Wednesday, April 23, 2014

ಆಕಾಶದಲ್ಲೊ೦ದು ಮನೆ - ಪಾಲಹಳ್ಳಿ ವಿಶ್ವನಾಥ್ Palahalli Vishwanath NEW BOOK

This is my 4th (3rd independent ) book - published April 2014-






ಮೊದಲ ಮಾತುಗಳು

ಈ ಪ್ರಪ೦ಚದ ಕೇ೦ದ್ರದಲ್ಲಿ ತಾನಿದ್ದೇನೆ ಎ೦ಬ ಜ೦ಭ ಮಾನವನಿಗೆ ಹಿ೦ದಿನಿ೦ದಲೂ ಇದ್ದಿತು. ಆದರೆ ೧೬ನೆಯ ಶತಮಾನದಲ್ಲಿ ಕೋಪರ್ನಿಕಸ್ ತನ್ನ ಸೂರ್ಯಕೇ೦ದ್ರಿಯವಾದವನ್ನು ಪ್ರತಿಪಾದಿಸಿದ ನ೦ತರ ಭೂಮಿಗೆ ಹಿ೦ದಿನವರು ಹಾಕಿಕೊಟ್ಟಿದ್ದ ಸಿ೦ಹಾಸನ ಅಲ್ಲಾಡತೊಡಗಿತು. ೨೦ನೆಯ ಶತಮಾನದ ಮೊದಲ ದಶಕಗಳಲ್ಲಿ ಶ್ಯಾಪ್ಲೀ ಮತ್ತು ಹಬಲ್ ಅವರ ಸ೦ಶೋಧನೆಗಳಿ೦ದ ಭೂಮಿ ಒ೦ದು ಸಾಧಾರಣ ಗೆಲಕ್ಸಿಯ ಅ೦ಚಿನ ಸಾಧಾರಣ ನಕ್ಷತ್ರದ ಸಾಧಾರಣ ಗ್ರಹ ವೆ೦ಬ ಅರಿವುಹುಟ್ಟಿತು. . ಆದರೂ ಈ ಸಾಧಾರಣ ಗ್ರಹದಲ್ಲಿಯೇ ಬಾಳಿ ಬದುಕಿರುವ ಮನುಷ್ಯನಿಗೆ ಈ ಪ್ರಪ೦ಚದಲ್ಲಿ ನಾನು ಒಬ್ಬನೇ ಇದ್ದೇನೆಯೋ ಎನ್ನುವ ಅನುಮಾನ ಇದ್ದೇ ಇದೆ. ಹಿ೦ದಿನ ಶತಮಾನದ ಅನೇಕ ಆವಿಷ್ಕಾರಗಳ ನ೦ತರ ಎಲ್ಲೋ ಆಚೆ ನಮ್ಮ ಭೂಮಿಯ ತರಹವೇ ಗ್ರಹಗಳು ಇರಬಹುದು ಮತ್ತು ನಮ್ಮ೦ತೆಯೋ ಅಥವಾ ಇನ್ನು ಯಾವ ರೂಪದಲ್ಲೋ ಜನರು ಇರಬಹುದು ಎನ್ನುವ ಸಾಧ್ಯತೆಗಳು ಹೆಚ್ಚಾಗುತ್ತಿದೆ. ಇದಕ್ಕೆ ಸ೦ಬ೦ಧ ಪಟ್ಟ೦ತೆ ಅನ್ಯಗ್ರಹ ಜೀವಿಗಳು, ಹಾರಾಡುವ ತಟ್ಟೆಗಳು ಇತ್ಯಾದಿ ವರದಿಗಳು ಪತ್ರಿಕೆಗಳಲ್ಲಿ ಬರುತಲೇ ಇರುತ್ತವೆ; ಅವುಗಳ ಬಗ್ಗೆ ಅನೇಕ ವೈಜ್ಞಾನಿಕ ಕಥಾ ಕಾದ೦ಬರಿಗಳು ರಚಿಸಲ್ಪಟ್ಟಿರುವುದಲ್ಲದೆ ಚಲನಚಿತ್ರಗಳೂ ಮನುಷ್ಯನ ಕುತೂಹಲವನ್ನು ಹೆಚ್ಚಿಸಿವೆ. ಆದ್ದರಿ೦ದ ಈ ವಿಷಯಗಳು ವಿಜ್ಞಾನಿಗಳನ್ನಲ್ಲದೆ ಸಾಮಾನ್ಯ ಜನತೆಯನ್ನೂ ಆಸಕ್ತಿಗೊಳಿಸುತ್ತದೆ. ಈ ಪುಸ್ತಕದಲ್ಲಿ ಭೂಮಿಯ ಅತಿಶಯಗಳು, ಅದರ ಹತ್ತಿರದ ನಕ್ಷತ್ರದ ವೈಶಿಷ್ಟ್ಯ, , ಸೌರಮ೦ಡಲದಲ್ಲೇ ವಾಸಯೋಗ್ಯವಾಗಬಹುದಾದ ಇತರ ಗ್ರಹ ಉಪಗ್ರಹಗಳು , ಅನ್ಯ ಗ್ರಹಗಳ ಜೊತೆ ಸ೦ಪರ್ಕದ ಸಾಧ್ಯತೆ, ಭವಿಷ್ಯದ ಭೂಮಿಗಳಿಗೆ ಹುಡುಕಾಟ, ಬಾಹ್ಯಾಕಾಶ ಪ್ರಯಾಣ ಇತ್ಯಾದಿ ವಿಷಯಗಳನ್ನು ಸರಳ ಭಾಷೆಯಲ್ಲಿ ಚರ್ಚಿಸಲಾಗಿದೆ . .
ನಾನು ಬೆ೦ಗಳೂರಿನಲ್ಲಿ ೧೯೬೦ರ ದಶಕದಲ್ಲಿ ಎ೦.ಎಸ್. ಸಿ ಓದುತ್ತಿದ್ದಾಗ ಡಾ ಸುಬ್ಬರಾಮಯ್ಯನವರು ನಮಗೆ ೨ ವರ್ಷ ಥಿಯರೆಟಿಕಲ್ ಫಿಸಿಕ್ಸ್ ಹೇಳಿಕೊಟ್ಟರು. ವಾರದಲ್ಲಿ ೩ ಬಾರಿ ೧ ೧/- ೨ ಗ೦ಟೆಗಳು ಪಾಠ ಮಾಡುತ್ತಿದ್ದರು: ಅದಕ್ಕಾಗಿ ಸೆ೦ಟ್ರಲ್ ಕಾಲೇಜಿನ ಫಿಸಿಕ್ಸ್ ಕಟ್ಟದದ ಮೆಲಿನ ಕೋಣೆಗೆ ಸುರುಳಿಸುತ್ತಿನ ಸ್ಟೀಲ್ ಮೆಟ್ಟಲುಗಳ ಮೂಲಕ ಹೋಗಬೇಕಾಗಿದ್ದಿತು. ಪ್ರತಿಪಾಠದಲ್ಲೂ‌ ಕಡೆಯಲ್ಲಿ ಅವರು ಇತರ ವಿಷಯಗಳ ಬಗ್ಗೆ ಮಾತನಾಡುತ್ತಿದ್ದರು - ಇತಿಹಾಸ, ಸಾಹಿತ್ಯ, ಅಧ್ಯಾತ್ಮ ಇತ್ಯಾದಿ. ಇ೦ತಹ ವರ್ಣರ೦ಜಿತ ಪಾಠಗಳಿಗೆ ಮತ್ತೊ೦ದು ಉದಾಹರಣೆ ಸಿಕ್ಕಿದ್ದು ಅಮೆರಿಕದಲ್ಲಿ. ನಾನು ಮಿಶಿಗನ್ ವಿದ್ಯಾಲಯದಲ್ಲಿ ಓದುತ್ತಿದ್ದಾಗ ಖ್ಯಾತ ಕ್ವಾ೦ಟಮ್ ವಿಜ್ಞಾನಿ ಸೋಮರ್ ಫೆಲ್ಡ್ ಅವರ ಶಿಷ್ಯ ಆಟ್ಟೊ ಲಪೋರ್ಟ್ ರ ಪಾಠಗಳಲ್ಲಿ ಇದ್ದಕ್ಕಿದ ಹಾಗೆ ಇಮ್ಯಾನ್ಯುಯಲ್ ಕಾ೦ತ್ ಮತ್ತು ಇತರ ತತ್ವಶಾಸ್ತ್ರಜ್ಞರು ಬ೦ದುಹೋಗುತ್ತಿದ್ದರು. ಈ ಪುಸ್ತಕದ ಪ್ರತಿ ಅಧ್ಯಾಯದಲ್ಲೂ ಮೊದಲು ವೈಜ್ಞಾನಿಕ ವಿಷಯಗಳ ಲಘು ಚರ್ಚೆಯಿದ್ದು ಕೊನೆಯಲ್ಲಿ ಬೇಕಾದ್ದು ಮತ್ತು ಬೇಡದ್ದು ವಿಷಯಗಳ ಬಗ್ಗೆ ಹರಟೆಗಳಿವೆ. ಈ ಮಾತುಕತೆಯ ಮಾದರಿ ಹೊಸದೇನಲ್ಲ; ಇದು ಪುರಾತನ ಭಾರತ ಮತ್ತು ಗ್ರೀಸಿನಿ೦ದ ಇಟಲಿಯ ಮೂಲಕ ಹರಿದು ಬ೦ದಿರುವ ನಿರೂಪಣಾ ಶೈಲಿ.
---------------------------------------------------------------
ಹಿ೦ದಿನ ಪುಟ

ಅನ್ಯ ಗ್ರಹ ಜೀವಿ ( ಏಲಿಯನ್ಸ್)ಗಳ ಬಗ್ಗೆ ಕುತೂಹಲವಿರುವ ನಕ್ಷತ್ರಿಕ ಮತ್ತು ನಿಹಾರಿಕಾ ಎ೦ಬ ಇಬ್ಬರು ವಿದ್ಯಾರ್ಥಿಗಳು ತಮ್ಮ ಟೀಚರ್ ಬಳಿ ಬ೦ದು ಇದರ ಬಗ್ಗೆ ವಿಚಾರಿಸುತ್ತಾರೆ. ಅವುಗಳ ಬಗ್ಗೆ ಬೇಗ ತಿಳಿದುಕೊ೦ಡು ಹೋಗುವ ಆತುರ ಈ ವಿದ್ಯಾರ್ಥಿಗಳಿಗೆ. ಆದರೆ ಅಧ್ಯಾಪಕರು "‌ಅದಕ್ಕೆ ಉತ್ತರ ಕೊಡುವ ಮೊದಲು ಬಹಳ ವಿಷಯಗಳನ್ನು ತಿಳಿದುಕೊಳ್ಳಬೇಕಾಗುತ್ತದೆ " ಎ೦ದು ಅವರನ್ನು ೧೨ ದಿವಸಗಳು ಉಳಿಸಿಕೊಳ್ಳುತಾರೆ. ಈ ಮೂವರ ಮಾತುಕತೆಗಳಲ್ಲಿ " ಜೀವಿಗಳಿರಬೇಕಾದರೆ ಗ್ರಹ ಯಾವ ತರಹ ಇರಬೇಕು ? ನಮ್ಮ ಭೂಮಿಯ ಅತಿಶಯವೇನು? ಭೂಮಿ ನೀರನ್ನು ಮತ್ತು ವಾತಾವರಣವನ್ನು ಹೇಗೆ ಗಳಿಸಿತು? ಯಾವ ಗುಣಗಳುಳ್ಳ ನಕ್ಷತ್ರದ ಬಳಿ ಇ೦ಥ ಗ್ರಹಗಳಿಗೆ ಸ್ಥಾನವಿದೆ? ನಮ್ಮ ಸೌರಮ೦ಡಲದಲ್ಲೇ ಮ೦ಗಳ ಮತ್ತು ಇತರ ಗ್ರಹ ಉಪಗ್ರಹಗಳು ವಾಸಯೋಗ್ಯವೇ ? ನಮ್ಮ ಗೆಲಕ್ಸಿಯಲ್ಲೇ ಭೂಮಿಯ೦ತಹ ಇತರ ಗ್ರಹಗಳಿವೆಯೇ ? ಹೊರಗಿನವರನ್ನು ನಾವು ಸ೦ಪರ್ಕಿಸಲು ಪ್ರಯತ್ನಿಸಿದ್ದೇವೆಯೇ? ಭವಿಷ್ಯದ ಭೂಮಿಗಳಿಗೆ ಹುಡುಕಾಟ ಯಾವಾಗ ಶುರುವಾಯಿತು? ಬಾಹ್ಯಾಕಾಶ ಯಾನ ಹೇಗೆ ಮತ್ತು ಯಾವಾಗ ಶುರುವಾಯಿತು? ಈ ಅಗಾಧ ವಿಶ್ವದಲ್ಲಿ ನಮ್ಮ ತರಹ ನಾಗರಿಕತೆ ಹುಟ್ಟಿ ನಾಶವಾಗಿರಬಹುದೇ " ಇತ್ಯಾದಿ ವಿಷಯಗಳ ಚರ್ಚೆಗಳು ನಡೆಯುತ್ತವೆ. ಈ ವಿಷಯಗಳಲ್ಲದೆ ಈ ಮೂವರೂ ಪ್ರತಿ ದಿನ ಕಡೆಯಲ್ಲಿ ಸ್ವಲ್ಪ ಹರಟೆ ಹೊಡೆಯುತ್ತಾರೆ. ಈ ಹರಟೆಯಲ್ಲಿ ಇತಿಹಾಸ, ವೈಜ್ಞಾನಿಕ ಕಥಾ ಸಾಹಿತ್ಯ, ಸಿನೆಮಾಗಳು,ಎಲ್ಲ ಬ೦ದು ಹೋಗುತ್ತವೆ.

ಈ ಕೃತಿಯನ್ನು ರಚಿಸಿರುವ ಪಾಲಹಳ್ಳಿ ವಿಶ್ವನಾಥ್ ಅವರು ಮೈಸೂರು ಮತ್ತು ಮಿಶಿಗನ್ ವಿಶ್ವವಿದ್ಯಾಲ್ಯಗಳಲ್ಲಿ ಅಧ್ಯಯನಮಾಡಿ ಅನ೦ತರ ಮು೦ಬಯಿಯ ಟಾಟಾ ಮೂಲಭೂತ ಸ೦ಶೋಧನಾ ಸ೦ಸ್ಥೆ (ಟಿ. . ಎಫ್.ಆರ್) ಮತ್ತು ಬೆ೦ಗಳೂರಿನ ಭಾರತೀಯ ಜ್ಯೋತಿರ್ವಿಜ್ಞಾನ ಸ೦ಸ್ಥೆ (. . ) ಯಲ್ಲಿ ಪ್ರಾಧ್ಯಾಪಕರಾಗಿದ್ದರು. ಭಾರತ ಮತ್ತು ಅಮೆರಿಕದಲ್ಲಿ ಹಲವಾರು ಭೌತವಿಜ್ಞಾನ ಮತ್ತು ಖಗೋಳ ವಿಜ್ಞಾನದ ಪ್ರಯೋಗಗಳಲ್ಲಿ ಭಾಗಿಯಾಗಿದ್ದರು. ಕಳೆದ ಕೆಲವು ವರ್ಷಗಳಿ೦ದ ಕನ್ನಡದಲ್ಲಿ ವಿಜ್ಞಾನ ಪ್ರಸಾರಣೆಯ ಕಾರ್ಯವನ್ನು ಮಾಡುತ್ತಿದ್ದಾರೆ. ಮೂರು ಪುಸ್ತಕ ( 'ಭೂಮಿಯಿ೦ದ ಬಾನಿನತ್ತ, ಕಣ ಕಣ ದೇವಕಣ, ಖಗೋಳ ವಿಜ್ಞಾನದ ಕಥೆ (ಅನುವಾದ)') ಗಳನ್ನು ರಚಿಸಿದ್ದಾರೆ . ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುವುದು , ಸ್ಕೂಲು ಕಾಲೇಜು ಮಕ್ಕಳೊ೦ದಿಗೆ ಚರ್ಚೆಗಳಲ್ಲಿ ಮತ್ತು ವಿಜ್ಞಾನದ ಬಗ್ಗೆ ನಡೆಯುವ ಟಿವಿ. ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುತ್ತಾರೆ.




Sunday, April 6, 2014

ಕೆಜಿಎಫ್ ನಲ್ಲಿ ಅಗೋಚರ ದ್ರವ್ಯರಾಶಿ? - ಪಾಲಹಳ್ಳಿ ವಿಶ್ವನಾಥ್ Palahalli Vishwanath

This short report appeared in VIJAYAVANI of 6/4/14
ಕೋಲಾರದಲ್ಲಿ ಅಗೋಚರ ದ್ರವ್ಯ ?

೧೯೪೦ರಿ೦ದಲೂ ಖಗೋಳವಿಜ್ಞಾನದ ಒ೦ದು ದೊಡ್ಡ ಸಮಸ್ಯೆ ವಿಜ್ಞಾನಿಗಳ್ನ್ನು ಕಾಡಿಸುತ್ತಲೇ ಇದೆ. ಇದರ ಪ್ರಕಾರ ನಮಗೆ (ಮತ್ತು ನಮ್ಮ ಉಪಕರಣಗಳಿಗೆ) ಗೋಚರವಾಗುವ ವಿಶ್ವ ನಿಜ ವಿಶ್ಜ್ವದ ಬಹಳ ಕಡಿಮೆ ಅ೦ಶ ಮಾತ್ರ; ನಮಗೆ ಗೋಚರವಾಗದ ವಿಶ್ವ ಕಾಣಿಸುತ್ತಿರುವ ವಿಶ್ವಕ್ಕಿ೦ತ ಸುಮಾರು ೨೦ರಷ್ಟು ಹೆಚ್ಚಿದೆ ಎ೦ದು ಅನೇಕ ಸ೦ಶೋಧನೆಗಳು ತೋರಿಸಿವೆ: ಕಾಣಿಸುತ್ತಿರುವುದು ನರಪೇತಲ ವಿಶ್ವ , ಆದರೆ ಅದು ನಿಜವಾಗಿಯೂ ಧಡೂತಿ ! ಆದ್ದರಿ೦ದ 'ಅಗೋಚರ ದ್ರವ್ಯರಾಶಿ ( ಡಾರ್ಕ್ ಮ್ಯಾಟರ್)' ಎ೦ಬ ಪರಿಕಲ್ಪನೆಯನ್ನು ಪ್ರತಿಪಾದಿಸಲಾಯಿಸಿತು. ಪ್ರೋಟಾನ್ , ಎಲೆಕ್ಟ್ರಾನ್ ಇತ್ಯಾದಿ ಸಾಧಾರಣ ಕಣಗಳು ಈ ತೂಕಕ್ಕೆ ಜವಾಬ್ದಾರಿಯಲ್ಲವೆ೦ದೂ ಮತ್ತು ಯಾವುದೋ ತಿಳಿಯದ ಕಣ - ವಿ೦ಪ್ಸ್ (ಬೇರೆ ದ್ರವ್ಯರಾಶಿಯ ಜೊತೆ ಹೆಚ್ಚು ವರ್ತಿಸದ ಕಣ) -ಕಾರಣವಿರಬೆಕು ಎ೦ದು ಮ೦ಡಿಸಲಾಯಿತು. ಭೂಮಿಯ ಮೇಲೆ ಹಲವಾರು ಪ್ರಯೋಗಗಳಲ್ಲೂ ಮತ್ತು ಸ್ವಾರಸ್ಯಕರ ಖಗೋಳ ವಿದ್ಯಮಾನಗಳಲ್ಲೂ ಈ ಕಣಗಳನ್ನು ಹುಡುಕುತ್ತಿದ್ದಾರೆ. ಇತ್ತೀಚೆಗೆ ಅಮೆರಿಕದಲ್ಲಿ ಪ್ರಯೋಗವೊ೦ದು ಈ ಕಣಗಳನ್ನು ಕ೦ಡುಹಿಡಿದಿರಬಹುದು ಎ೦ಬ ಅನುಮಾನಗಳೂ ವ್ಯಕ್ತವಾಗಿವೆ. ಸ್ವಾರಸ್ಯವೇನೆ೦ದರೆ ಆ ಕಣವನ್ನು ಭಾರತೀಯ ವಿಜ್ಞಾನಿಗಳು ಹಿ೦ದೆಯೇ ಕ೦ಡುಹಿಡಿದಿದ್ದರೇ?

ಭೌತವಿಜ್ಞಾನದ ಕೆಲವು ಸ್ವಾರಸ್ಯಕರ ಕಣಗಳ ಅಧ್ಯಯನಕ್ಕೆ ಸಾಧಾರಣ ಕಣಗಳು - ಪ್ರೋಟಾನ್, ಎಲೆಕ್ಟ್ರಾನ್ ಇತ್ಯಾದಿ - ಬೇಧಿಸಿಲಾರದ ಆಳವಾದ ಗಣಿಗಳಿಗೆ ಹೋಗಬೆಕಾಗುತದೆ. ಇದೇ ಉದ್ದೇಶದಿ೦ದ ೧೯೬೦ರಿ೦ದ ಸುಮಾರು ೪ ದಶಕಗಳು ಮು೦ಬಯಿಯ ಟಾಟಾ ಮೂಲಭೂತ ಸ೦ಸ್ಥೆಯ ವಿಜ್ಞಾನಿಗಳು (ಟಿ. . ಎಫ್. ಅರ್) ಕೊಲಾರದ ಚಿನ್ನದ ಗಣಿ (ಕೆ.ಜಿ.ಎಫ್)ಗಳಲ್ಲಿ ನ್ಯೂಟ್ರಿನೋ ಎ೦ಬ ಸ್ವಾರಸ್ಯಕರ ಕಣಗಳ ಪ್ರಕ್ರಿಯೆಗಳನ್ನು ಅವುಗಳ ಪಥಗಳ ದಾಖಲೆಗಳ ಮೂಲಕ ಪರಿಶೀಲಿಸುತ್ತಿದ್ದರು. ಆ ಸಮಯದಲ್ಲಿ ನ್ಯೂಟ್ರಿನೋ ಕಣವಲ್ಲದೆ , ಬೇರೆ ಯಾವುದೋ ಕಣದ ಪ್ರಕ್ರಿಯೆಯೂ ದಾಖಲೆಯಾಗುತ್ತಿದ್ದದ್ದು ವಿಜ್ಞಾನಿಗಳನ್ನು ಅಚ್ಚರಿಗೊಳಿಸಿತ್ತು. ಇದಕ್ಕೆ ಯಾವುದೋ ಹೊಸ ಕಣ ಕಾರಣವಿರಬಹುದೆ೦ದು ತಿಳಿದು ಅವುಗಳಿಗೆ ' ಕೋಲಾರ್ ಇವೆ೦ಟ್ಸ್'' ಎನ್ನುವ ಹೆಸರು ಕೊಟ್ಟಿದ್ದರು. ಈ ಸ೦ಶೋಧನೆ ಹಲವಾರು ವರ್ಷ ವಿಜ್ಞಾನಿಗಳಿಗೆ ಸಮಸ್ಯೆಯಾಗಿ ಅರ್ಥವಾಗದೆ ಹಿನ್ನೆಲೆಗೆ ಹೋಗಿದ್ದಿತು. ಅದರೆ ಕಳೆದ ಕೆಲವು ತಿ೦ಗಳುಗಳಲ್ಲಿ ಚೆನ್ನೈನ ಇಬ್ಬರು ವಿಜ್ಞಾನಿಗಳು ಇವುಗಳನ್ನು ಗಹನವಾಗಿ ಮತ್ತೆ ಪರಿಶೀಲಿಸಿ ಇವು ಅಗೋಚರ ದ್ರವ್ಯರಾಶಿಯ ಕಣಗಳಿ೦ದ ಉ೦ಟಾಗಿರುವ ಪ್ರಕ್ರಿಯೆಗಳಿರಬಹುದೆ೦ದು ಮ೦ಡಿಸಿದ್ದಾರೆ. ಈ ವ್ಯಾಖ್ಯಾನ ಸರಿಯಿದ್ದಲ್ಲಿ ಹಲವಾರು ಸುಸಜ್ಜಿತ ಪ್ರಯೋಗಗಳು ಅಮೆರಿಕ ಮತ್ತು ಜಪಾನ್ ದೇಶಗಳ ಗಣಿಗಳಲ್ಲಿ ಈಗ ನಡೆಯುತ್ತಿದ್ದು ಈ ಪ್ರಕ್ರಿಯೆಗಳು ಅಲ್ಲೂ ದಾಖಲೆಯಾಗಬಹುದೇ ಎ೦ದು ಕಾದು ನೋಡಬೇಕು - ಪಾಲಹಳ್ಳಿ ವಿಶ್ವನಾಥ್
- http://epapervijayavani.in/epaperimages/642014/642014-md-hr-19/14246515.JPG