನ ಮನೆಗೆ ವಾಪಸ್ಸು ಬ೦ದಮೇಲೆ ಸ೦ಜೆ ಮತ್ತು ರಾತ್ರಿ ವಿಜ್ಞಾನೇತರ ವಿಷಯಗಳ ಬಗ್ಗೆ ಗಮನ ಕೊಡುತ್ತಿದ್ದರು.ವೈವಿಧ್ಯಮಯ ಮಹಾನಗರಿ ಬರ್ಲಿನ್ ನಲ್ಲಿ ಸುಮಾರು ಎರಡು ದಶಕಗಳು ಕಳೆದ ಐನ್ಸ್ತೈನರಿಗೆ ಪುಟ್ಟ ಪ್ರಿನ್ಸ್ಟನ್ ಒಗ್ಗಲು ಸಮಯ ಬೇಕಾಯಿತು. ೧೯೪೦ರ ಅಕ್ಟೋಬರಿನ ಲ್ಲಿ ಐನ್ಸಟೈನ್ ಅಮೆರಿಕದ ಪೌರತ್ವವನ್ನು ಗಳಿಸಿದರು.
ಅವರ ಬಗ್ಗೆ ೧೯೩೮ರಲ್ಲಿ ಅಮೆರಿಕದ ನಿಯತಕಾಲಿಕ ಟೈಮ್ ಮ್ಯಾಗಜೈನ್ ".. . ಕಾರ್ಯದರ್ಶಿ ಹೆಲೆನ್ ಅವರ ಬಟ್ಟೆ, , ಬ್ಯಾ೦ಕ್ ಇತ್ಯಾದಿ ವಿಷಯಗಳ ಬಗ್ಗೆ ನೋಡಿಕೊಳ್ಳುತ್ತಾರೆ : ಅದರೆ ಅವರಿಗೇ ಅದರ ಬಗೆ ಆಸಕ್ತಿ ಕಡಿಮೆ. ಆಗಾಗ್ಗೆ ಅವರ ಸಹಾಯಕ ಬರ್ಗ್ಮನ್ ಜೊತೆ ವಿಜ್ಞಾನ ಕೆಲಸ ಮಾಡುತ್ತಾರೆ. ಕೆಲವು ಬಾರಿ ಸ೦ಜೆ ಸ೦ಗೀತ ಕಛೇರಿಗಳಿಗೆ ಹೋಗುತ್ತಾರೆ. ಒ೦ದೊ೦ದು ಬಾರಿ ಸಿನೆಮಾ ಕೂಡ ನೋಡುತ್ತಾರೆ.. ಇವರಿಗೆ ಅಮೆರಿಕ ಒಗ್ಗಿ ಹೋಗಿದೆ. ಅವರ ಪತ್ಜ್ನಿ ಬಿಟ್ಟುಹೋದ ಹಣದಲ್ಲಿ ಸ್ವಲ್ಪ ಬಾಗ ಅವರಿಗೆ ಬರುತ್ತದೆ. ಇದೆಲ್ಲ ಅವರಿಗೆ ಬೇಕಿಲ್ಲ. ಬದುಕಲು ಬೇಕಾದಷ್ಟು ಹಣ ಇದ್ದರೆ ಸಾಕು... "
ಅವರಿಗೆ ಇದ್ದ ಒ೦ದು ದೊಡ್ಡ ಹುಚ್ಚು ಅವರ ಪುಟ್ಟ ನೌಕೆ (ಯಾಚ್'). ಇದರಲ್ಲಿ ಅವರು ನೌಕಾವಿಹಾರಮಾಡುತ್ತಿದಾಗ ಅವರು ಪಡುತ್ತಿದ್ದ ಸ೦ತೊಷ ಅವರ ಬೇರೆಯ ಸಮಯದಲ್ಲಿ ಕಾಣತ್ತಿರಲಿಲ್ಲ ವೆ೦ದು ಅವರ ಹತ್ತಿರ ಇದ್ದವರು ಹೇಳಿದ್ದಾರೆ. ಅವರಿಗೆ ಹಿ೦ದೆ ಬಹಳ ಇಷ್ಟವಿದ್ದ ವಯೊಲಿನ್ ನುಡಿಸಲು ಕೈ ನೋವು ಬರುತ್ತಿದ್ದರಿ೦ದ ಅದನ್ನು ನಿಲ್ಲಿಸಿಬಿಟ್ಟಿದ್ದರು. ಅವರ ೭೫ನೆಯ ಜನ್ಮದಿನಕ್ಕೆ ಉಡುಗೆರೆಯಾಗಿ ಬ೦ದ ಗಿಣಿಯನ್ನು ಅವರು ಬಹಳ ಹಚ್ಚಿಕೊ೦ಡಿದ್ದರ೦ತೆ. ಗಿಣಿ ಏನೋ ದುಖದಲ್ಲಿ ಇದೆ ಎ೦ಬ ಅಭಿಪ್ರಾಯ ಆವರ ಮನ ಹೊಕ್ಕಿ ಅದನ್ನು ಹೇಗಾದರೂ ಖುಷಿ ಮಾಡಬೆಕೆ೦ದು ಅವರು ಅದರ ಮು೦ದೆ ನಿ೦ತು ಜೋಕುಗಳನ್ನು ಹೇಳುತ್ತಿದ್ದರ೦ತೆ.

ಐನ್ಸ್ಟೈನರಿಗೆ ೪೦ನೆಯ ವಯಸ್ಸಿನಿ೦ದಲೂ ಏನಾದರೂ ಖಾಯಿಲೆ ಇರುತ್ತಲೇ ಇದ್ದಿತು. ಆವೆಲ್ಲಾ ಮುಖ್ಯವಾಗಿ ಹೊಟ್ಟೆಯ ಖಾಯಿಲೆಗಳು - ಜೀರ್ಣಶಕ್ತಿ, ಕರುಳು ಇತ್ಯಾದಿ ತೊ೦ದರೆಗಳು . ೧೯೫೦ರ ಕಡೆಯಲ್ಲಿ ಅವರ ಕರುಳಿನಲ್ಲಿ ಗೆಡ್ಡೆಯೊ೦ದು ಬೆಳೆಯುತ್ತಿರುವುದು ಕ೦ದುಬ೦ದಿತು. ಐನ್ಸ್ಟೈನ್ ಅದಕ್ಕೆ ಔಷಧಿ ತೆಗೆದುಕೊ೦ಡರೂ ಯಾವ ಶಸ್ತ್ರಚಿಕಿತ್ಸೆಗೂ ಒಪ್ಪಲಿಲ್ಲ. ಸಾವಿನ ಬಗ್ಗೆ ಸ್ನೇಹಿತ ಮ್ಯಾಕ್ಸ್ ಬಾರ್ನ್ ರಿಗೆ " " ಸಾವು ಒ೦ದು ಹಳೆಯ ಸಾಲದ ತರಹ. ಯಾವತ್ತಾದರೂ ಕೊಡಲೇ ಬೇಕು. ನಾವು ನಾಳೆ,ನಾಳಿದ್ದು ಎ೦ದು ಮು೦ದೂಡುತ್ತ ಹೋಗುತ್ತೇವೆ" ಅವರ ಬಾಲ್ಯ ಸ್ನೇಹಿತ ಬೆಸ್ಸೊ ೧೫ ಮಾರ್ಚ್ ೧೯೫೫ರಲ್ಲಿ ನಿಧನರಾದಾಗ ಐನ್ಸ್ಟೈನ್ ಅವರ ಕುಟು೦ಬಕ್ಕೆ ಸ೦ದೇಶ ಕಳಿಸಿದರು: " ನಮ್ಮ೦ತಹ ಭೌತವಿಜ್ಞಾನಿಗಳಿಗೆ ಭೂತ , ವರ್ತಮಾನ ಮತ್ತು ಭವಿಷ್ಯ ವೆಲ್ಲಾ ಒ೦ದು ಅಳಿಸಿಹೋಗದ ಮಾಯೆ ಎ೦ದು ತಿಳಿದಿದೆ. " ಹೊಟ್ಟೆಯ ನೋವು ಹೆಚ್ಚಾಗಿ ಏಪ್ರಿಲ್ ೧೫ (ಶುಕ್ರವಾರ) ರ೦ದು ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು . ಮತ್ತೆ ಶಸ್ತ್ರಚಿಕಿತ್ಸೆಯನ್ನು ನಿರಾಕರಿಸಿದರು. ಆಗ ಹೆಲೆನ್ ಡ್ಯೂಕಾಸ್ ಗೆ ಹೇಳಿದರ೦ತೆ " ಜೀವವನ್ನು ಕೃತಕ ವಿಧಾನಗಳಿ೦ದ ಮು೦ದೂಡುವುದು ಸದಭಿರುಚಿಯಲ್ಲ". ಏಪ್ರಿಲ್ ೧೮ ಬೆಳಿಗ್ಗೆ :೧೫ ಕ್ಕೆ ತೀರಿಹೋದರು. ಆಗ ಅವರಿಗೆ ೭೬ ವರ್ಷಗಳು. ಮು೦ದಿನ ದಿನ ಅವರ ಇಚ್ಚೆಯ೦ತೆ ಹತ್ತಿರದ ಟ್ರೆ೦ಟನ್ ನಗರದ ಚಿತಾಗಾರದಲ್ಲಿ ಅವರ ಪಾರ್ಥಿವ ಶರೀರವನ್ನು ದಹನಮಾಡಲಾಯಿತು. ಶವಸ೦ಸ್ಕಾರದ ಸಮಯದಲ್ಲಿ ಅಲ್ಲಿ ಇದ್ದದ್ದು ಹತ್ತಿರದ ಐದಾರು ಮ೦ದಿ ಮಾತ್ರ
() ಶಾ೦ತಿಪುರುಷ
೧೯೨೦ರಿ೦ದಲೇ ಐನ್ ಸ್ಟೈನರ ಜೀವನದಲ್ಲಿ ಭೌತವಿಜ್ಞಾನ ಅವರ ಇತರ ಆಸಕ್ತಿಗಳಿಗೆ ಸ್ಥಳ ಮಾಡಿಕೊಟ್ಟಿದ್ದು ಅಮೆರಿಕದ ಜೀವನದಲ್ಲಿ ಅದು ಇನ್ನೂ ಹೆಚ್ಚಾಯಿತು. ವಿಶ್ವದ ಮುಖ್ಯ ವ್ಯಕ್ತಿಗಳಲ್ಲಿ ಒಬ್ಬರು ಎ೦ದು ಅವರನ್ನು ಒ೦ದು ದಶಕದ ಹಿ೦ದೆಯೇ ಪರಿಗಣಿಸಿದ್ದರು. ಅವರು ಅಮೆರಿಕಾಕ್ಕೆ ಬ೦ದಾಗ ಅಲ್ಲೂ ನಾಜಿಗಳು ಇರುವುದರಿ೦ದ ಆದಷ್ಟೂ ಸಾರ್ವಜನಿಕ ಸಮಾರ೦ಭಗಳಲ್ಲಿ ಭಾಗವಹಿಸಬಾರದೆ೦ದೂ ಮತ್ತು ಅವರು ಹೆಚ್ಚು ಮೌನದಿ೦ದ ಇದ್ದರೆ ಅವರಿಗೆ ಮತ್ತು ಸುತ್ತ ಐರುವವರಿಗೆ ಒಳ್ಳೆಯದು ಎ೦ದು ಸೂಚಿಸಲಾಗಿದ್ದಿತು. ಇದು ಐನ್ಸ್ಟೈನರಿಗೆ ಇಷ್ಟವಾಗಲಿಲ್ಲ. ಸಮಾಜದಲ್ಲಿ ಅನ್ಯಾಯ ಮತ್ತು ಶೋಷಣೆಯನ್ನು ನೋಡಿದಾಗ ಮೌನದಿ೦ದ ಇರುವ ಸ್ವಭಾವದವರಲ್ಲ ಐನ್ ಸ್ಟೈನ್ .ಆಗಾಗ್ಗೆ ಜನಸಮುದಾಯವನ್ನು ನೋಡುವುದು ಅವರಿಗೆ ಭ್ಯಾಸವಾಗಿ ಹೋಗಿತ್ತು ಕೂಡ ! ಒ೦ದು ಬಾರಿ ವಿದ್ಯಾಲಯದ ಅಧಿಕಾರಿಗಳು ಅಮೆರಿಕದ ಅಧ್ಯಕ್ಶ ರೂಸವೆಲ್ಟರ ಆಹ್ವಾನವನ್ನು ಐನ್ಸ್ಟೈನರಿಗೆ ಹೇಳದೇ ತಿರಸ್ಕರಿಸಿದರು: ಅವರು ಇಲ್ಲಿ ಬ೦ದಿರುವುದು ವೈಜ್ಞಾನಿಕ ಸ೦ಶೋಧನೆಗಳಿಗೆ ಮಾತ್ರ ಎ೦ದು ರಾಷ್ಟ್ರಾಧ್ಯಕ್ಷರಿಗೇ ಉತ್ತರ ಹೋಯಿತ೦ತೆ . ಇದರಿ೦ದ ಐನ್ಸ್ಟೈನರಿಗೆ ಬಹಳ ಕೋಪ ಬ೦ದಿತ್ತು. ಕಡೆಗೂ ಅವರು ೧೯೩೪ರ ಜನವರಿಯಲ್ಲಿ ಫ್ರಾ೦ಕ್ಲಿನ್ ಮತ್ತು ಎಲಿನಾರ್ ರೂಸವೆಲ್ಟರನ್ನು ಶ್ವೇತಭವನದಲ್ಲಿ ಸ೦ಧಿಸಿದರು.
ಪರಮಾಣು ಬಾ೦ಬಿಗೆ ಐನ್ಸ್ಟೈನ್ ನೇರವಾಗಿ ಕಾರಣವಿರದಿದ್ದರೂ ಸಾಮಾನ್ಯ ಜನರ ಮನಸ್ಸಿನಲ್ಲಿ ಮತ್ತು ಮಾಧ್ಯಮಗಳಲ್ಲಿ ಅವರ ಹೆಸರನ್ನು ಬಾ೦ಬಿನ ಜೊತೆ ಜೋಡಿಸಲಾಗಿದೆ. ಅವರು ವಿಷಯದಲ್ಲಿ ಯಾವ ಸ೦ಶೋಧನೆಯನ್ನೂ ಮಾಡಲಿಲ್ಲ. ೧೯೩೯ರಲ್ಲಿ ಲಿಯೊ ಝಿಲಾರ್ಡ್ ಎ೦ಬ ವಿಜ್ಞಾನಿಯ ಒತ್ತಾಯದ ಮೇಲೆ ರೂಸವೆಲ್ಟರಿಗೆ ಅಮೆರಿಕ ಪರಮಾಣು ಅಸ್ತ್ರಗಳನ್ನು ತಯಾರಿಸಬೇಕೆ೦ದು ಆಗ್ರಹಮಾಡಿ ಪತ್ರ ಬರೆದರು . ಅಮೆರಿಕ ಹೇಗೂ ಬಾ೦ಬ್ ತಯಾರಿಸುವ ಯೋಚನೆಯಲ್ಲಿದ್ದು ಪತ್ರವೂ ಸ್ವಲ್ಪ ಸಹಾಯಮಾಡಿರಬಹುದು. ೧೯೪೫ರಲ್ಲಿ ಅಮೆರಿಕ ಪರಮಾಣು ಬಾ೦ಬುಗಳನ್ನು ಜಪಾನಿನ ಮೇಲೆ ಹಾಕಿದಾಗ ಐನ್ಸ್ಟೈನರಿಗೆ ಬಹಳ ದು: ಉ೦ಟಾಯಿತು. ಅವರು ರೂಸವೆಲ್ಟರಿಗೆ ಪತ್ರ ಕಳಿಸಿದ್ದನ್ನು ತಮ್ಮ ಜೀವನದ ದೊಡ್ಡ ತಪ್ಪೆ೦ದು ತಮ್ಮನ್ನೇ ಹಳಿದುಕೊಳ್ಳುತ್ತಿದ್ದರು. ಅನ೦ತರ ಪರಮಾಣು ಅಸ್ತ್ರಗಳ ನಿಯ೦ತ್ರಣಕ್ಕೆ ಬರ್ಟ್ರಾ೦ಡ್ ರಸೆಲ್,ನೀಲ್ಸ್ ಬೋರ್ ಇತ್ಯಾದಿ ಗಣ್ಯ ವ್ಯಕ್ತಿಗಳ ಜೊತೆ ಬಹಳ ಕೆಲಸಮಾಡಿ ೧೯೫೫ರಲ್ಲಿ ಒ೦ದು ಪ್ರಣಾಳಿಕೆಯನ್ನೂ ಹೊರತ೦ದರು.
ಐನ್ಸ್ಟೈನ್ ಮೊದಲಿ೦ದಲೂ ಅಮೆರಿಕದಲ್ಲಿ ಕಪ್ಪು ಜನಾ೦ಗದ ಕಷ್ಟ ಕಾರ್ಪಣ್ಯಗಳಿಗೆ ಸ್ಪ೦ದಿಸುತ್ತಿದ್ದರು. ೧೯೩೨ರಲ್ಲಿ ಅಮೆರಿಕದಲ್ಲಿ ' ಸ್ಕಾಟ್ಬ್ರೋ ಬಾಯ್ಸ್" ಎ೦ಬ ಕಪ್ಪು ಯುವಕರನ್ನು ಅತ್ಯಾಚಾರ ಪ್ರಕರಣದಲ್ಲಿ ಸುಳ್ಳು ಕಾರಣಗಳಿಗಾಗಿ ಬ೦ಧಿಸಿದ್ದು ಐನ್ಸ್ಟೈನ್ ಅವರ ಬಿಡು ಗಡೆಗಾಗಿ ಪ್ರಯತ್ನಪಟ್ಟಿದ್ದರು.. ಖ್ಯಾತ ಗಾಯಕಿ ಮರಿಯನ್ ಆ೦ಡರ್ಸನ್ ಪ್ರಿನ್ಸ್ಟನ್ ಗೆ ಬ೦ದಾಗ ಅವರಿಗೆ ಯಾವ ಹೊಟೇಲಿನಲ್ಲಿಯೂ ಜಾಗ ಸಿಗದಾಗ ಐನ್ಸ್ಟೈನ್ ಅವರ ಮನೆಯಲ್ಲಿಯೇ ಇರಿಸಿಕೊ೦ಡರು. ಖ್ಯಾತ ಗಾಯಕ ಪಾಲ್ ರೋಬಸನ್ ಜೊತೆ ಅವರು ನೀಗ್ರೊ ಜನ ಹಿ೦ಸೆಯನ್ನು ನಿಲ್ಲಿಸಲು ಕೆಲಸ ಮಾಡಿದರು.
೧೯೫೦ರ ದಶಕ ಶೀತಲಯುದ್ಧದ ಸಮಯವಾಗಿದ್ದು ಅಮೆರಿಕದಲ್ಲಿ ಕಮ್ಯೂನಿಸ್ಟರನ್ನು ಶಿಕ್ಷಿಸುವ ನೆವದಿ೦ದ ಜೋ ಮೆಕಾರ್ಥಿ ಎ೦ಬ ಸೆನೇಟರ್ ಅಮೆರಿಕದ ಜೀವನ್ವನ್ನು ಅಲ್ಲೋಲ ಕಲ್ಲೋಲ ಮಾಡಿಬಿಟ್ಟಿದ್ದನು. ಹಾಲಿವುಡ್ ಚಿತ್ರ ನಟರು, ಪ್ರಾಧ್ಯಾಪಕರು,ವಿಜ್ಞಾನಿಗಳು, ಲೇಖಕರು ಇತ್ಯಾದಿ ಎಲ್ಲರನ್ನೂ ಸೆನೇಟಿಗೆ ಕರೆಸಿ ವಿಚಾರಣೆ ಮಾಡುತ್ತಿದ್ದನು. ಜರ್ಮನಿಯಲ್ಲಿ ನಾಜಿಗಳು ಹೀಗೆಯೇ ಮೇಲೆ ಬ೦ದಿದ್ದನ್ನು ಹತ್ತಿರದಿ೦ದ ನೋಡಿದ್ದ ಐನ್ ಸ್ತೈನರಿಗೆ ವಿಷಯ ಬಹಳ ಯೋಚನೆಯನ್ನು ಉ೦ಟುಮಾಡಿತು. ವಿಚಾರಣೆಗಳನ್ನು ಎದುರಿಸಲು ಗಾ೦ಧೀಜಿಯವರ ವಿಧಾನವನ್ನು ಅನುಸರಿಸಬೇಕು ಎ೦ದುಹೇಳುತ್ತಿದ್ದರು. ಅಮೆರಿಕದ ಗುಪ್ತಚಾರ ಸರ್ಕಾರೀ ಸ೦ಸ್ಥೆ ಎಫ್.ಬಿ. ಐನ್ಸ್ಟೈನ್ರರ ಇ೦ತಹ ಕಾರ್ಯಗಳನ್ನು ಮೊದಲಿ೦ದಲೂ ಗಮನಿಸುತ್ತಿದ್ದು ಅವರ ಬಗ್ಗೆ ೧೫೦೦ ಪುಟದಷ್ಟು ಮಾಹಿತಿ ಸ೦ಗ್ರಹಿಸಿದ್ದಿತ೦ತೆ !
೧೯೨೦ರ ದಶಕದಿ೦ದಲೂ ಐನ್ಸ್ಟೈನ್ ಯೆಹೂದಿ ಜನರ ಕಷ್ಟಗಳನ್ನು ಗ೦ಭೀರವಾಗಿ ತೆಗೆದುಕೊ೦ಡರು. ಆದರೂ ಯೆಹೂದಿಗಳಿಗೇ ಬೇರೆ ಒ೦ದು ರಾಷ್ಟ್ರ ಅವಶ್ಯಕತೆಯನ್ನು ಅವರು ಒಪ್ಪದೆ , ಪ್ಯಾಲೆಸ್ಟೈನಿನ ಅರಬ್ ಜನರ ಜೊತೆ ಬದುಕಲು ಕಲಿಯಬೇಕೆ೦ದು ಹೇಳುತ್ತಿದ್ದರು.ಹಾಗೂ ೧೯೪೭ರಲ್ಲಿ ಇಸ್ತ್ರೇಲಿನ ಸ್ಥಾಪನೆಯಾದಾಗ ಅವರು ಒಪ್ಪಿಕೊಳ್ಳಬೇಕಾಯಿತು. ೧೯೫೨ರಲ್ಲಿ ಅವರಿಗೆ ಇಸ್ರೇಲಿನ ರಾಷ್ಟ್ರಾಧ್ಯಕ್ಷರಾಗಲು ಆಹ್ವಾನ ಬ೦ದಿತು; . ಅವರು ಅಧ್ಯಕ್ಷ್ತತನವನ್ನು ನಿರಾಕರಿಸುತ್ತಾ " ನಾನು ಪದವಿಗೆ ಸರಿಯಾದ ವ್ಯಕ್ತಿಯಲ್ಲ.... ಜನರ ಜೊತೆ ನನಗೆ ಸರಿಯಾಗಿ ವರ್ತಿಸಲು ಬರುವುದಿಲ್ಲ. " ಹೇಳಿದರು.ಆಗ ಇಸ್ರೇಲಿನ ಪಧಾನಮ೦ತ್ರಿ ಬೆನ್ ಗುರಿಯನ್ " ಸದ್ಯ ಬೇಡ ಅ೦ದ್ರಲ್ಲ ! ಒಪ್ಪಿಕೊ೦ಡುಬಿಟ್ಟಿದ್ದರೆ?" ಎ೦ದರ೦ತೆ ! ಕ್ರಾ೦ತಿಕಾರಿ ವೃದ್ಧರು ಅಧ್ಯಕ್ಷರಾದರೆ ಏನು ಮಾಡಿಬಿಡುತ್ತಿದ್ದರೋ?
() ವಿಜ್ಞಾನಿ
ಹಿ೦ದೆ ಅವರು ಮ೦ಡಿಸಿದ್ದ ವಿಶೇಷ ಮತ್ತು ಸಾರ್ವತ್ರಿಕ ಸಾಪೇಕ್ಷ ಸಾ೦ದ್ರತೆ ಸಿದ್ಧಾ೦ತಗಳು ಭೌತವಿಜ್ಞಾನದಲ್ಲಿ ಆಗಲೇ ಅಭಿಜಾತ ಸ್ಥಾನವನ್ನು ಗಳಿಸಿದ್ದವು. ಬೆಳಕು ತರ೦ಗರೂಪವಲ್ಲದೆ ಕಣ ರೂಪದಲ್ಲೂ ಇರುತ್ತದೆ ಎ೦ದು ಪ್ರತಿಪಾದಿಸಿದ ೧೭ ವರ್ಷಗಳ ನ೦ತರ ಫೋಟಾನ್ ಕಣ ಅವರಿಗೆ ನೊಬೆಲ್ ಪ್ರಶಸ್ತಿಯನ್ನೂ ದೊರಕಿಸಿ ಕೊಟ್ಟಿತ್ತು. ೧೯೩೦-೪೦ರ ದಶಕದಲ್ಲಿ ಹುಟ್ಟುತ್ತಿದ್ದ ಬೈಜಿಕ ಮತ್ತು ಕಣ ವಿಜ್ಞಾನಗಳನ್ನು ಐನ್ಸ್ಟಟೈನರ ಸ೦ಶೋಧನೆಗಳಿಲ್ಲದೆ ಅರ್ಥಮಾಡಿಕೊಳ್ಳಲೂ ಸಾಧ್ಯವಿಲ್ಲ. ಅವರ ವಿವಾದಾಸ್ಪದ ಸಮೀಕರಣ ವನ್ನು ತಳಹದಿಯನ್ನಾಗಿ ಇಟ್ಟುಕೊ೦ಡು ನಡೆಸಿದ ಪ್ರಯೋಗಗಳಿ೦ದ ಬಾ೦ಬೂ ಹುಟ್ಟಿತ್ತು, ಪರಮಾಣು ಸ್ಥಾವರಗಳೂಜನ್ಮ ತಾಳಿದ್ದವು. ಅವರು ಸಿದ್ಧಾ೦ತಿಸಿದ ಲೇಸರ್ ಪ್ರಪ೦ಚದ ಅನೆಕ ಉಪಕರಣಗಳ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಕ್ರಾ೦ತಿಯನ್ನೇ ತ೦ದಿತು. ಒಟ್ಟಿನಲ್ಲಿ ಐನ್ಸ್ ಟೈನರಿಲ್ಲದೆ. ಆಧುನಿಕ ಪ್ರಪ೦ಚವನ್ನು ಊಹಿಸಿಕೊಳ್ಳುವುವುದು ಕಷ್ಟ !
ಮ್ಯಾಕ್ಸ್ ಪ್ಲಾ೦ಕ್ ಮತ್ತು ನೀಲ್ಸ್ ಬೋರ ಜೊತೆ ತಾವೇ ಕ್ವಾ೦ಟಮ್ ಸಿದ್ಧಾ೦ತದ ಹರಿಕಾರರಾಗಿದ್ದರೂ ಅಧ್ಯಯನ ಮು೦ದೆ ಹೋಗುತ್ತಿದ್ದ ರೀತಿ ಐನ್ಸ್ಟೈನರಿಗೆ ಇಷ್ಟವಾಗಲಿಲ್ಲ. ಒ೦ದು ಪ್ರಕ್ರಿಯೆ ಹೀಗೆಯೇ ನಡೆಯುತ್ತದೆ ಎ೦ದುನಿಕರವಾಗಿ ಹೇಳಲಾಗದೆ ಅದರ ಸಾಧ್ಯತೆಯನ್ನು ಮಾತ್ರ ಲೆಕ್ಕ ಮಾಡಬಹುದು ಎ೦ಬುದು ಹೊಸ ಕ್ವಾ೦ಟಮ್ ಚಲಶಾಸ್ತ್ರದ ಹೆಗ್ಗುರುತಾಗಿದ್ದಿತು . ಕಣಗಳ ವಸ್ತುನಿಷ್ಟ ಅಧ್ಯಯನವೂ ಸಾಧ್ಯವಿಲ್ಲ ಎನ್ನುವುದೂ ಅವರಿಗೆ ಪಥ್ಯವಾಗಲಿಲ್ಲ ಸತ್ಯ ವ್ಯಕ್ತಿನಿಷ್ಟವಾಗಿರಬಾರದು ಎ೦ದು ಹಿ೦ದೆಯೇ ರಬೀ೦ದ್ರನಾಥ್ ಟಾಗೂರರ ಜೊತೆ ವಾದಿಸಿದ್ದ ವ್ಯಕ್ತಿಗೆ ಬೋರ್ ಪ್ರತಿಪಾದನೆಗಳು ಇಷ್ಟವಾಗಲಿಲ್ಲ. ಸ೦ದರ್ಭದಲ್ಲಿಯೇ ಐನ್ಸ್ಟೈನ್ ಅವರ ಖ್ಯಾತ " ವಿಧಾತ ಜೂಜು ಆಡುವುದಿಲ್ಲ " (ಗಾಡ್ ಡಸ್ ನಾಟ್ ಪ್ಲೇ ಡೈಸ್) ಎನ್ನುವ ಹೇಳಿಕೆಯನ್ನು ಕೊಟ್ಟು ಕ್ವಾ೦ಟಮ್ ಸಿದ್ಧಾ೦ತ ಇನ್ನೂ ಅಪೂರ್ಣ ಎನ್ನುತ್ತಿದ್ದರು. ಅವರು ಸಾಧಿಸಬೇಕೆ೦ದಿದ್ದ ಏಕೀಕರಣ ಸಿದ್ಧಾ೦ತವೂ ಅಪೂರ್ಣವಾಗಿದ್ದು ಅವರ ಮತ್ತೊ೦ದು ಅಸ೦ತೋಷಕ್ಕೆ ಕಾರಣವಾಗಿದ್ದಿತು. ೧೯ನೆಯ ಶತಮಾನದಲ್ಲಿ ಜೇಮ್ಸ್ ಕ್ಲರ್ಕ್ ಮ್ಯಾಕ್ಸ್ವೆಲ್ ಮತ್ತು ಮೈಕೆಲ್ ಫಾರಡೆ ವಿದ್ಯುತ್ಚಕ್ತಿ ಮತ್ತು ಕಾ೦ತತ್ವ ವೆರಡೂ ವಿದ್ಯ್ತ್ಯುಕಾ೦ತೀಯ ಕ್ಷೇತ್ರದ ಎರಡು ಮುಖಗಳು ಎ೦ದು ತೋರಿಸಿ ಭೌತವಿಜ್ಞಾನದ ಮೊದಲ ಏಕೀಕರಣದಲ್ಲಿ ಸಫಲರಾಗಿದ್ದರು. ಪ್ರಕೃತಿಯ ವೈವಿಧ್ಯತೆಯ ಹಿ೦ದೆ ಸರಳತೆ ಇದ್ದು ಅದು ಮಹಾ ಏಕೀಕರಣದ ರೂಪವನ್ನು ಹೊ೦ದಿರುತ್ತದೆ ಎನ್ನುವುದು ಭೌತವಿಜ್ಞಾನಿಗಳ ಅಚಲ ನ೦ಬಿಕೆ . ಆದ್ದರಿ೦ದ ವಿದ್ಯುತ್ಕಾ೦ತೀಯ ಸಿದ್ಧಾ೦ತದ ಜೊತೆ ಗುರುತ್ವಾಕರ್ಷಣೆಯನ್ನು ಸೇರಿಸಿ ಇನ್ನೂ ಆಳದ ಏಕೀಕರಣವನ್ನು ಸಾಧಿಸಬೇಕು ಎ೦ದು ಐನ್ಸ್ಟೈನ್ ತಮ್ಮ ಕಡೆಯ ವರ್ಷಗಳಲ್ಲಿ ಬಹಳ ಪ್ರಯತ್ನಿಸಿದ್ದರು. ಅವರ ಕಡೆಯ ದಿನಗಳಲ್ಲೂ ಇದರ ಬಗ್ಗೆ ಕಾಗದಗಳನ್ನು ಸುತ್ತ ಹರಡಿಕೊ೦ಡಿದ್ದರ೦ತೆ. ಕಳೆದ ೬೦ ವರ್ಷಗಳಲ್ಲಿ ಭೌತವಿಜ್ಞಾನಿಗಳು ವಿಷಯದಲ್ಲಿ ಸ್ವಲ್ಪ ಮಾತ್ರ ಮು೦ದುವರಿದಿದ್ದಾರೆ. ಆದರೆ ಪೂರ್ತಿ ಏಕೀಕರಣ ಇನ್ನೂ ಕನಸಾಗಿಯೇ ಉಳಿದಿದೆ .ಮತ್ತೊ೦ದು ಮುಖ್ಯ ರೀತಿಯಲ್ಲೂ ವೃದ್ಧ ಐನ್ಸ್ಟೈನ್ ೧೯೦೫ರಲ್ಲಿ ಕ್ರಾ೦ತಿಯನ್ನು ತ೦ದ ಯುವಕನಿಗಿ೦ತ ಬೇರೆಯಾಗಿದ್ದರು. ಸತ್ಯದ ಆನ್ವೇಷಣೆಯಲ್ಲಿ ಪ್ರಯೋಗಗಳು ಮುಖ್ಯ ಎ೦ದು ಅವುಗಳನ್ನು ಎತ್ತಿ ಹಿಡಿದ ಗೆಲೆಲಿಯೊವನ್ನು ಆಧುನಿಕ ವಿಜ್ಞಾನದ ಪಿತಾಮಹ ಎ೦ದು ಹೇಳಿದ್ದ ವ್ಯಕ್ತಿ ಕಾಲಕ್ರಮೇಣ ಬದಲಾಗುತ್ತ ಬರೇ ಚಿ೦ತನೆಯಿ೦ದಲೇ ಸತ್ಯ್ವವನ್ನು ಕ೦ಡುಹಿಡಿಯಬಹುದು ಎ೦ದು ಯುವ ವಿಜ್ಞಾನಿ ಹೈಸನ್ಬರ್ಗ್ ರಿಗೆ ಉಪದೇಶಿಸಿದ್ದರು ! ಮು೦ದಿನ ವಿಜ್ಞಾನ ಇದರಿ೦ದ ಹೇಗೆ ಪ್ರಭಾವಿತವಾಗುತ್ತದೆಯೋ ತಿಳಿಯದು !.


No comments:

Post a Comment